ಜಾಮಿಯಾ ವಿವಿ ಎದುರು ಪ್ರತಿಭಟನೆ ಮಾಡಿದ್ದು ವಿದ್ಯಾರ್ಥಿಗಳಷ್ಟೇ ಅಲ್ಲ
ದೆಹಲಿ, ಡಿಸೆಂಬರ್.18: ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಕಳೆದ ಡಿಸೆಂಬರ್.15ರ ಬಾನುವಾರ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಬಳಿ ನಡೆದ ಸಂಘರ್ಷ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ.
ದೆಹಲಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ ಹಾಗೂ ಅಶ್ವವಾಯು ಸಿಡಿಸಿದ್ದು, ಇಡೀ ವಿದ್ಯಾರ್ಥಿ ಸಮೂಹವನ್ನೇ ಕೆರಳಿಸಿದೆ. ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿ ಕೆರಳಿಸಿದ ಆರೋಪದ ಮೇಲೆ ಕಾಂಗ್ರೆಸ್ ನ ಮಾಜಿ ಶಾಸಕರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
"ಪಾಕಿಸ್ತಾನ ಪ್ರಜೆಗಳಿಗೆ ಕಾಂಗ್ರೆಸ್ ಭಾರತೀಯ ಪೌರತ್ವ ನೀಡುತ್ತಾ'?
ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಓಕ್ಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆಸಿಫ್ ಮೊಹಮ್ಮದ್ ಖಾನ್ ವಿರುದ್ಧ ಜಾಮಿಯಾ ನಗರ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ಆಸಿಫ್ ಜೊತೆ ಐದು ಮಂದಿ ಹೆಸರನ್ನೂ ದಾಖಲಿಸಲಾಗಿದೆ.
"ಸುಖಾಸುಮ್ಮನೆ ನನ್ನ ವಿರುದ್ಧ ಎಫ್ಐಆರ್ ಹಾಕಿದ್ದಾರೆ"
ಪೊಲೀಸರ ಮೇಲೆ ಕಲ್ಲುತೂರಾಟ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ. ಆದರೆ, ಪೊಲೀಸರು ಮಾಡಿರುವ ಆರೋಪವನ್ನು ಮಾಜಿ ಶಾಸಕ ಆಸಿಫ್ ಮೊಹಮ್ಮದ್ ಖಾನ್ ನಿರಾಕರಿಸಿದ್ದಾರೆ. ನಾವು ಜನನಾಯಕರೇ ಹೊರತೂ ಗಲಭೆಕೋರರಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ನಾನು ಮೊದಲೇ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದ್ದಾರೆ.
ಜಾಮಿಯಾ ವಿವಿ ಬಳಿ ವಿದ್ಯಾರ್ಥಿಗಳಷ್ಟೇ ಪ್ರತಿಭಟನೆ ನಡೆಸಿರಲಿಲ್ಲ
ಇನ್ನು, ಜಾಮಿಯಾ ವಿಶ್ವವಿದ್ಯಾಲಯದ ಬಳಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಷ್ಟೇ ಇರಲಿಲ್ಲ. ಕೆಲವು ಉದ್ರಿಕ್ತರ ಗುಂಪು ವಿದ್ಯಾರ್ಥಿಗಳ ಜೊತೆ ಸೇರಿಕೊಂಡು ಹಿಂಸಾಚಾರ ನಡೆಸಿದ್ದಾರೆ. ಈ ವೇಳೆ ಕನಿಷ್ಠ ಮೂರು ಬಸ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರ ಮೇಲೆಯೇ ಉದ್ರಿಕ್ತರ ಗುಂಪು ಕಲ್ಲುತೂರಾಟ ನಡೆಸಿದೆ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿ, ಅಶ್ವವಾಯು ಸಿಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಎನ್ಆರ್ಸಿಗೆ ಅರ್ಹರಲ್ಲದವರೆಲ್ಲರೂ ದೇಶದಿಂದ ಹೊರಕ್ಕೆ: ಅಮಿತ್ ಶಾ
ಕ್ರಿಮಿನಲ್ ಬ್ಯಾಗ್ರೌಂಡ್ ಹೊಂದಿರುವವರ ಕೈಗೆ ಕೋಳ
ದೆಹಲಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟಿನೆ ನಡೆಸಿದವರಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೂ ಇದ್ದರು ಎಂಬ ವಿಚಾರ ಇದೀಗ ಬಯಲಾಗಿದೆ. ಅಪರಾಧ ಹಿನ್ನೆಲೆಯುಳ್ಳ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಾಮಿಯಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ 6 ಮಂದಿ ಹಾಗೂ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ 4 ಮಂದಿಯನ್ನು ಬಂಧಿಸಲಾಗಿದೆ.
ಜಾಮಿಯಾ ನಗರ ಠಾಣೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ದಿನೇಶ್, ದಿಲ್ಶಾದ್, ಮೊಹದ್ ಹನೀಫ್, ಸಾರಿಫ್ ಅಹ್ಮದ್, ಸಮೀರ್ ಅಹ್ಮದ್, ಮೊಹದ್ ದಾನಿಶ್ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು, ನ್ಯೂ ಫ್ರೆಂಡ್ಸ್ ಕಾಲೋನಿ ಠಾಣೆ ಪೊಲೀಸರು ಇನ್ನಾಲ್ ಹುಸೇನ್, ಅನ್ವರ್ ಕಾಲಾ, ಯೂನಿಸ್ ಹಾಗೂ ಜುಮ್ಮಾನ್ ಎಂಬ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಅಖಿಲ್ ಗೊಗಯ್ ರನ್ನು ಬಂಧಿಸಿದ ಎನ್ಐಎ ಅಧಿಕಾರಿಗಳು
ದೆಹಲಿ, ಅಸ್ಸಾಂನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿದ್ದು, ನಂತರ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿತ್ತು. ಈ ಸಂಬಂಧ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ ಸಲಹೆಗಾರ ಅಖಿಲ್ ಗೊಗಯ್ ರನ್ನು ಬಂಧಿಸಲಾಗಿದೆ. ಡಿಸೆಂಬರ್.12ರಂದು ಅಸ್ಸಾಂ ಪೊಲೀಸರು ಬಂಧಿಸಿದ ಅಖಿಲ್ ಗೊಗಯ್ ರನ್ನು ಇದೀಗ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ವಶಕ್ಕೆ ಪಡೆದಿದೆ. ಬಂಧಿತರನ್ನು ದೆಹಲಿಗೆ ಕರೆತಂದಿರುವ ಎನ್ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಇನ್ನು, ಬಂಧಿತ ಆರೋಪಿ ಅಖಿಲ್ ಗೊಗಯ್ ವಿರುದ್ಧ ಐಪಿಸಿ 120 ಬಿ, 124 ಎ, 153 ಎ, 153 ಬಿ ಹಾಗೂ ಸೆಕ್ಷನ್ 18 ಮತ್ತು 39ರ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.