ಭಾರತದಲ್ಲೇ ಬೇಕಾದಷ್ಟು ರೂಪಾಂತರಗಳಿವೆ, ಬೇರೆ ದೇಶಗಳ ಮಾತೇಕೆ; ದೆಹಲಿ ಹೈಕೋರ್ಟ್
ನವದೆಹಲಿ, ಮೇ 19: ಸಿಂಗಪುರ ಕೊರೊನಾ ರೂಪಾಂತರ ಸೋಂಕು ಭಾರತದಲ್ಲಿ ಮೂರನೇ ಕೊರೊನಾ ಅಲೆಗೆ ಕಾರಣವಾಗಬಹುದು ಎಂದು ಮಂಗಳವಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಹೈಕೋರ್ಟ್, ಭಾರತದಲ್ಲೇ ಬೇಕಾದಷ್ಟು ರೂಪಾಂತರ ಕೊರೊನಾ ಮಾದರಿಗಳಿವೆ. ಸಿಂಗಪುರ ಅಥವಾ ಬೇರೆ ಯಾವುದೇ ದೇಶದ ರೂಪಾಂತರದ ಕುರಿತು ಮಾತನಾಡುವ ಅಗತ್ಯವಿಲ್ಲ ಎಂದು ದೆಹಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
"ಸಿಂಗಪುರದಲ್ಲಿ ಯಾವುದೇ ರೂಪಾಂತರ ಸೋಂಕು ಇಲ್ಲ ಎಂಬುದು ಸ್ಪಷ್ಟವಾಗಿದೆ. ಭಾರತದಲ್ಲಿ ಮೂರನೇ ಕೊರೊನಾ ಅಲೆ ಕುರಿತು ಬೇರೆ ದೇಶದ ಕುರಿತು ಮಾತನಾಡುವ ಅಗತ್ಯವಿಲ್ಲ. ನಮ್ಮ ದೇಶದಲ್ಲೇ ಸಾಕಷ್ಟು ರೂಪಾಂತರಗಳಿವೆ" ಎಂದು ವಿಪಿನ್ ಸಾಂಗೈ, ಜಸ್ಮೀತ್ ಸಿಂಗ್ ಅವರನ್ನೊಳಗೊಂಡ ಪೀಠವು ಹೇಳಿದೆ.
ಸಿಂಗಪುರ ರೂಪಾಂತರ ಸೋಂಕಿನ ಕುರಿತು ಹೇಳಿಕೆ; ನೆಟ್ಟಿಗರ ಆಕ್ರೋಶ
ಕರ್ತವ್ಯ ಪಾಲನೆ ಕಾರಣದಿಂದಾಗಿ ಕೊರೊನಾ ಸೋಂಕಿಗೆ ತುತ್ತಾಗುವ ಅಪಾಯದಲ್ಲಿರುವ ಅಧೀನ ನ್ಯಾಯಾಂಗ ಅಧಿಕಾರಿಗಳ ಸ್ಥಿತಿ ಕುರಿತ ಮನವಿಯನ್ನು ಆಲಿಸುವ ಸಂದರ್ಭ ಈ ವಿಷಯ ಪ್ರಸ್ತಾಪವಾಗಿದೆ.
ಮಂಗಳವಾರ ಮಾತನಾಡಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಸಿಂಗಪುರದಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿನ ರೂಪಾಂತರ ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು. ಇದು ಮಕ್ಕಳಿಗೆ ಅತಿ ಅಪಾಯಕಾರಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಸಿಂಗಪುರ-ಭಾರತದ ನಡುವಿನ ವಿಮಾನ ಯಾನವನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದರು.
ಕೇಜ್ರಿವಾಲ್ ಅವರ ಈ ಹೇಳಿಕೆಗೆ ಸಿಂಗಪುರದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಕ್ಷಮೆ ಕೇಳುವಂತೆಯೂ ಆಗ್ರಹಿಸಿದ್ದರು. ಸಿಂಗಪುರ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಅವರು ಕೂಡ ಟ್ವೀಟ್ ಮಾಡಿದ್ದು, "ಸಿಂಗಪುರ ಕೊರೊನಾ ರೂಪಾಂತರ ಸೋಂಕು ಎಂಬುದೇ ಇಲ್ಲ. ರಾಜಕಾರಣಿಗಳು ಸತ್ಯ ಅರಿತು ಮಾತನಾಡಬೇಕು. ಕೇಜ್ರಿವಾಲ್ ಹೇಳಿಕೆಯಿಂದ ಉಂಟಾದ ಗೊಂದಲ ನಿವಾರಿಸಿದ್ದಕ್ಕೆ ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಧನ್ಯವಾದ" ಎಂದು ಟ್ವೀಟ್ ಮಾಡಿದ್ದರು.