ದೆಹಲಿ ಅಗ್ನಿ ಅವಘಡ; ನಿಜವಾದ ಹೀರೋ ಆಗಿದ್ದು ರಾಜೇಶ್ ಶುಕ್ಲಾ!
ನವದೆಹಲಿ, ಡಿಸೆಂಬರ್ 8: ನವದೆಹಲಿಯ ರಾಣಿ ಝಾನ್ಸಿ ರಸ್ತೆಯ ಆಂಜ್ ಮಂಡಿ ಪ್ರದೇಶದದಲ್ಲಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ ಒಟ್ಟು 43 ಜನ ಮೃತಪಟ್ಟಿದ್ದಾರೆ ಎಂದು ದೆಹಲಿ ಸರ್ಕಾರ ಅಂತಿಮವಾಗಿ ಘೋಷಿಸಿದೆ. ಸ್ಥಳದಲ್ಲಿ ಬೀಡು ಬಿಟ್ಟಿದ್ದ 30 ಅಗ್ನಿಶಾಮಕ ತಂಡಗಳು ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ.
ದೆಹಲಿ ಅಗ್ನಿ ಅವಘಡ; ಕಾರ್ಯಾಚರಣೆ ಸ್ಥಗಿತ, 43 ಬಡಪಾಯಿ ಕಾರ್ಮಿಕರು ಸಾವು
ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿ ರಾಜೇಶ ಶುಕ್ಲಾ ಎನ್ನುವರು ಬೆಂಕಿ ಆಡುತ್ತಿದ್ದ ಕಟ್ಟಡದೊಳಗೆ ನುಗ್ಗಿ, ಜೀವದ ಹಂಗು ತೊರೆದು 10 ಜನರ ಪ್ರಾಣ ಉಳಿಸಿ ಸಾಹಸ ಮೆರದಿದ್ದಾರೆ. ಅವರ ಶೌರ್ಯ ಸಾಹಸಕ್ಕೆ ದೇಶದ್ಯಂತ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
ಈ ಕುರಿತು ದೆಹಲಿ ಸಚಿವ ಸತ್ಯೆಂದ್ರ ಜೈನ್ ಅವರು ಟ್ವಿಟ್ ಒಂದನ್ನು ಹಂಚಿಕೊಂಡಿದ್ದು, ಶುಕ್ಲಾ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಶುಕ್ಲಾ ಅವರೇ ಇಂದಿನ ನಿಜವಾದ ಹೀರೋ . ಅವರ ದೈರ್ಯ ಸಾಹಸದಿಂದ 10 ಕ್ಕೂ ಹೆಚ್ಚು ಅಮೂಲ್ಯ ಜೀವಗಳು ಉಳಿದವು ಎಂದು ಹೇಳಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡದಿದ್ದು, ಅವಘಡದಲ್ಲಿ ಮೃತಪಟ್ಟವರ ಕುಟುಂಬದ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದುರ್ಘಟನೆಯ ಸತ್ಯಾಸತ್ಯತೆಗಳನ್ನು ಬಯಲಿಗೆಳೆಯಲು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.