ನಿಜಾಮುದ್ದೀನ್ ಮರ್ಕಜ್: ಭಕ್ತರ ಸಂಖ್ಯೆಗೆ ನಿರ್ಬಂಧ ಹಾಕಲು ಸಾಧ್ಯವಿಲ್ಲ
ನವದೆಹಲಿ, ಏಪ್ರಿಲ್ 12: ದೇಶದಲ್ಲಿ ಇತರೆ ಧಾರ್ಮಿಕ ಸ್ಥಳಗಳಿಗೆ ನಿರ್ಬಂಧ ಇಲ್ಲದಿರುವುದರಿಂದ ನಿಜಾಮುದ್ದೀನ್ ಮರ್ಕಜ್ಗೆ ಪ್ರವೇಶಿಸುವ ಭಕ್ತರ ಸಂಖ್ಯೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಈ ಮೂಲಕ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಮಾರ್ಗಸೂಚಿಗಳಿಗೆ ಅನುಗುಣವಾಗಿ ರಂಜಾನ್ ಮಾಸದಲ್ಲಿ ಪ್ರಾರ್ಥನೆ ಸಲ್ಲಿಸಲು ಮಸೀದಿ ಒಳಗೆ ಪ್ರವೇಶಿಸಲು ಅನುಮತಿ ನೀಡಿದೆ.
ಪೊಲೀಸರು 200 ಜನರ ಪಟ್ಟಿಯನ್ನು ಪರಿಶೀಲಿಸಿದ್ದು, ಒಂದು ಸಮಯಕ್ಕೆ 20 ಮಂದಿಗೆ ಮಾತ್ರ ಆವರಣ ಪ್ರವೇಶಿಸಲು ಅವಕಾಶ ನೀಡುವುದಾಗಿ ಕೇಂದ್ರ ಮತ್ತು ದೆಹಲಿ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
'ಇದು ತೆರೆದ ಜಾಗ. ಇತರೆ ಧಾರ್ಮಿಕ ಸ್ಥಳಗಳಲ್ಲಿ ನಿರ್ಬಂಧ ಇಲ್ಲದೆ ಇರುವಾಗ ಇಲ್ಲಿ ಭಕ್ತರ ಸಂಖ್ಯೆಯನ್ನು ನಿಗದಿಗೊಳಿಸಲು ಸಾಧ್ಯವಿಲ್ಲ. ದೇವಸ್ಥಾನ ಅಥವಾ ಮಸೀದಿ ಅಥವಾ ಚರ್ಚ್ಗೆ ಹೋಗಲು ಬಯಸುವ ಯಾರು ಬೇಕಾದರು ತೆರಳಬಹುದು. ಯಾರಿಗೂ ನಿರ್ದಿಷ್ಟ 200 ಜನರ ಪಟ್ಟಿ ನೀಡಲು ಸಾಧ್ಯವಿಲ್ಲ' ನ್ಯಾಯಮೂರ್ತಿ ಮುಕ್ತಾ ಗುಪ್ತಾ ಹೇಳಿದರು.
'200 ಜನರ ಪಟ್ಟಿ ಒಪ್ಪತಕ್ಕದ್ದಲ್ಲ. ಅದು ಸಾಧ್ಯವಿಲ್ಲ. ಆದರೆ ಮಸೀದಿ ನಿರ್ವಹಣೆ ಮಾಡುವ ಜನರ ಪಟ್ಟಿಯನ್ನು ಸ್ಥಳೀಯ ಎಸ್ಎಚ್ಒಗೆ ನೀಡಬಹುದು' ಎಂದು ಅವರು ಹೇಳಿದರು.
ಸ್ಥಳೀಯ ಎಸ್ಎಚ್ಒ ಸಮ್ಮುಖದಲ್ಲಿ, ಮಸೀದಿಯಲ್ಲಿ ಪರಿಶೀಲನೆ ನಡೆಸಬೇಕು. ಅಲ್ಲಿ ಸಾಮಾಜಿಕ ಅಂತರಕ್ಕೆ ಅನುಗುಣವಾಗಿ ಎಷ್ಟು ಜನರು ನಮಾಜ್ ಮಾಡಬಹುದು ಎಂಬುದನ್ನು ನಿರ್ಧರಿಸಲು ಮಾಪನ ನಡೆಸಬೇಕು ಎಂದು ಕೋರ್ಟ್ ಸೂಚಿಸಿದೆ.