ಡಿಕೆ ಶಿವಕುಮಾರ್ಗೆ ಮಂಗಳವಾರ ಎರಡೆರಡು ಕಹಿ ಸುದ್ದಿ
ನವದೆಹಲಿ, ಅಕ್ಟೋಬರ್ 15: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಮಂಗಳವಾರ ಎರಡೂ ಕಡೆ ನಿರಾಶೆ ಅನುಭವಿಸಿದ್ದಾರೆ.
ತಮ್ಮ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮನ್ನಿಸಿ ಜಾಮೀನು ಮಂಜೂರುಮಾಡಲಿದೆ ಎಂಬ ಡಿಕೆ ಶಿವಕುಮಾರ್ ಅವರ ನಿರೀಕ್ಷೆ ಹುಸಿಯಾಗಿದೆ. ಬೆಳಿಗ್ಗೆಯಷ್ಟೇ ರೋಸ್ ಅವೆನ್ಯೂ ರಸ್ತೆಯಲ್ಲಿರುವ ವಿಶೇಷ ನ್ಯಾಯಾಲಯವು ಡಿಕೆ ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅ.25ರವರೆಗೂ ವಿಸ್ತರಿಸಿತ್ತು. ಮಧ್ಯಾಹ್ನದ ಬಳಿಕ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಗುರುವಾರಕ್ಕೆ (ಅ.17) ವಿಚಾರಣೆಯನ್ನು ಮುಂದೂಡಿದೆ. ಇದರಿಂದ ಅವರು ಇನ್ನೂ ಎರಡು ದಿನ ತಿಹಾರ್ ಜೈಲಿನಲ್ಲಿಯೇ ಇರುವುದು ಅನಿವಾರ್ಯವಾಗಿದೆ.
ಡಿ.ಕೆ.ಶಿವಕುಮಾರ್ಗೆ ಮತ್ತೆ ನಿರಾಸೆ: ಅ.25 ರವರೆಗೆ ಜೈಲು ವಾಸ ಮುಂದುವರಿಕೆ
ಡಿಕೆ ಶಿವಕುಮಾರ್ ಅವರಿಗೆ ಮಂಗಳವಾರವೇ ಜಾಮೀನು ಮಂಜೂರು ಮಾಡಬೇಕೆಂದು ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಸುಮಾರು ಒಂದು ಗಂಟೆ ವಾದ ಮಂಡಿಸಿದರು. ಆದರೆ ಮಂಗಳವಾರ ಅರ್ಜಿ ವಿಚಾರಣೆ ಪೂರ್ಣಗೊಳ್ಳಲಿಲ್ಲ. ಗುರುವಾರ ಪುನಃ ಅರ್ಜಿ ವಿಚಾರಣೆ ನಡೆಯಲಿದ್ದು, ಇಡಿ ಪರ ವಕೀಲರು ಜಾಮೀನು ಅರ್ಜಿಗೆ ಆಕ್ಷೇಪಣೆ ಮಂಡಿಸಲಿದ್ದಾರೆ. ಅ. 17ರಂದು ಮಧ್ಯಾಹ್ನ 3.30ಕ್ಕೆ ಅರ್ಜಿ ವಿಚಾರಣೆ ಆರಂಭವಾಗಲಿದೆ.
ಸಿಂಘ್ವಿ ವಾದವೇನು?
ಡಿಕೆ ಶಿವಕುಮಾರ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಬೆಂಗಳೂರು ಹೊರವಲಯದಲ್ಲಿ ಜಮೀನು ಹೊಂದಿದ್ದಾರೆ. ಆಗಿನ ಕೃಷಿ ಭೂಮಿ ಈಗ ವಾಣಿಜ್ಯ ಭೂಮಿಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ಸಹಜವಾಗಿಯೇ ಅದರ ಮೌಲ್ಯ ಹೆಚ್ಚಾಗಿದೆ. ಮೌಲ್ಯ ಹೆಚ್ಚಾಗಿರುವುದನ್ನು ಅಕ್ರಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅವರು ತಮ್ಮ ಆಸ್ತಿ ವಿವರದ ಕುರಿತು ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ನೀಡಿದ್ದರೆ ಚುನಾವಣಾ ಆಯೋಗ ಹೇಗೆ ಸುಮ್ಮನಿರುತ್ತದೆ? ಎಂದು ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
ಬಂಧಿಸುವ ಪ್ರಕರಣವಲ್ಲ
ಆದಾಯ ತೆರಿಗೆ ಕಾಯ್ದೆ ನಿಯಮಾವಳಿಗಳಡಿಯಲ್ಲಿ ಡಿಕೆ ಶಿವಕುಮಾರ್ ಅವರು ಬಂಧನಕ್ಕೆ ಒಳಗಾಗುವಂತಹ ಅಪರಾಧ ಎಸಗಿಲ್ಲ. ಐಟಿ ನಿಮಯಗಳ ಅಡಿ ಅವರನ್ನು ಬಂಧಿಸುವ ಅಗತ್ಯವಿಲ್ಲ. ಪಿಎಂಎಲ್ಎ ಪ್ರಕರಣ ದಾಖಲಿಸುವ ಅವಕಾಶವಿಲ್ಲ. ಆದರೆ 45 ದಿನಗಳಿಂದ ಅವರು ಬಂಧನದಲ್ಲಿದ್ದಾರೆ. ಇದು ಬಂಧಿಸುವ ಪ್ರಕರಣವಲ್ಲ ಎಂದು ಹೇಳಿದರು.
