ಕಾರ್ತಿ ಚಿದಂಬರಂಗೆ ಕೊನೆಗೂ ಜಾಮೀನು ಮಂಜೂರು
ನವದೆಹಲಿ, ಮಾರ್ಚ್ 23: 'ಐಎನ್ಎಕ್ಸ್ ಮೀಡಿಯಾ' ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಕೊನೆಗೂ ಜಾಮೀನು ಮಂಜೂರಾಗಿದೆ. ಕಾರ್ತಿ ಚಿದಂಬರಂ ಇಲ್ಲಿಯವರೆಗೆ ನ್ಯಾಯಾಂಗ ಬಂಧನದಲ್ಲಿದ್ದರು.
10 ಲಕ್ಷಗಳ ಬಾಂಡ್, ದೇಶ ಬಿಟ್ಟು ತೆರಳಬಾರದು, ಬ್ಯಾಂಕ್ ಖಾತೆಗಳನ್ನು ಮುಚ್ಚಬಾರದು ಮತ್ತು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸಿ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಕಾರ್ತಿ- ಐಎನ್ಎಕ್ಸ್ ಮೀಡಿಯಾ ಡೀಲ್ ಟೈಮ್ ಲೈನ್
ಈ ಹಿಂದೆ ಮಾರ್ಚ್ 1, 2018ರಂದು ಮೊದಲ ಬಾರಿಗೆ ಪಟಿಯಾಲ ಹೌಸ್ ಸಿಬಿಐ ವಿಶೇಷ ನ್ಯಾಯಾಲಯ 5 ದಿನಗಳ ಕಾಲ ಕಾರ್ತಿ ಚಿದಂಬರಂರನ್ನು ಸಿಬಿಐ ವಶಕ್ಕೆ ಒಪ್ಪಿಸಿತ್ತು. ಅದಾದ ಬಳಿಕ ಮಾರ್ಚ್ 12ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ವಿಶೇಷ ನ್ಯಾಯಾಲಯ ಒಪ್ಪಿಸಿತ್ತು. ಇದಾದ ಬಳಿಕ ಅವರು ತಿಹಾರ್ ಜೈಲುಪಾಲಾಗಿದ್ದರು.
ಬಳಿಕ ಕಾರ್ತಿ ಚಿದಂಬರಂ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಅವರಿಗೆ ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.