ದಿನಕ್ಕೆ 5 ಟ್ರಕ್ ಲೋಡ್ ಈರುಳ್ಳಿ ಕಳಿಸಿ: ಕೇಂದ್ರಕ್ಕೆ ದೆಹಲಿ ಸರ್ಕಾರ ಬೇಡಿಕೆ
ನವದೆಹಲಿ, ಸೆಪ್ಟೆಂಬರ್ 24: ದಿನೇ ದಿನೇ ಏರುತ್ತಿರುವ ಈರುಳ್ಳಿ ದರ ಜನಸಾಮಾನ್ಯರಲ್ಲಿ ಕಳವಳ ಮೂಡಿಸಿದೆ. ರಾಜಧಾನಿ ದೆಹಲಿಯಲ್ಲಿ ಈರುಳ್ಳಿ ಬೆಲೆಯನ್ನು ನಿಯಂತ್ರಣಕ್ಕೆ ತರುವ ಸಂಬಂಧ ಮತ್ತು ಬೆಲೆ ಏರಿಕೆಯನ್ನು ಪರಾಮರ್ಶಿಸುವ ಸಲುವಾಗಿ ಹಿರಿಯ ಅಧಿಕಾರಿಗಳು ಉನ್ನತಮಟ್ಟದ ಸಭೆ ನಡೆಸಿದರು.
ರಾಜಧಾನಿಯಲ್ಲಿ ಅಧಿಕವಾಗಿರುವ ಈರುಳ್ಳಿ ಬೆಲೆಯನ್ನು ಕಡಿಮೆ ಮಾಡಿ ಜನಸಾಮಾನ್ಯರಿಗೆ ದೊರಕುವಂತೆ ಮಾಡಲು ದೆಹಲಿಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಇಮ್ರಾನ್ ಹುಸೇನ್ ಅವರು ದೆಹಲಿಯ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರತಿ ದಿನ ಐದು ಟ್ರಕ್ ಈರುಳ್ಳಿಯನ್ನು ಸರಬರಾಜು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಭಾರತದಲ್ಲಿ ಸೇಬಿಗಿಂತ ದುಬಾರಿಯಾದ ಈರುಳ್ಳಿ, ನೂರರ ಗಡಿ ದಾಟಲಿದೆ
ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಸಮಿತಿ (ಎನ್ಎಎಫ್ಇಡಿ) ಮೂಲಕ ಪ್ರತಿದಿನ ಐದು ಟ್ರಕ್ ತುಂಬಾ ಈರುಳ್ಳಿ ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಕಳುಹಿಸಲಾಗಿದೆ ಎಂದು ಆಹಾರ ಆಯುಕ್ತರು ತಿಳಿಸಿದ್ದಾರೆ.
ದೆಹಲಿಯಲ್ಲಿನ ಈರುಳ್ಳಿಯ ಅಗತ್ಯದ ಆಧಾರದಲ್ಲಿಯೂ ಪೂರೈಕೆಯನ್ನು ಹೆಚ್ಚಿಸಬಹುದು ಎಂದು ದೆಹಲಿ ಸರ್ಕಾರ ಹೇಳಿದೆ. ದೆಹಲಿಯಲ್ಲಿ ಈರುಳ್ಳಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ 200 ಪಟ್ಟು ಹೆಚ್ಚಳವಾಗಿದೆ.
ಒಂದು ಸೀರೆ ಕೊಂಡ್ರೆ ಕೆಜಿ ಈರುಳ್ಳಿ ಫ್ರಿ! ಸರ್ಕಾರ ಬೀಳೋದು ಗ್ಯಾರಂಟಿ?
ಜತೆಗೆ ಕಾಳಸಂತೆಯಲ್ಲಿ ಈರುಳ್ಳಿ ಮಾರುವವರು, ಗೋದಾಮುಗಳಲ್ಲಿ ಅಕ್ರಮವಾಗಿ ಸಂಗ್ರಹ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ದೆಹಲಿ ಸರ್ಕಾರವು ತನ್ನ 390 ಮಾರಾಟ ಕೇಂದ್ರಗಳು ಮತ್ತು 80 ಮೊಬೈಲ್ ವ್ಯಾನ್ಗಳ ಮೂಲಕ ಸಬ್ಸಿಡಿ ದರದಲ್ಲಿ ಕೆಜಿಗೆ 23.90ರೂದಂತೆ ಈರುಳ್ಳಿ ಮಾರಾಟಕ್ಕೆ ಸಿದ್ಧತೆ ನಡೆಸಿದೆ.