ನಿರ್ಭಯಾ ಅತ್ಯಾಚಾರಿಗಳಿಗೆ ಕ್ಷಮಾದಾನ ನೀಡಲ್ಲ ಎಂದ ರಾಷ್ಟ್ರಪತಿ
ದೆಹಲಿ, ಡಿಸೆಂಬರ್.06: ದೇಶದಲ್ಲಿ ಮಹಿಳಾ ದೌರ್ಜನ್ಯ, ಅತ್ಯಾಚಾರಕ್ಕೆ ಕಡಿವಾಣ ಹಾಕುವಂತಾ ಮಹತ್ವದ ನಿರ್ಧಾರಗಳು ಹೊರ ಬೀಳುತ್ತಿವೆ. ತೆಲಂಗಾಣದಲ್ಲಿ ಪಶುವೈದ್ಯೆ ಅತ್ಯಾಚಾರಿಗಳ ಮೇಲೆ ಎನ್ ಕೌಂಟರ್ ನಡೆಸಿದ ಬೆನ್ನಲ್ಲೇ ರಾಷ್ಟ್ರಪತಿಗಳು ಮತ್ತೊಂದು ಬಿಗ್ ಶಾಕ್ ಕೊಟ್ಟಿದ್ದಾರೆ.
ದೇಶದಲ್ಲಿ ಅತ್ಯಾಚಾರಿಗಳಿಗೆ ಯಾವುದೇ ಕಾರಣಕ್ಕೂ ಕ್ಷಮಾದಾನ ನೀಡಲು ಆಗುವುದಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಆ ಮೂಲಕ ದೆಹಲಿಯಲ್ಲಿ ನಿರ್ಭಯಾ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಯ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ನಿರ್ಭಯಾ ಅತ್ಯಾಚಾರಿಗೆ ತಿಹಾರ್ ಜೈಲಿನಲ್ಲಿ ಗಲ್ಲುಶಿಕ್ಷೆ ಅಸಾಧ್ಯ!
ಸುಪ್ರೀಂಕೋರ್ಟ್ ವಿಧಿಸಿರುವ ಮರಣದಂಡನೆ ಆದೇಶದಿಂದ ಮುಕ್ತಿ ಕೊಡಬೇಕು. ತನಗೆ ಕ್ಷಮದಾನ ನೀಡಬೇಕೆಂದು ನಿರ್ಭಯಾ ಅತ್ಯಾಚಾರ ಆರೋಪಿ ವಿನಯ್ ಶರ್ಮಾ ಅರ್ಜಿ ಸಲ್ಲಿಸಿದ್ದನು. ದೆಹಲಿಯ ಲೆಫ್ಟಿನೆಂಟ್ ಗೌರ್ವನರ್ ಹಾಗೂ ಕೇಂದ್ರ ಗೃಹ ಸಚಿವಾಲಯ ಈ ಅರ್ಜಿಯನ್ನು ತಿರಸ್ಕರಿಸಿದ್ದು, ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗಿತ್ತು.
ಕ್ಷಮಾದಾನ ಅರ್ಜಿ ಸ್ವೀಕರಿಸುವುದಿಲ್ಲ ಎಂದ ರಾಷ್ಟ್ರಪತಿ
ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ವಿನಯ್ ಶರ್ಮಾ ಸಲ್ಲಿಸಿದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದಾರೆ. ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಕ್ಷಮಾದಾನ ನೀಡುವ ಸಂಸ್ಕೃತಿಯೇ ಒಳ್ಳೆಯದಲ್ಲ. ನಾನು ಕ್ಷಮಾದಾನ ಅರ್ಜಿಯನ್ನು ಸ್ವೀಕರಿಸುವುದಿಲ್ಲ ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.
ಮರುಪರಿಶೀಲನೆ ಸಂಸತ್ ನಲ್ಲೇ ಆಗಲಿ- ಕೋವಿಂದ್
ಆರೋಪಿ ವಿನಯ್ ಶರ್ಮಾಗೆ ಕ್ಷಮಾದಾನ ನೀಡಬೇಕೋ ಬೇಡವೋ ಎಂಬುದನ್ನು ಸಂಸತ್ ತೀರ್ಮಾನಿಸಲಿ. ಬೇಕಿದ್ದಲ್ಲಿ ಮತ್ತೊಮ್ಮ ಕ್ಷಮಾದಾನ ಅರ್ಜಿಯನ್ನು ಮರುಪರಿಶೀಲನೆ ಮಾಡಲಿ. ಆದರೆ, ನಾನು ಕ್ಷಮಾದಾನ ನೀಡಲು ಸಾಧ್ಯವಿಲ್ಲ. ಅತ್ಯಾಚಾರದಂತಾ ದುಷ್ಟಕಾರ್ಯಗಳನ್ನು ಮಾಡುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ನ್ಯಾಯ ಸಿಗುವುದು ಯಾವಾಗ ಎಂದಿದ್ದ ತಾಯಿ?
ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಿರ್ಭಯಾ ತಾಯಿ ಆಶಾದೇವಿ, ತಮ್ಮ ಮಗಳ ಸಾವಿಗೆ ಇನ್ಯಾವಾಗ ನ್ಯಾಯ ಸಿಗುತ್ತದೆಯೋ ಏನೋ. ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಹಂಬಲಿಸುತ್ತಿದ್ದೇವೆ. ಪೊಲೀಸರು ಹಾಗೂ ಕೋರ್ಟ್ ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಆರೋಪಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ.
ಹ್ಯಾಂಗ್ ಮ್ಯಾನ್ ಇಲ್ಲದೇ ಹೇಗೆ ಶಿಕ್ಷೆ?
ದೆಹಲಿಯ ತಿಹಾರ್ ಜೈಲಿನಲ್ಲಿ ನಿರ್ಭಯಾ ಪ್ರಕರಣದ ಆರೋಪಿಗಳನ್ನು ಇರಿಸಲಾಗಿದೆ. ಸುಪ್ರೀಂಕೋರ್ಟ್ ಸೂಚನೆ ನೀಡುವುದೊಂದೇ ತಡ, ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಆದರೆ, ತಿಹಾರ್ ಜೈಲಿನ್ಲಿ ಹ್ಯಾಂಗ್ ಮ್ಯಾನ್ ಗಳೇ ಇಲ್ಲ ಎಂದು ಇತ್ತೀಚಿಗಷ್ಟೇ ಹಿರಿಯ ಜೈಲಾಧಿಕಾರಿಗಳು ಹೇಳಿದ್ದರು. ಈಗಿನ ಪರಿಸ್ಥಿತಿಯಲ್ಲಿ ಯಾರನ್ನೂ ತಾತ್ಕಾಲಿಕವಾಗಿ ಹ್ಯಾಂಗ್ ಮ್ಯಾನ್ ಆಗಿ ನೇಮಿಸಿಕೊಳ್ಳಲು ಆಗುತ್ತಿಲ್ಲ. ಬೇರೆ ಜೈಲಿನಲ್ಲಿರುವ ಹ್ಯಾಂಗ್ ಮ್ಯಾನ್ ಗಳ ಬಗ್ಗೆ ಪ್ರಯತ್ನಿಸಿದರೂ, ಯಾರೊಬ್ಬರೂ ಸಿಗುತ್ತಿಲ್ಲ ಎಂದು ಹೇಳಿದ್ದರು.
ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಸಿದ್ಧವೆಂದು ಪತ್ರ
ಹಿಮಾಚಲ ಪ್ರದೇಶ ಶಿಮ್ಲಾ ಮೂಲದ ರವಿಕುಮಾರ್ ಎಂಬುವವರು ಈ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದರು. ದೆಹಲಿ ತಿಹಾರ್ ಜೈಲಿನಲ್ಲಿ ಹ್ಯಾಂಗ್ ಮ್ಯಾನ್ ಗಳಿಲ್ಲ. ಇದರಿಂದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಈ ಕೊರತೆ ನೀಗಿಸಲು ನಾನು ಸಿದ್ಧನಿದ್ದೇನೆ. ನನ್ನನ್ನು ತಿಹಾರ್ ಜೈಲಿನ ತಾತ್ಕಾಲಿಕ ಹ್ಯಾಂಗ್ ಮ್ಯಾನ್ ಆಗಿ ನೇಮಿಸುವಂತೆ ರವಿಕುಮಾರ್, ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದರು. ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದು ಏಳು ವರ್ಷಗಳೇ ಗತಿಸಿ ಹೋಗಿದೆ. ಇಷ್ಟು ದಿನ ಕಳೆದರೂ ಅಪರಾಧಿಗಳಿಗೆ ಇಂದಿಗೂ ಶಿಕ್ಷೆ ಆಗಿಲ್ಲ. ಆದಷ್ಟು ಬೇಗ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಬೇಕು. ನೊಂದ ಹೆಣ್ಣುಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ರವಿಕುಮಾರ್ ತಮ್ಮ ಪತ್ರದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಮಾಡಿಕೊಂಡಿದ್ದರು.