ದೆಹಲಿ ಅಗ್ನಿ ದುರಂತ: 3ಡಿ ಲೇಸರನಲ್ಲಿ ಘಟನೆ ಮರುಸೃಷ್ಟಿ!
ನವದೆಹಲಿ, ಡಿಸೆಂಬರ್ 9; ಉತ್ತರ ದೆಹಲಿಯ ರಾಣಿ ಝಾನ್ಸಿ ರಸ್ತೆಯ, ಆಂಜ್ ಮಂಡಿ ಪ್ರದೇಶದದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ್ದ ಅಗ್ನಿ ಅವಘಡಕ್ಕೆ ಸ್ಪಷ್ಟ ಕಾರಣ ಏನು? ಎಂಬುದನ್ನು ಪತ್ತೆ ಹಚ್ಚಲು ತನಿಖಾ ತಂಡ ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಹೌದು, ಇಡೀ ದೇಶವನ್ನು ಬೆಚ್ಚಿ ಬಿಳ್ಳಿಸಿದ್ದ ಆಂಜ್ ಮಂಡಿ ಅಗ್ನಿ ಅವಘಡಕ್ಕೆ ಏನು ಕಾರಣ? ಎಂದು ತನಿಖಾ ತಂಡಗಳು ತಲೆ ಕೆರೆದುಕೊಳ್ಳುತ್ತಿವೆ. ಪ್ರಾಥಮಿಕವಾಗಿ ಇದು ಶಾರ್ಟ್ ಸರ್ಕೂಟನಿಂದ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಇಂತಹ ಭಾರೀ ದುರಂತದ ಹಿಂದೆ ಶಾರ್ಟ ಸರ್ಕೂಟ್ ಹೊರತುಪಡಿಸಿ, ಬೇರೆ ಕಾರಣ ಅಥವಾ ನಿಖರ ಕಾರಣ ಏನು ಎಂಬುದನ್ನು ತಿಳಿಯಲು ತನಿಖಾ ತಂಡ 3ಡಿ ಲೇಸರ್ ತಂತ್ರಜ್ಞಾನದ ಮೊರೆ ಹೋಗಿದೆ.
ಘಟನೆ ಮರುಸೃಷ್ಠಿಸಬೇಕಿದೆ
ಆಂಜ್ ಮಂಡಿ ಪ್ರದೇಶದಲ್ಲಿ ದುರಂತಕ್ಕೊಳಗಾಗಿದ್ದ ರೆಹಾನ್ ಎಂಬುವರಿಗೆ ಸೇರಿದ್ದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ರಟ್ಟು ತಯಾರಿಸುವ ಕಾರ್ಖಾನೆ ನಡೆಸಲಾಗುತ್ತಿತ್ತು. ಇದು ಹಳೆಯ ಕಟ್ಟಡವಾಗಿತ್ತು. ಯಾವುದೇ ಕಾರ್ಖಾನೆ ನಡೆಸಲು ಇರಬೇಕಾದ ಮಾನದಂಡಗಳು ಇರಲಿಲ್ಲ. ಹೀಗಾಗಿ ತನಿಖಾ ತಂಡಕ್ಕೆ ದುರಂತವನ್ನು ಮರುಸೃಷ್ಟಿ ಮಾಡಬೇಕಿದೆ. ಅಸಲಿಗೆ ದುರಂತವನ್ನು ಮರುಸೃಷ್ಠಿ ಮಾಡಲಾಗುವುದಿಲ್ಲ. ಹಾಗಾಗಿ 3ಡಿ ಲೇಸರ್ ಸ್ಕ್ಯಾನ್ ಎಂಬ ತಂತ್ರಜ್ಞಾನದ ಮೂಲಕ ಘಟನೆ ಮರುಸೃಷ್ಟಿ ಮಾಡಿ, ದುರಂತಕ್ಕೆ ನಿಖರ ಕಾರಣ ಪತ್ತೆ ಹಚ್ಚಲಿದ್ದಾರೆ.
ದೆಹಲಿ ಅಗ್ನಿ ಅವಘಡ: ಕೊನೆಗೂ ಸೆರೆ ಸಿಕ್ಕ ಆರೋಪಿಗಳು
ಏನಿದು 3ಡಿ ಲೇಸರ್ ತಂತ್ರಜ್ಙಾನ?
