ನವದೆಹಲಿ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಜಾರಿ ಇನ್ಯಾವಾಗ?
ನವದೆಹಲಿ, ಫೆಬ್ರವರಿ.12: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೋಷಿಗಳಿಗೆ ಗಲ್ಲುಶಿಕ್ಷೆ ಇಂದಾಗುತ್ತೆ.. ನಾಳೆಯಾಗುತ್ತೆ.. ನಾಡಿದ್ದಾಗುತ್ತೆ ಎಂದು ಕಾದು ಕಾದು ರೋಸಿಹೋದ ನಿರ್ಭಯಾ ತಾಯಿ ಆಶಾ ದೇವಿ ಬುಧವಾರ ದೆಹಲಿ ಹೈಕೋರ್ಟ್ ಎದುರಿಗೇ ಪ್ರತಿಭಟನೆಗೆ ಇಳಿದರು.
ನಾಲ್ವರು ದೋಷಿಗಳಿಗೆ ಗಲ್ಲುಶಿಕ್ಷೆ ಜಾರಿಗೊಳಿಸುವಲ್ಲಿ ಕೋರ್ಟ್ ವಿಳಂಬ ನೀತಿ ಅನುಸರಿಸುತ್ತಿರುವುದು ಏಕೆ ಎಂದು ನೊಂದ ನಿರ್ಭಯಾ ತಾಯಿ ಆಶಾ ದೇವಿ ಪ್ರಶ್ನೆ ಮಾಡಿದ್ದಾರೆ. ಇನ್ನು ಆಶಾ ದೇವಿ ಹೋರಾಟಕ್ಕೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಯೋಗಿತಾ ಭಯಾನಾ ಕೈ ಜೋಡಿಸಿದರು.
ಪುತ್ರಿಯ ಸಾವಿನ ನ್ಯಾಯಕ್ಕಾಗಿ ಸುಪ್ರೀಂಗೆ ನಿರ್ಭಯ ತಾಯಿ ಅರ್ಜಿ
ಗಲ್ಲುಶಿಕ್ಷೆ ಜಾರಿಯಾಗುವ ಸಂದರ್ಭದಲ್ಲಿ ಪವನ್ ಕುಮಾರ್ ಗುಪ್ತಾ ತಮ್ಮ ಪರ ವಕೀರನ್ನು ಬದಲಾಯಿಸಿದ್ದಕ್ಕೆ ನ್ಯಾಯಮೂರ್ತಿ ಧರ್ಮೇಂದ್ರ ರಾಣಾ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂಥ ಸಂದರ್ಭದಲ್ಲಿ ವಕೀಲರನ್ನು ಬದಲಾಯಿಸುವಂತೆ ನಿಮಗೆ ಹೇಳಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದರು.
ಡೆತ್ ವಾರಂಟ್ ಜಾರಿಗೆ ಸೂಚಿಸಿದ್ದ ಸುಪ್ರೀಂಕೋರ್ಟ್:
ನಾಲ್ವರು ದೋಷಿಗಳ ಗಲ್ಲುಶಿಕ್ಷೆಗೆ ಡೆತ್ ವಾರಂಟ್ ಹೊರಡಿಸುವಂತೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಹೊಸದಾಗಿ ಗಲ್ಲುಶಿಕ್ಷೆ ದಿನಾಂಕ ನಿಗದಿಪಡಿಸುವ ಕೆಲಸವು ಹೈಕೋರ್ಟ್ ಗೆ ಬಿಟ್ಟಿದ್ದು ಎಂದು ಹೇಳಿತ್ತು. ಇದರ ಬೆನ್ನಲ್ಲೇ ಬುಧವಾರ ನಿರ್ಭಯಾ ತಾಯಿ ಆಶಾದೇವಿ ಪಟಿಯಾಲಾ ಹೈಕೋರ್ಟ್ ಎದುರು ಪ್ರತಿಭಟನೆ ನಡೆಸಿದ್ದಾರೆ.
ಈ ಮೊದಲು ಜನವರಿ.22ರ ಬೆಳಗ್ಗೆ 6 ಗಂಟೆಗೆ ನಾಲ್ವರು ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಹೈಕೋರ್ಟ್ ದಿನಾಂಕ ನಿಗದಿಪಡಿಸಿತ್ತು. ನಂತರದಲ್ಲಿ ತನ್ನ ಆದೇಶಕ್ಕೆ ತಡೆ ನೀಡಿದ್ದ ಕೋರ್ಟ್, ಫೆಬ್ರವರಿ.01ರಂದು ಗಲ್ಲುಶಿಕ್ಷೆ ವಿಧಿಸುವುದಕ್ಕೆ ಡೆತ್ ವಾರಂಟ್ ಹೊರಡಿಸಿತ್ತು. ಆದರೆ, ಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನ ಅರ್ಜಿ ಬಾಕಿ ಇರುವಂತೆ ಗಲ್ಲುಶಿಕ್ಷೆ ಜಾರಿಗೊಳಿಸಬಾರದು ಎಂದು ದೋಷಿಗಳ ಪರ ವಕೀಲರು ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಒಂದು ವಾರದ ಅವಧಿಯಲ್ಲಿ ಎಲ್ಲ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸುವಂತೆ ಖಡಕ್ ಸೂಚನೆ ನೀಡಿತ್ತು.