ನಿರ್ಭಯಾ ಅತ್ಯಾಚಾರ ಪ್ರಕರಣ: ಅಕ್ಷಯ್ ಠಾಕೂರ್ ಕ್ಷಮಾದಾನ ಅರ್ಜಿ ವಜಾ
ನವದೆಹಲಿ, ಫೆಬ್ರವರಿ.05: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೋಷಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬುಧವಾರ ತಿರಸ್ಕರಿಸಿದ್ದಾರೆ.
ಕಳೆದ ಫೆಬ್ರವರಿ.01ರಂದು ಎರಡನೇ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಅದೇ ದಿನ ಮೂರನೇ ಅಪರಾಧಿ ಅಕ್ಷಯ್ ಠಾಕೂರ್ ತನಗೆ ಗಲ್ಲುಶಿಕ್ಷೆಯಿಂದ ಕ್ಷಮಾನಾದ ನೀಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಅರ್ಜಿ ಸಲ್ಲಿಸಿದ್ದನು.
ರಾಷ್ಟ್ರಪತಿಗಳ ತೀರ್ಮಾನದಿಂದ ಮೂವರು ಅಪರಾಧಿಗಳ ಕ್ಷಮಾದಾನ ಅರ್ಜಿ ವಜಾಗೊಂಡಂತೆ ಆಗಿದೆ. ಮುಕೇಶ್ ಸಿಂಗ್, ವಿನಯ್ ಶರ್ಮಾ ಹಾಗೂ ಅಕ್ಷಯ್ ಠಾಕೂರ್ ಸಲ್ಲಿಸಿದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ವಜಾಗೊಳಿಸಿದ್ದಾರೆ.
7 ದಿನಗಳ ಗಡುವು ವಿಧಿಸಿರುವ ದೆಹಲಿ ಹೈಕೋರ್ಟ್:
ದೆಹಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಫೆಬ್ರವರಿ.01ರಂದೇ ಮರಣದಂಡನೆ ವಿಧಿಸಬೇಕಿತ್ತು. ಆದರೆ, ನಾಲ್ವರ ಪೈಕಿ ಒಬ್ಬ ಅಪರಾಧಿಯ ಕ್ಯುರೇಟಿವ್ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಇರುವಾಗ ಉಳಿದ ದೋಷಿಗಳಿಗೂ ಗಲ್ಲುಶಿಕ್ಷೆ ವಿಧಿಸುವಂತಿಲ್ಲ. ಈ ಹಿನ್ನೆಲೆ 7 ದಿನಗಳಲ್ಲೇ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸುವಂತೆ ಬುಧವಾರ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಮೂರನೇ ಅಪರಾಧಿ ಅಕ್ಷಯ್ ಠಾಕೂರ್ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದು, ಇನ್ನೊಬ್ಬ ದೋಷಿ ಪವನ್ ಕುಮಾರ್ ಕ್ಯುರೇಟಿವ್ ಅರ್ಜಿಯು ಬಾಕಿ ಉಳಿದಿದೆ.