ಸತ್ಯಂದರ್ ಜೈನ್ಗೆ ಕೊರೊನಾ: ಉಪಮುಖ್ಯಮಂತ್ರಿ ಹೆಗಲಿಗೆ ಆರೋಗ್ಯ ಖಾತೆ
ದೆಹಲಿ, ಜೂನ್ 18: ದೆಹಲಿ ಆರೋಗ್ಯ ಸಚಿವ ಸತ್ಯಂದರ್ ಜೈನ್ಗೆ ಕೊರೊನಾ ವೈರಸ್ ತಗುಲಿರುವ ಹಿನ್ನೆಲೆ, ಅವರ ಬದಲು ಉಪಮುಖ್ಯಮಂತ್ರಿ ಮನೀಶ್ ಸೋಸಿಡಿಯಾ ಆರೋಗ್ಯ ಇಲಾಖೆ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.
ಆರೋಗ್ಯ ಇಲಾಖೆ ಮಾತ್ರವಲ್ಲ ಸತ್ಯಂದರ್ ಜೈನ್ ನಿಭಾಯಿಸುತ್ತಿದ್ದ ಇನ್ನಿತರ ಕೆಲವು ಇಲಾಖೆಗಳನ್ನು ಸಹ ಉಪಮುಖ್ಯಮಂತ್ರಿ ಮನೀಶ್ ಅವರಿಗೆ ಹೆಚ್ಚುವರಿಯಾಗಿ ಹಸ್ತಾಂತರಿಸಲಾಗಿದೆ.
ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಆಸ್ಪತ್ರೆಗೆ ದಾಖಲು
ಸತ್ಯಂದರ್ ಜೈನ್ ಅವರಿಗೆ ಮಂಗಳವಾರ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿತ್ತು. ಆದರೆ, ಅಂದಿನ ವರದಿಯಲ್ಲಿ ಕೊರೊನಾ ನೆಗಿಟಿವ್ ಬಂದಿತ್ತು. ಆದರೂ ಜ್ವರದಿಂದ ಬಳಲುತ್ತಿದ್ದ ಅವರನ್ನು ವೆಂಟಿಲೇಟರ್ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಬುಧವಾರ ಮತ್ತೊಮ್ಮೆ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ, ದೆಹಲಿ ಆರೋಗ್ಯ ಸಚಿವರಿಗೆ ಕೊವಿಡ್ ಸೋಂಕು ತಗುಲಿರುವುದು ದೃಢವಾಗಿದೆ. ಜೈನ್ ಅವರ ಜೊತೆ ಮತ್ತಿಬ್ಬರು ಸರ್ಕಾರಿ ಅಧಿಕಾರಿಗಳು ಸಹ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದರು. ಅವರಿಗೆ ಸಹ ಸೋಂಕು ದೃಢವಾಗಿದೆ.
ಎಎಪಿ ಶಾಸಕ ಅತಿಶಿ ಮತ್ತು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸಲಹೆಗಾರ ಅಕ್ಷಯ್ ಮರಾಠೆ ಹಾಗೂ ಉಪ ಸಿಎಂ ಮನೀಶ್ ಸಿಸೋಡಿಯಾ ಅವರ ಸಲಹೆಗಾರ ಅನಿಂದಿತಾ ಮಾಥುರ್ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಮೂವರು ನಾಯಕರನ್ನು ಹೋಮ್ ಐಸೋಲೇಟ್ ಮಾಡಲು ಸೂಚಿಸಲಾಗಿದ್ದು, ಅವರ ಸಂಪರ್ಕ ಪತ್ತೆಹಚ್ಚುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದಕ್ಕೂ ಮುಂಚೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೂ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಫಲಿತಾಂಶ ನೆಗಿಟಿವ್ ಬಂದಿತ್ತು.