ಸಲ್ಮಾನ್ ಖುರ್ಷಿದ್ ಪುಸ್ತಕ ನಿಷೇಧ ಕೋರಿ ಹೈಕೋರ್ಟ್ಗೆ ಅರ್ಜಿ: ನ. 24 ರಂದು ವಿಚಾರಣೆ
ನವದೆಹಲಿ, ನವೆಂಬರ್ 16: ಕಾಂಗ್ರೆಸ್ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅಯೋಧ್ಯೆಯ ಕುರಿತಾಗಿ ಬರೆದಿರುವ ಪುಸ್ತಕದಲ್ಲಿ ಹಿಂದುತ್ವವನ್ನು ಉಗ್ರವಾದಿ ಸಂಘಟನೆಗಳಿಗೆ ಹೋಲಿಕೆ ಮಾಡಿರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಲ್ಮಾನ್ ಖುರ್ಷಿದ್ ಬರೆದಿರುವ ಪುಸ್ತಕವನ್ನು ನಿಷೇಧ ಮಾಡುವಂತೆ ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಕೂಡಾ ಸಲ್ಲಿಕೆ ಆಗಿದ್ದು, ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ನವೆಂಬರ್ 24 ರಂದು ಆಲಿಸಲಿದೆ.
"ಅಯೋಧ್ಯೆಯಲ್ಲಿ ಸುರ್ಯೋದಯ: ನಮ್ಮ ಕಾಲದಲ್ಲಿ ರಾಷ್ಟ್ರತ್ವ" ಎಂಬ ಶೀರ್ಷಿಕೆಯಲ್ಲಿ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೊಸ ಪುಸ್ತಕವೊಂದನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಬರೆಯಲಾಗಿರುವ ಕೆಲವು ವಿಚಾರಗಳು ಭಾರೀ ವಿವಾದವನ್ನು ಸೃಷ್ಟಿ ಮಾಡಿದೆ. "ಸನಾತನ ಧರ್ಮ ಮತ್ತು ಋಷಿಗಳು, ಸಂತರ ಶಾಸ್ತ್ರೀಯವಾದ ಹಿಂದೂ ಧರ್ಮವನ್ನು ಹಿಂದುತ್ವವು ಬದಿಗೆ ತಳ್ಳಿದೆ. ಇತ್ತೀಚಿಗೆ ಹಿಂದುತ್ವವು ಐಸಿಸ್ ಹಾಗೂ ಬೊಕೊ ಹರಾಮ್ನಂತಹ (ಉಗ್ರವಾದಿ ಸಂಘಟನೆ) ಇಸ್ಲಾಂ ಜಿಹಾದಿಗಳ ಗುಂಪಿನಂತೆ ಆಕ್ರಮಣಕಾರಿ ಆಗಿದೆ." ಎಂದು ಈ ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್ ಉಲ್ಲೇಖ ಮಾಡಿದ್ದಾರೆ.
ಪುಸ್ತಕದಲ್ಲಿ ಹಿಂದುತ್ವದ ಬಗ್ಗೆ ವಿವಾದಾದ್ಮಕ ಅಂಶ: ಸಲ್ಮಾನ್ ಖುರ್ಷಿದ್ ನಿವಾಸಕ್ಕೆ ಬೆಂಕಿ
ಈ ಅಂಶವು ವಿವಾದವನ್ನು ಸೃಷ್ಟಿಸುತ್ತಿದ್ದಂತೆ ಈ ಪುಸ್ತಕದ ಮಾರಾಟ, ಖರೀದಿ ಹಾಗೂ ಪ್ರಕಟಣೆಯನ್ನು ನಿಷೇಧ ಮಾಡುವಂತೆ ಕೋರಿ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿಯೊಂದು ಸಲ್ಲಿಕೆ ಆಗಿದೆ. ಈ ಅರ್ಜಿಯನ್ನು ವಕೀಲ ವಿನೀತ್ ಜಿಂದಾಲ್ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯು 24 ರಂದು ನಡೆಯಲಿದೆ ಎಂದು ಹೈಕೋರ್ಟ್ ತಿಳಿಸಿದೆ ಎಂದು ವಕೀಲರು ಹೇಳಿದ್ದಾರೆ.
ಅರ್ಜಿಯಲ್ಲಿ ಏನಿದೆ?