ಇತ್ತೀಚೆಗೆ 3ಡಿ ತಂತ್ರಜ್ಙಾನ ಹಲವು ಕ್ಷೇತ್ರಗಳಲ್ಲಿ ಕೊಡುಗೆ ನೀಡುತ್ತಿದೆ. ಅದೇ ರೀತಿ, ವಿಧಿ ವಿಜ್ಞಾನ ಪ್ರಯೋಗಾಲಯದವರು ಕೂಡ ಈ ತಂತ್ರಜ್ಙಾನದ ಮೊರೆ ಹೋಗಿದ್ದಾರೆ. ಪ್ರಾಥಮಿಕವಾಗಿ ಘಟನೆ ನಡೆದ ನಂತರ ವಿಧಿ ವಿಜ್ಞಾನ ಪ್ರಯೋಗಾಲಯದವರು ಸ್ಥಳದಿಂದ ಅನೇಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾರೆ. ಘಟನಾ ಸ್ಥಳದ ರೇಖಾಚಿತ್ರ ರಚಿಸಿಕೊಂಡು 3ಡಿ ಲೇಸರ್ ಮೂಲಕ ಘಟನೆಯನ್ನು ಮರುಸೃಷ್ಠಿ ಮಾಡುತ್ತಾರೆ. ಇದರಿಂದ ವಿಧಿ ವಿಜ್ಞಾನ ಪ್ರಯೋಗಾಲಯದವರು ದುರಂತ ನಡೆಯಲು ನಿಖರ ಕಾರಣ ಏನು ಎಂಬುದನ್ನು ಕಂಡುಕೊಳ್ಳುತ್ತಾರೆ.
ಇದು ಎರಡನೇ ಬಾರಿ!
'ದೇಶದಲ್ಲೇ ಈ ತಂತ್ರಜ್ಙಾನ ಬಳಕೆಯಾಗುತ್ತಿರುವುದು ಇದು ಎರಡನೇ ಬಾರಿ' ಎಂದು ದೆಹಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥರು ತಿಳಿಸಿದ್ದಾರೆ. ಈ ಹಿಂದೆ, ದೆಹಲಿಯ ಕರೋಲಬಾಗ್ ನ ಹೋಟೆಲ್ ಅರ್ಪಿತ್ ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದ ತನಿಖೆ ವೇಳೆ ಇದೇ ತಂತ್ರಜ್ಙಾನ ಬಳಸಲಾಗಿತ್ತು. ಆಗ 17 ಜನ ಬೆಂಕಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು. ಅತ್ಯಂತ ಸಂಕೀರ್ಣ ಪ್ರಕರಣದಲ್ಲಿ ಮಾತ್ರ ಇದು ಸಹಾಯಕ್ಕೆ ಬರುತ್ತದೆ.
ದೆಹಲಿ ಅಗ್ನಿ ಅವಘಡ; ನಿಜವಾದ ಹೀರೋ ಆಗಿದ್ದು ರಾಜೇಶ್ ಶುಕ್ಲಾ!
43 ಜನರು ಬೆಂಕಿಗಾಹುತಿ
ಆಂಜ್ ಮಂಡಿ ಪ್ರದೇಶದ ನಾಲ್ಕು ಅಂತಸ್ತಿನ ರಟ್ಟು ತಯಾರಿಸುವ ಫ್ಯಾಕ್ಟರಿಯಲ್ಲಿ ಭಾನುವಾರ ಶಾರ್ಟ್ ಸರ್ಕೂಟ್ ಸಂಭವಿಸಿ ಈ ದುರಂತ ಸಂಭವಿಸಿತ್ತು. ರಾತ್ರಿ ಕೆಲಸ ಮುಗಿಸಿ, ಕಾರ್ಖಾನೆಯಲ್ಲಿ ಮಲಗಿದ್ದ 150 ಕ್ಕೂ ಹೆಚ್ಚು ಜನರು ಬೆಂಕಿಯ ಜ್ವಾಲೆಯಲ್ಲಿ ಸಿಲುಕಿಕೊಂಡಿದ್ದರು. ಬೆಂಕಿಯ ಕೆನ್ನಾಲಿಗೆ ಹಾಗೂ ವಿಷಕಾರಿ ಹೊಗೆಗೆ ಸಿಲುಕಿ ಒಟ್ಟು 43 ಜನ ಮೃತಪಟ್ಟರೆ, 50 ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಕುರಿತು ದೆಹಲಿ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಕಟ್ಟಡದ ಮಾಲಿಕ ರೆಹಾನ್ ಹಾಗೂ ರೆಹಾನ್ ಪಾಲುದಾರ ಪುಕ್ರಾನ್ ಬಂಧಿಸಲಾಗಿದೆ. ಅವರನ್ನು ದೆಹಲಿ ನ್ಯಾಯಾಲಯ 14 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ದೆಹಲಿ ಅಗ್ನಿ ಅವಘಡ; ಕಾರ್ಯಾಚರಣೆ ಸ್ಥಗಿತ, 43 ಬಡಪಾಯಿ ಕಾರ್ಮಿಕರು ಸಾವು