'ಮಲಯಾಳಂ' ಮಾತನಾಡಬೇಡಿ ಆದೇಶ ಹಿಂಪಡೆದ ದೆಹಲಿ ಆಸ್ಪತ್ರೆ
ನವದೆಹಲಿ, ಜೂನ್ 09: 'ಮಲಯಾಳಂ'ನಲ್ಲಿ ಮಾತನಾಡಬೇಡಿ, 'ಇಂಗ್ಲಿಷ್ 'ಮತ್ತು 'ಹಿಂದಿ'ಯಲ್ಲೇ ಮಾತನಾಡಬೇಕು ಎನ್ನುವ ಆದೇಶವನ್ನು ದೆಹಲಿ ಆಸ್ಪತ್ರೆ ಹಿಂಪಡೆದಿದೆ.
ದೆಹಲಿಯ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಗೋವಿಂದ್ ವಲ್ಲಭ್ ಪಂತ್ ಇನ್ಸ್ಟಿಟ್ಯೂಟ್ (ಜಿಐಪಿಎಂಇಆರ್) ತನ್ನ ಎಲ್ಲಾ ಶುಶ್ರೂಷಾ ಸಿಬ್ಬಂದಿಗೆ ಸಂವಹನಕ್ಕಾಗಿ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಬಳಸಬೇಕು, ಮಲಯಾಳಂನಲ್ಲಿ ಮಾತನಾಡಬಾರದು ಎಂದು ಆದೇಶ ನೀಡಲಾಗಿತ್ತು.
ಭಾರತದ ಸೀರಮ್ ಸಂಸ್ಥೆಯ ಹಿನ್ನಡೆ: ಕೋವಿಡ್ ಲಸಿಕೆಗಾಗಿ ಹಲವು ರಾಷ್ಟ್ರಗಳ ಪರದಾಟ
ನಡೆದಿದ್ದೇನು: ಕೆಲಸದ ಸ್ಥಳದಲ್ಲಿ ಬಹುತೇಕ ಮಂದಿ ಮಲಯಾಳಂ ಬಳಕೆ ಮಾಡುತ್ತಿದ್ದರು ಇದು ರೋಗಿಗಳಿಗೆ ಅರ್ಥವಾಗುತ್ತಿರಲಿಲ್ಲ, ಹೀಗಾಗಿ ಜಿಐಪಿಎಂಇಆರ್ಗೆ ದೂರು ದಾಖಲಾಗಿತ್ತು.
ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ಮಲಯಾಳಂ ಬಳಕೆ ಬೇಡ ಹಿಂದಿ ಅಥವಾ ಇಂಗ್ಲಿಷ್ ಬಳಕೆ ಮಾಡುವಂತೆ ಸೂಚಿಸಲಾಗಿತ್ತು.
''ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಹಾಗೂ ರೋಗಿಗಳು ಸ್ಥಳೀಯ ಭಾಷೆ ಬಳಕೆ ಮಾಡುವಂತೆ ಹೇಳಿ ದೂರುಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾಷೆಯಿಂದಾಗುವ ಗೊಂದಲಗಳ ನಿವಾರಣೆಗೆ ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಯಾವುದೇ ಸಿಬ್ಬಂದಿಗೂ ನೋವುಂಟು ಮಾಡುವ ಉದ್ದೇಶ ಆಗಿರಲಿಲ್ಲ. ಸುತ್ತೋಲೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆಂದು'' ನಿರ್ದೇಶಕರು ತಿಳಿಸಿದ್ದಾರೆ.
ರಾಹುಲ್ಗಾಂಧಿ ಆಕ್ರೋಶ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದರಾದ ಕೆ.ಸಿ.ವೇಣುಗೋಪಾಲ್, ಶಶಿ ತರೂರ್ ಸೇರಿದಂತೆ ಹಲವು ನಾಯಕರು ತಮ್ಮ ಟ್ವಿಟರ್ನಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದರು.
ಸಂವಹನಕ್ಕಾಗಿ ಮಲಯಾಳಂ ಬಳಸುವಂತಿಲ್ಲ
ಮಲಯಾಳಂ ಭಾಷೆಯ ಬಳಕೆಯ ವಿರುದ್ಧ ಜಿಐಪಿಎಂಇಆರ್ಗೆ ದೂರು ಬಂದಿದೆ. ಜಿಐಪಿಎಂಇಆರ್ನಲ್ಲಿ ಕೆಲಸದ ಸ್ಥಳಗಳಲ್ಲಿ ಸಂವಹನಕ್ಕಾಗಿ ಮಲಯಾಳಂ ಭಾಷೆಯನ್ನು ಬಳಸಲಾಗುತ್ತಿದೆ ಎಂಬ ಬಗ್ಗೆ ದೂರು ಬಂದಿತ್ತು. ಆದರೆ ಗರಿಷ್ಠ ರೋಗಿಗಳು ಮತ್ತು ಸಹೋದ್ಯೋಗಿಗಳು ಈ ಭಾಷೆಯನ್ನು ತಿಳಿದಿಲ್ಲ. ಇದರಿಂದ ಸಾಕಷ್ಟು ಅನನುಕೂಲತೆಗಳು ಉಂಟಾಗುತ್ತವೆ.
ಆದ್ದರಿಂದ ಸಂವಹನಕ್ಕಾಗಿ ಹಿಂದಿ ಮತ್ತು ಇಂಗ್ಲಿಷ್ ಅನ್ನು ಮಾತ್ರ ಬಳಸುವಂತೆ ಎಲ್ಲಾ ನರ್ಸಿಂಗ್ ಸಿಬ್ಬಂದಿಗೆ ನಿರ್ದೇಶಿಸಲಾಗಿದೆ. ಇಲ್ಲದಿದ್ದರೆ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಈ ಹಿಂದೆ ಜಿಐಪಿಎಂಇಆರ್ ಸುತ್ತೋಲೆ ಹೊರಡಿಸಿತ್ತು.
ಆದೇಶ ಮಲಯಾಳಂ ಮಾತನಾಡುವವರ ವಿರುದ್ಧ ಇರಲಿಲ್ಲ
ಆದೇಶವು ಮಲಯಾಳಂ ಮಾತನಾಡುವ ಸಿಬ್ಬಂದಿಗಳ ವಿರುದ್ಧವಾಗಿರಲಿಲ್ಲ. ಆದೇಶದ ಹಿಂದೆ ಯಾವುದೇ ದುರುದ್ದೇಶವೂ ಇಲ್ಲ. ಸುತ್ತೋಲೆಯನ್ನು ತಪ್ಪಾಗಿ ಆರ್ಥೈಸಲಾಗಿದೆ. ಈ ಕುರಿತು ಸ್ಪಷ್ಟನೆ ನೀಡಲು ನನಗೆ ಅವಕಾಶವನ್ನೂ ನೀಡಲಾಗಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹೇಳಿದ್ದಾರೆ.
ಆದೇಶ ಹಿಂಪಡೆದ ಆಸ್ಪತ್ರೆ
ವಿವಾದದ ಕಾವು ಹೆಚ್ಚುತ್ತಿದ್ದಂತೆ ಆಸ್ಪತ್ರೆಯ ಎಚ್ಚೆತ್ತುಕೊಂಡು ಆಡಳಿತ ಮಂಡಳಿಯ ಅಧಿಕಾರಿಗಳು ಇದೀಗ ಆದೇಶವನ್ನು ವಾಪಸ್ ಪಡೆದುಕೊಂಡಿದ್ದು, ತಮ್ಮ ಗಮನಕ್ಕೆ ಬಾರದೆ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಈ ಆದೇಶ ಹಿಂಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.