"ಈ ಪುಸ್ತಕದಲ್ಲಿ ಹಿಂದುತ್ವವನ್ನು ಜಿಹಾದಿ ಉಗ್ರ ಸಂಘಟನೆಗಳಿಗೆ ಹೋಲಿಕೆ ಮಾಡಲಾಗಿದೆ. ಸಲ್ಮಾನ್ ಖುರ್ಷಿದ್ ಸಂಸತ್ತು ಸದಸ್ಯರ ಆಗಿದ್ದಾರೆ. ಹಾಗೆಯೇ ಮಾಜಿ ಸಚಿವರು ಕೂಡಾ ಹೌದು. ಹಾಗಿರುವಾಗ ಇವರು ಸಮಾಜದ ಮೇಲೆ ಹೆಚ್ಚು ಪ್ರಭಾವವನ್ನು ಬೀರುವ ವ್ಯಕ್ತಿ. ಹಾಗಿರುವಾಗ ಇಂತಹ ಹೇಳಿಕೆ ಸರಿಯಲ್ಲ. ಅವರ ಪುಸ್ತಕದ ದಿ ಸಾಪ್ರೋನ್ ಸ್ಕೈ (ಕೇಸರಿ ಆಕಾಶ) ಎಂಬ ಅಧ್ಯಾಯದಲ್ಲಿ, 113 ಪುಟದಲ್ಲಿ ಈ ಅವಹೇಳನಕಾರಿ ಉಲ್ಲೇಖ ಮಾಡಲಾಗಿದೆ. ಅವರ ಪುಸ್ತಕದಲ್ಲಿ ಹಿಂದೂ ವಿರೋಧಿ ಧೋರಣೆಗಳು ಇದೆ. ಇದು ದೇಶದ ಸುರಕ್ಷತೆ, ಶಾಂತಿ ಹಾಗೂ ಸೌರ್ಹಾದತೆಗೆ ಧಕ್ಕೆಯನ್ನು ಉಂಟು ಮಾಡುತ್ತದೆ," ಎಂದು ಆರೋಪ ಮಾಡಲಾಗಿದೆ. "ವಾಕ್ ಸ್ವಾತಂತ್ಯ್ರದ ಪ್ರಕಾರ ಯಾವುದೇ ವ್ಯಕ್ತಿ ತನ್ನ ಭಾವನೆಯನ್ನು ಹೇಳಬಹುದು. ಆದರೆ ಈ ಹೇಳಿಕೆಯು ಸಮಾಜದ ಶಾಂತಿ, ಸೌರ್ಹಾಧತೆಗೆ ಧಕ್ಕೆ ಉಂಟು ಮಾಡುವಂತೆ ಇರಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯವು ಒಂದು ಸಂಕೀರ್ಣ ಹಕ್ಕಾಗಿದೆ. ಈ ಹಕ್ಕಿನ ಜೊತೆ ವ್ಯಕ್ತಿಗೆ ಕರ್ತವ್ಯಗಳು ಕೂಡಾ ಇದೆ," ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.
ತನ್ನ ಹೊಸ ಪುಸ್ತಕದ 'ಹಿಂದುತ್ವ' ಕುರಿತ ಅಭಿಪ್ರಾಯವನ್ನು ಸಮರ್ಥಿಸಿಕೊಂಡ ಸಲ್ಮಾನ್ ಖುರ್ಷಿದ್
ಸಲ್ಮಾನ್ ಖುರ್ಷಿದ್ನ ಪುಸ್ತಕದಲ್ಲಿ ಹಿಂದುತ್ವದ ಬಗ್ಗೆ ಇರುವ ಉಲ್ಲೇಖವು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಲ್ಮಾನ್ ಖುರ್ಷಿದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಪ್ರತಿಭಟನೆ ನಡೆಸಿದೆ. ಬಳಿಕ ಸಲ್ಮಾನ್ ಖುರ್ಷಿದ್ ಮನೆಗೆ ಬೆಂಕಿ ಹಾಕಲಾಗಿದೆ. ನೈನಿತಾಲ್ನಲ್ಲಿನ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ನಿವಾಸವನ್ನು ಧ್ವಂಸ ಮಾಡಲಾಗಿದ್ದು, ಬೆಂಕಿ ಹಾಕಲಾಗಿದೆ. ಈ ಘಟನೆಯ ವಿಡಿಯೋ, ಚಿತ್ರವನ್ನು ಸಲ್ಮಾನ್ ಖುರ್ಷಿದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ನಾನು ನನ್ನ ಸ್ನೇಹಿತರಿಗಾಗಿ ಬಾಗಿಲು ತೆರೆದೆ. ಆದರೆ ಈ ಆ ಸ್ನೇಹಿತರು ಈ ರೀತಿ ಮಾಡಿಹೋಗಿದ್ದಾರೆ. ನಾನು ಈಗಲೂ ಇಂತಹದ್ದು ಹಿಂದೂ ಧರ್ಮ ಎಂದು ಹೇಳುವುದು ತಪ್ಪೇ?," ಎಂದು ಸಲ್ಮಾನ್ ಖುರ್ಷಿದ್ ಪ್ರಶ್ನೆ ಮಾಡಿದ್ದಾರೆ.
ಇನ್ನು ಈ ಪುಸ್ತಕದ ವಿಚಾರದಲ್ಲಿ ಬಿಜೆಪಿಯು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. "ಸಲ್ಮಾನ್ ಖುರ್ಷಿದ್ರ ಈ ಹೇಳಿಕೆಯು ಹಿಂದೂ ಧರ್ಮದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಈಗ ಕಾಂಗ್ರೆಸ್ ಈ ರೀತಿಯಾಗಿ ಕೋಮು ಹೇಳಿಕೆ ನೀಡಿ, ಮತ್ತೆ ಮುಸ್ಲಿಮರ ಮತವನ್ನು ಪಡೆದುಕೊಳ್ಳುವ ಯತ್ನ ಮಾಡುತ್ತಿದೆ. ಕಾಂಗ್ರೆಸ್ ಮುಸ್ಲಿಮರ ಮತಕ್ಕಾಗಿ ಓಲೈಕೆಯ ರಾಜಕೀಯ ಮಾಡುತ್ತಿದೆ," ಎಂದು ಬಿಜೆಪಿ ಆರೋಪ ಮಾಡಿದೆ. "ಕಾಂಗ್ರೆಸ್ ಪಕ್ಷಕ್ಕೆ ಹಿಂದುತ್ವದ ಮೇಲಿನ ದ್ವೇಷದ ರೋಗವಿದೆ," ಎಂದು ಬಿಜೆಪಿಯು ಹೇಳಿದೆ.
(ಒನ್ಇಂಡಿಯಾ ಸುದ್ದಿ)