ನಮಾಜ್ಗೆ ಮಸೀದಿಯಲ್ಲಿ 50 ಮಂದಿಗೆ ಅವಕಾಶ ನೀಡಲು ದೆಹಲಿ ಕೋರ್ಟ್ ಸೂಚನೆ
ನವದೆಹಲಿ, ಏಪ್ರಿಲ್ 15: ದೇಶಾದ್ಯಂತ ರಂಜಾನ್ ಆಚರಣೆ ಆರಂಭವಾಗಿದ್ದು, ದೆಹಲಿಯ ನಿಜಾಮುದ್ದಿನ್ ಮರ್ಕಜ್ನಲ್ಲಿ ದಿನಕ್ಕೆ ಐದು ಬಾರಿ 50 ಮಂದಿಗೆ ಅವಕಾಶ ನೀಡಬೇಕೆಂದು ದೆಹಲಿ ಹೈಕೋರ್ಟ್ ಸೂಚಿಸಿದೆ.
ನ್ಯಾಯಾಧೀಶರಾದ ಪ್ರತಿಭಾ ಎಂ ಸಿಂಗ್ ಅವರು, ದಿನನಿತ್ಯ ಐದು ಬಾರಿ ಐವತ್ತು ಮಂದಿಗೆ ಮಸೀದಿಯ ಮೊದಲ ಅಂತಸ್ತಿನಲ್ಲಿ ಮಾತ್ರ ನಮಾಜ್ ಮಾಡಲು ಅವಕಾಶ ನೀಡಬೇಕು ಎಂದು ನಿಜಾಮುದ್ದಿನ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸಾಮೂಹಿಕ ನಮಾಜ್ ಅನುಮತಿ ನೀಡಲು ನಿರಾಕರಿಸಿದ ಕೋರ್ಟ್
ಇತರೆ ಅಂತಸ್ತಿನಲ್ಲಿಯೂ ಇನ್ನಷ್ಟು ಮಂದಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂಬ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ದೆಹಲಿ ವಕ್ಫ್ ಬೋರ್ಡ್ ಪರವಾಗಿ ಹಿರಿಯ ವಕೀಲ ರಮೇಶ್ ಗುಪ್ತಾ ಅವರು ಈ ಮನವಿಯನ್ನು ಸಲ್ಲಿಸಿದ್ದರು.
ಬುಧವಾರ ದೆಹಲಿಯಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 17,282 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ವಾರಾಂತ್ಯ ಕರ್ಫ್ಯೂ ಕೂಡ ಘೋಷಣೆ ಮಾಡಲಾಗಿದೆ.
ಕರ್ನಾಟಕ, ದೆಹಲಿ ಸೇರಿದಂತೆ ವಿವಿಧೆಡೆ ರಂಜಾನ್ ಆಚರಣೆ ಕುರಿತಂತೆ ಮಾರ್ಗಸೂಚಿ ಹೊರಡಿಸಲಾಗಿದೆ. ಇಫ್ತಾರ್ ಕೂಟ ನಡೆಸುವಂತಿಲ್ಲ, ನಮಾಜ್ಗೂ ಮುನ್ನ ಐದು ನಿಮಿಷ ಮಸೀದಿ ತೆರೆಯುವುದು ಸೇರಿದಂತೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ.