ಮಂಜಿನಿಂದ ಮುಕ್ತಿ ಪಡೆಯಲು ದೆಹಲಿ ಸರ್ಕಾರದ ಹೊಸ ಐಡಿಯಾ
ದೆಹಲಿ, ಡಿಸೆಂಬರ್ 20; ದೆಹಲಿಯ ಕಲುಷಿತ ಗಾಳಿ ಮಿಶ್ರಿತ ಮಂಜು ಸರ್ಕಾರಗಳನ್ನೇ ಬೀಳಿಸುವ ಮಟ್ಟಕ್ಕೆ ಹೆಚ್ಚಾಗಿದೆ. ಚಳಿಗಾಲ ಪ್ರಾರಂಭವಾಯಿತೆಂದರೆ ದೆಹಲಿಗೆ ಕವಿಯುವ ಮಂಜು ಜನಜೀವನವನ್ನು ಅಸ್ಥವ್ಯಸ್ಥ ಮಾಡಿಬಿಡುತ್ತದೆ ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ.
ಕಲುಷಿತ ಗಾಳಿ ಮಿಶ್ರಿತ ಮಂಜಿನಿಂದ ತತ್ತರಿಸಿರುವ ದೆಹಲಿ ಪರಿಸ್ಥಿತಿ ಕೈಮೀರಿದಾಗೆಲ್ಲಾ ತುರ್ತು ಪರಿಸ್ಥಿತಿ ಘೋಷಿಸಿ, ಶಾಲಾ ಕಾಲೇಜುಗಳಿಗೆ ರಜೆ ನೀಡಿ, ಸಮ ಬೆಸ ಸಂಚಾರ ವ್ಯವಸ್ಥೆ ಜಾರಿ ಮಾಡಿ, ಹೆಲಿಕಾಪ್ಟರ್ ಮೂಲಕ ನೀರು ಚಿಮುಕಿಸುವ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಆದರೆ ಈಗ ಮಂಜು ಹೋಗಲಾಡಿಸಲು ಯಂತ್ರೋಪಕರಣದ ಮೊರೆ ಹೋಗಿದೆ ದೆಹಲಿ ಸರ್ಕಾರ.
ದೆಹಲಿ ಸರ್ಕಾರ ಆಂಟಿ ಸ್ಮಾಗ್ ಗನ್ (ಮಂಜು ನಿವಾರಕ ಯಂತ್ರ)ಗಳನ್ನು ಖರೀದಿಸಿದ್ದು, ಮಂಗಳವಾರ ಅದನ್ನು ಪ್ರಯೋಗ ಮಾಡಿತು. ಕ್ಲೌಡ್ ಟೆಕ್ ಸಂಸ್ಥೆಯ ಈ ಯಂತ್ರವು ಗಾಳಿಯ ಶಕ್ತಿಯಿಂದ ನೀರನ್ನು ಅತ್ಯಂತ ಬಲವಾಗಿ ಆಗಸಕ್ಕೆ ಚಿಮುಕಿಸಿ ಮಂಜನ್ನು ಹೋಗಲಾಡಿಸುತ್ತದೆ ಎನ್ನಲಾಗಿದೆ.
ಈ ಪ್ರಯೋಗ ಮಾಡಿರುವುದಕ್ಕೆ ಕೇಂದ್ರ ಪರಿಸರ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್ ಸಂತೋಶ ವ್ಯಕ್ತಪಡಿಸಿದ್ದು, ದೆಹಲಿಯ ಲೆಫ್ಟಿನಂಟ್ ಗೌರ್ನರ್ ಅನಿಲ್ ಬೈಜಾಲ್ ಅವರನ್ನು ಯಂತ್ರದ ಸಾಧಕ ಬಾಧಕಗಳ ಬಗೆಗೆ ವರದಿ ನೀಡುವಂತೆ ಕೇಳಿದ್ದಾರೆ.
ಮಂಜಿನಿಂದ ಅಪಘಾತಗಳು, ದಿನನಿತ್ಯದ ಕಾರ್ಯಗಳಲ್ಲಿ ಹಿನ್ನೆಡೆ, ಆರೋಗ್ಯದಲ್ಲಿ ಭಾರಿ ವ್ಯತ್ಯಯ ಮುಂತಾದ ಸಮಸ್ಯೆಯಿಂದ ಬೇಸತ್ತಿದ್ದ ದೆಹಲಿಗೆ ಈ ಮಂಜು ನಿವಾರಕ ಯಂತ್ರ ನೆಮ್ಮದಿ ತರಬಹುದೇ ಕಾದು ನೋಡಬೇಕಿದೆ.