ಬಂಧನ ಭೀತಿಯಿಂದ ಸದ್ಯಕ್ಕೆ ಬಚಾವಾದ ಡಿಕೆ ಶಿವಕುಮಾರ್ ಆಪ್ತರು!
ಸತತ ವಿಚಾರಣೆ ನಡೆಸಲಾಗಿದೆ
ಡಿಕೆ ಶಿವಕುಮಾರ್ ಏಳು ಬಾರಿ ಸಚಿವರಾಗಿದ್ದಾರೆ. ಈಗಲೂ ಅವರು ಶಾಸಕರಾಗಿದ್ದಾರೆ. ಅವರೇನೂ ವಿಚಾರಣೆಯಿಂದ ಪರಾರಿಯಾಗುವುದಿಲ್ಲ. ಅವರು ಸಮಾಜದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ. ಅಷ್ಟು ಅನುಮಾನಗಳಿದ್ದರೆ ಅವರ ಪಾಸ್ಪೋರ್ಟ್ ಸಹ ವಶಕ್ಕೆ ಪಡೆದುಕೊಳ್ಳವಹುದು. ಅವರನ್ನು 45 ದಿನ ವಿಚಾರಣೆ ಮಾಡಲಾಗಿದೆ. ಪ್ರತಿ ದಿನ 9 ಗಂಟೆ ವಿಚಾರಣೆ ಮಾಡಲಾಗಿದೆ. ನೋಟಿಸ್ ನೀಡಿ ಮೊದಲು ನಾಲ್ಕು ದಿನ ವಿಚಾರಣೆ ನಡೆಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿ, ತಿಹಾರ್ ಜೈಲಿನಲ್ಲಿ ಸಹ ವಿಚಾರಣೆ ನಡೆಸಲಾಗಿದೆ. ಅನಾರೋಗ್ಯದ ನಡುವೆಯೂ ಅವರು ವಿಚಾರಣೆಗೆ ಸಹಕರಿಸಿದ್ದಾರೆ ಎಂದರು.
ಸಾಕ್ಷ್ಯ ನಾಶ ಹೇಗೆ ಸಾಧ್ಯ?
ಡಿಕೆ ಶಿವಕುಮಾರ್ ಇಡಿ ಅಧಿಕಾರಿಗಳಿಗೆ ನೀಡಿರುವ ಹೇಳಿಕೆಗಳನ್ನು ಬದಲಿಸಲು ಹೇಗೆ ಸಾಧ್ಯ? ಜಾಮೀನು ಸಿಗಬಾರದು ಎಂದು ಸಾಕ್ಷ್ಯ ನಾಶದ ಆರೋಪ ಮಾಡಲಾಗಿದೆ. ಇದು ಸಾಕ್ಷ್ಯ ನಾಶಪಡಿಸುವ ಪ್ರಕರಣ ಕೂಡ ಅಲ್ಲ. ಎಲ್ಲ ದಾಖಲೆಗಳು ಇಡಿ ಅಧಿಕಾರಿಗಳ ಬಳಿ ಇವೆ. ಅದನ್ನು ಡಿಕೆ ಶಿವಕುಮಾರ್ ಬದಲಿಸಲು ಸಾಧ್ಯವೇ? ಆರೋಪ ಮಾಡಿದ ಸ್ಥಳ, ಎಲ್ಲಿ, ಹೇಗೆ, ಯಾವಾಗ ಎಂಬ ಎಲ್ಲವೂ ಮುಖ್ಯ. ಆದರೆ ಇಲ್ಲಿ ಯಾವುದೂ ಸಮಂಜಸವಾಗಿಲ್ಲ. ಇಡಿ ಅಧಿಕಾರಿಗಳು ಇಲ್ಲದ ಪ್ರಶ್ನೆ ಕೇಳುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಭೇಟಿ ದೆಹಲಿಗೆ ತೆರಳಿದ ನಾಯಕರು
ಆರೋಗ್ಯ ಸಮಸ್ಯೆ ಪರಿಗಣಿಸಿ
ಡಿಕೆ ಶಿವಕುಮಾರ್ ವಿರುದ್ಧ ಎಲ್ಲ ಸೆಕ್ಷನ್ಗಳನ್ನು ಲಿಂಕ್ ಮಾಡಲಾಗುತ್ತಿದೆ. ಅವರಿಗೆ ತೀವ್ರವಾದ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಸೆ. 18ರಂದು ಆಂಜಿಯೋಗ್ರಫಿ ತಪಾಸಣೆ ಮಾಡಲಾಗಿದೆ. ಅವರ ಆರೋಗ್ಯ ಪರಿಸ್ಥಿತಿಯನ್ನು ಪರಿಗಣಿಸಬೇಕು. ಅವರು ರಾಜಕೀಯದಲ್ಲಿ ಪ್ರಭಾವಿ. ಆದರೆ ಅವರಿಂದ ಸಾಕ್ಷ್ಯ ನಾಶ ಸಾಧ್ಯವಿಲ್ಲ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬೇಕು.