ದೆಹಲಿ: ಶ್ವಾನಗಳ ಸ್ಮಶಾನದಲ್ಲಿ ಕೊವಿಡ್-19 ಶವಗಳ ಅಂತ್ಯಸಂಸ್ಕಾರ!
ನವದೆಹಲಿ, ಏಪ್ರಿಲ್ 28: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವುದೇ ದೊಡ್ಡ ಸವಾಲಾಗಿದೆ. ಪ್ರತಿನಿತ್ಯ 700ಕ್ಕೂ ಹೆಚ್ಚು ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ನವದೆಹಲಿಯಲ್ಲಿ ಸ್ಥಳವೇ ಇಲ್ಲದಂತಾ ಸ್ಥಿತಿ ನಿರ್ಮಾಣವಾಗಿದೆ.
ನವದೆಹಲಿ ನಗರದಾದ್ಯಂತ ಅತಿಹೆಚ್ಚು ಮೃತದೇಹಗಳ ಅಂತ್ಯಕ್ರಿಯೆಗೆ ಅನುಕೂಲವಾಗುವಂತೆ ಹೊಸ ಚಿತಾಗಾರಗಳನ್ನು ನಿರ್ಮಿಸಲಾಗುತ್ತಿದೆ. ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯು ತಾತ್ಕಾಲಿಕ ಚಿತಾಗಾರ ಆರಂಭಿಸಿದೆ. ದ್ವಾರಕ ಸೆಕ್ಟರ್-29ರಲ್ಲಿ ಈ ಮೊದಲು ಶ್ವಾನಗಳ ಅಂತ್ಯೆಕ್ರಿಯೆ ನೆರವೇರಿಸುತ್ತಿದ್ದ ಸ್ಥಳದಲ್ಲಿ ಇದೀಗ ಕೊವಿಡ್-19 ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ನಡೆಸಲು ಚಿತಾಗಾರ ತೆರೆಯಲಾಗಿದೆ.
Video: ದೆಹಲಿ ಆಸ್ಪತ್ರೆ ಬಳಿ ಕಾರಿನ ಒಳಗೆ ರೋಗಿ, ಕಾರಿನ ಹೊರಗೆ ಆಕ್ಸಿಜನ್!
ಈ ಸ್ಮಶಾನವು 3.5 ಎಕರದೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಕಳೆದ ಆರು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಪ್ರಾಣಿಗಳ ಅಂತ್ಯಸಂಸ್ಕಾರ ನಡೆಸುವ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಅನುಮೋದನೆ ನೀಡಿತ್ತು. ಶ್ವಾನಗಳು ಸೇರಿದಂತೆ ಮೃತಪಟ್ಟ ಪ್ರಾಣಿಗಳ ಅಂತ್ಯಕ್ರಿಯೆಯನ್ನು ಈ ಪ್ರದೇಶದಲ್ಲಿ ಮಾಡುವುದಕ್ಕೆ ಸ್ಮಶಾನವನ್ನು ತೆರೆಯಲು ಅನುಮೋದನೆ ನೀಡಲಾಗಿತ್ತು.
ಶೇ.15 ರಿಂದ 20ರಷ್ಟು ಅಂತ್ಯಕ್ರಿಯೆಗೆ ಸಹಕಾರಿ
ನಗರದಲ್ಲಿ ಆರಂಭಿಸಲಾಗಿರುವ ತಾತ್ಕಾಲಿಕ ಚಿತಾಗಾರದಿಂದ ಪ್ರತಿನಿತ್ಯ ಶೇ.15 ರಿಂದ 20ರಷ್ಟು ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಅನುಕೂಲವಾಗಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ವಾರ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಮೀಸಲಿರಿಸಿದ 650 ಸ್ಮಶಾನಗಳಲ್ಲಿನ ಚಿತಾಗಾರಗಳ ಸಂಖ್ಯೆಯನ್ನು 773ಕ್ಕೆ ಏರಿಸಲಾಗಿತ್ತು. ಪ್ರಸ್ತುತ ದೆಹಲಿಯಲ್ಲಿ ದಿನವೊಂದಕ್ಕೆ 882 ಜನರ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
ದಿನಕ್ಕೆ 1,000 ಮೃತದೇಹಗಳ ಅಂತ್ಯಸಂಸ್ಕಾರ
ನವದೆಹಲಿಯಲ್ಲಿ ಪ್ರತಿನಿತ್ಯ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟ 700ಕ್ಕೂ ಹೆಚ್ಚು ಜನರ ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿನಿತ್ಯ 1000 ಶವಗಳ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗದುಕೊಳ್ಳಲಾಗುತ್ತಿದೆ. ಯಮುನಾ ತೀರ ಪ್ರದೇಶದಲ್ಲಿ ಚಿತಾಗಾರಕ್ಕಾಗಿ ಪ್ರದೇಶವನ್ನು ಗುರುತಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಸ್ಮಶಾನವಾದ ಉದ್ಯಾನವನ, ಪಾರ್ಕಿಂಗ್ ಲಾಟ್!
ಕೊರೊನಾವೈರಸ್ ಸೋಂಕಿತನ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ನವದೆಹಲಿಯಲ್ಲಿ ಚಿತಾಗಾರ, ಸ್ಮಶಾನಗಳ ಸಂಖ್ಯೆಯನ್ನೂ ವಿಸ್ತರಣೆ ಮಾಡಲಾಗುತ್ತಿದೆ. ವಾಹನ ನಿಲುಗಡೆ ಪ್ರದೇಶ, ಉದ್ಯಾನವನಗಳೇ ತಾತ್ಕಾಲಿಕ ಸ್ಮಶಾನಗಳಂತೆ ಗೋಚರಿಸುತ್ತಿವೆ. ಪಾರ್ಕಿಂಗ್ ಲಾಟ್, ಪಾರ್ಕ್್ಗಳಲ್ಲಿ ಮೃತದೇಹಗಳ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುತ್ತಿದೆ. ಮಂಗಳವಾರ ಸಂಜೆ 6 ಗಂಟೆ ವೇಳೆಗೆ ದೆಹಲಿಯಲ್ಲಿ 696 ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ದಂಗು ಬಡಿಸಿದ ಕೊರೊನಾವೈರಸ್ ಸಾವಿನ ಸಂಖ್ಯೆ
ದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳು ಜನರನ್ನು ದಂಗು ಬಡಿಸಿದೆ. ಕಳೆದ 24 ಗಂಟೆಗಳಲ್ಲಿ 24,149 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 381 ಮಂದಿ ಪ್ರಾಣ ಬಿಟ್ಟಿದ್ದು, 17,862 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 10,72,065 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಈವರೆಗೂ 15,009 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 98,264 ಕೊವಿಡ್-19 ಸಕ್ರಿಯ ಪ್ರಕರಣಗಳ ದಾಖಲಾಗಿವೆ.