ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ಇಂಡಿಯಾ ವಿಮಾನವನ್ನು ವಾಪಾಸ್ ಇಳಿಸಿದ ಬಾವಲಿ!
ನವದೆಹಲಿ, ಮೇ 28: ದೆಹಲಿಯಿಂದ ಪ್ರಯಾಣವನ್ನು ಆರಂಭಿಸಿದ ಏರ್ಇಂಡಿಯಾ ವಿಮಾನ ವಿಚಿತ್ರ ಕಾರಣಕ್ಕೆ ಅರ್ಧ ಗಂಟೆಗಳ ಕಾಲ ಪ್ರಯಾಣಿಸಿದ ನಂತರ ಮತ್ತೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಆದ ಘಟನೆ ಗುರುವಾರ ನಡೆದಿದೆ. ಹಾರಾಟ ನಡೆಸಿದ ವಿಮಾನದಲ್ಲಿ ಬಾವಲಿಯೊಂದು ಪತ್ತೆಯಾದ ಕಾರಣ ಏರ್ ಟ್ರಾಫಿಕ್ ಕಂಟ್ರೋಲ್ಗೆ ಮಾಹಿತಿಯನ್ನು ವಿಮಾನವನ್ನು ವಾಪಾಸ್ ಇಳಿಸಲಾಯಿತು.
ಭಾರತೀಯ ಕಾಲಮಾನ ಮುಂಜಾನೆ 2:20ರ ವೇಳೆಗೆ ದೆಹಲಿಯಿಂದ ನ್ಯೂಯಾರ್ಕ್ಗೆ ವಿಮಾನ ತನ್ನ ಹಾರಾಟವನ್ನು ಆರಂಭಿಸಿತ್ತು. ಆದರೆ ಅರ್ಧ ಗಂಟೆಗಳ ಕಾಲ ಪ್ರಯಾಣಿಸಿದ ನಂತರ ಹಾರಾಟವನ್ನು ನಡೆಸಿದ ವಿಮಾನದಲ್ಲಿ ಬಾವಲಿ ಪತ್ತೆಯಾಗಿತ್ತು. ನಂತರ ವಿಮಾನದ ಕ್ಯಾಪ್ಟನ್ ತನ್ನ ದೆಹಲಿ ವಿಮಾನ ನಿಲ್ದಾಣಕ್ಕೆ ವಾಪಾಸ್ ತೆರಳುವ ನಿರ್ಧಾರ ತೆಗೆದುಕೊಂಡರು.
ಜೂ.30ರವರೆಗೆ ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ವಿಸ್ತರಣೆ
ಈ ಘಟನೆಯ ಬಗ್ಗೆ ನಾಗರೀಕ ವಿಮಾನಯಾನದ ನಿರ್ದೇಶನಾಲಯ(ಡಿಜಿಸಿಎ) ನೀಡಿದ ಹೇಳಿಕೆಯನ್ನು ಎಎನ್ಐ ಉಲ್ಲೇಖಿಸಿದೆ. "ಎಐ-105 ವಿಮಾನ ದೆಹಲಿ ವಿಮಾನ ನಿಲ್ದಾಣದಿಂದ ತೆರಳಿದ ಅರ್ಧ ಗಂಟೆಯ ಬಳಿಕ ತುರ್ತು ಪರಿಸ್ಥಿತಿ ಘೋಷಿಸಿದ ನಂತರ ಮರಳಿತು. ಪ್ರಯಾಣ ಆರಂಭಿಸಿದ ನಂತರ ವಿಮಾನದ ಒಳಗಡೆ ಬಾವಲಿ ಇರುವುದು ಸಿಬ್ಬಂದಿಗಳ ಗಮನಕ್ಕೆ ಬಂದಿತ್ತು. ಬಳಿಕ ಅದನ್ನು ಹಿಡಿದು ಹೊರಗೆ ಕೊಂಡೊಯ್ಯಲಾಯಿತು. 3:55 ವಿಮಾನ ಸುರಕ್ಷಿತವಾಗಿ ಇಳಿದಿತ್ತು" ಎಂದು ಡಿಜಿಸಿಎ ಹೇಳಿಕೆ ನೀಡಿದೆ.
ಇನ್ನು ಬಾವಲಿ ವಿಮಾನದಲ್ಲಿ ಇರುವುದು ಪತ್ತೆಯಾದಾಗ ಮೃತಪಟ್ಟಿತ್ತು ಎಂದು ಕೂಡ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಮೃತಪಟ್ಟ ಬಾವಲಿಯನ್ನು ವಿಮಾನದಿಂದ ಹೊರತೆಗೆದ ನಂತರ ಸಂಪೂರ್ಣವಾಗಿ ವಿಮಾನವನ್ನು ಫ್ಯುಮಿಗೇಶನ್ ಮೂಲಕ ಸ್ವಚ್ಚಗೊಳಿಸಲಾಯಿತು ಎಂದು ತಿಳಿಸಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಏರ್ಇಂಡಿಯಾದ ಫ್ಲೈಟ್ ಸೇಫ್ಟಿ ಡಿಪಾರ್ಟ್ಮೆಂಟ್ ತನಿಖೆಯನ್ನು ನಡೆಸಲಿದೆ ಎಂದು ವರದಿ ಹೇಳಿದೆ. ಬಳಿಕ ಪ್ರಯಾಣಿಕರಿಗೆ ಏರ್ಇಂಡಿಯಾ ಮತ್ತೊಂದು ಏಐ-105 ವಿಮಾನದ ವ್ಯವಸ್ಥೆಯನ್ನು ಮಾಡಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ. ಭಾರತೀಯ ಕಾಲಮಾನ ಬೆಳಗ್ಗೆ 11:35ಕ್ಕೆ ವಿಮಾನ ನ್ಯೂಯಾರ್ಕ್ನಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ವರದಿಯಾಗಿದೆ.