ವಿಮಾನ ಪ್ರಯಾಣಕ್ಕೆ ನಿಷೇಧ; ಡಿಜಿಸಿಎ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್
ನವದೆಹಲಿ, ಫೆಬ್ರವರಿ 26: ವಿಮಾನ ಪ್ರಯಾಣ ಸಂದರ್ಭದಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಜೊತೆ ಆಕ್ಷೇಪಾರ್ಹ ವರ್ತನೆ ತೋರಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಕಾಮಿಡಿಯನ್ (Stand-up Comedian) ಕುನಾಲ್ ಕಾಮ್ರಾ ವಿರುದ್ಧದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಮಧ್ಯಪ್ರವೇಶಿಸಿದೆ.
ಕುನಾಲ್ ಕಾಮ್ರಾ ಆರು ತಿಂಗಳ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಿ ಏರ್ ಇಂಡಿಗೋ ಆದೇಶ ಮಾಡಿತ್ತು. ಆ ನಂತರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ದೇಶಿ ವಿಮಾನಯಾನ ಸಂಸ್ಥೆಗಳಿಗೆ ಕಾಮ್ರಾ ಪ್ರಯಾಣ ನಿಷೇಧಿಸುವಂತೆ ಸೂಚನೆ ನೀಡಿ, ಇತರ ವಿದೇಶಿ ವಿಮಾನಯಾನ ಸಂಸ್ಥೆಗಳಿಗೂ ನಿಷೇಧ ಹೇರುವಂತೆ ಮನವಿ ಮಾಡಿತ್ತು.
ಅರ್ನಬ್ ವಿಡಿಯೋ ಮಾಡಿದ ಕುನಾಲ್ಗೆ ಇದೆಂಥ ಶಿಕ್ಷೆ!
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಡಿಜಿಸಿಎ ಅನ್ನು ತರಾಟೆಗೆ ತೆಗೆದುಕೊಂಡಿರುವ ದೆಹಲಿ ಹೈಕೋರ್ಟ್, ಕಾಮ್ರಾ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವ ಮೊದಲು ಕಾಮ್ರಾ ದೂರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು ಎಂದು ಬುಧವಾರ ತರಾಟೆಗೆಗೆ ತೆಗೆದುಕೊಂಡಿದೆ.
ಹೈಕೋರ್ಟ್ಗೆ ಕಾಮ್ರಾ ಅರ್ಜಿ
ಏರ್ ಇಂಡಿಗೋ, ಕುನಾಲ್ ಕಾಮ್ರಾ ಅವರು ಸಹ ಪ್ರಯಾಣಿಕರೊಂದಿಗೆ ಆಕ್ಷೇಪಾರ್ಹವಾಗಿ ನಡೆದುಕೊಂಡಿದ್ದಾರೆ ಎಂದು ಆರು ತಿಂಗಳು ವಿಮಾನ ಪ್ರಯಾಣದ ಮೇಲೆ ನಿರ್ಬಂಧ ಹೇರಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಕಾಮ್ರಾ ಅರ್ಜಿ ಸಲ್ಲಿಸಿದ್ದರು.
ಡಿಜಿಸಿಎನ ಆಂತರಿಕ ನಿಯಮಾವಳಿಗಳೇನು
ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿ ನವೀನ್ ಚಾವ್ಲಾ, ನಿರ್ಬಂಧ ಹೇರುವುದು ವಿಮಾನಯಾನ ಸಂಸ್ಥೆಗಳ ಆಂತರಿಕ ವಿಚಾರ. ಆದರೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ ಏಕೆ ಇತರ ವಿಮಾನಯಾನಗಳಿಗೆ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿತು. ಈ ಬಗ್ಗೆ ಡಿಜಿಸಿಎನ ಆಂತರಿಕ ನಿಯಮಾವಳಿಗಳೇನು ಎಂಬುದನ್ನು ಕೋರ್ಟ್ಗೆ ಸಲ್ಲಿಸಿ ಎಂದು ವಿಚಾರಣೆಯನ್ನು ಮುಂದೂಡಿದ್ದಾರೆ.
|
ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು
ಇತ್ತೀಚೆಗೆ ಕುನಾಲ್ ಕಾಮ್ರಾ ಏರ್ ಇಂಡಿಗೋದಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸುವಾಗ ತಮ್ಮ ಪಕ್ಕದ ಆಸನದಲ್ಲಿ ಕುಳಿತಿದ್ದ ಟಿವಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರನ್ನು ವಿರೋಧಿಸಿ ಮಾತನಾಡುವ ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಪ್ರಯಾಣಿಕರೊಂದಿಗೆ ಆಕ್ಷೇಪಾರ್ಹವಾಗಿ ನಡೆದುಕೊಂಡಿದ್ದಾರೆ ಎಂದು ಏರ್ ಇಂಡಿಗೋ ಆರು ತಿಂಗಳು ನಿರ್ಬಂಧ ಹೇರಿತ್ತು. ಇದರ ಬೆನ್ನಲ್ಲೇ ಗೋ ಏರ್ ಹಾಗೂ ಸ್ಪೈಸ್ ಜೆಟ್ ಕೂಡ ಕಾಮ್ರಾ ವಿಮಾನ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿತ್ತು.
ಡಿಜಿಸಿಎ ನಿರ್ದೇಶಿಸಿದ್ದು ಇದೇ ಮೊದಲು
ಈ ಬಗ್ಗೆ ಸುದ್ದಿ ಪ್ರತಿಕ್ರಿಯಿಸಿರುವ ಕುನಾಲ್ ಕಾಮ್ರಾ ಅವರ ವಕೀಲರು, 'ನಾಗರಿಕ ವಿಮಾನಯಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಯಾಣಿಕರೊಬ್ಬರ ದೂರನ್ನು ಆದರಿಸದೇ ಪ್ರಯಾಣದ ಮೇಲೆ ನಿರ್ಬಂಧ ಕೈಗೊಳ್ಳಲು ಡಿಜಿಸಿಎ ನಿರ್ದೇಶಿಸಿದ್ದು ಇದೇ ಮೊದಲು. ಈ ಬಗ್ಗೆ ನಮ್ಮ ಅರ್ಜಿದಾರರ ಪರವಾಗಿ ಕೋರ್ಟ್ನಲ್ಲಿ ನ್ಯಾಯ ಸಿಗಲಿದೆ' ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.