ಕೋವಿಡ್ 19 ಸೋಂಕಿತ 37 ವರ್ಷ ವಯಸ್ಸಿನ ಪತ್ರಕರ್ತ ಆತ್ಮಹತ್ಯೆ
ನವದೆಹಲಿ, ಜುಲೈ 6: ದೆಹಲಿ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರದಂದು ನಡೆದಿದೆ. ಏಮ್ಸ್ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿ ಮೃತಪಟ್ಟಿದ್ದಾರೆ.
ಇತ್ತೀಚೆಗೆ ಕೊರೊನಾವೈರಸ್ ಸೋಂಕು ತಗುಲಿದ್ದರಿಂದ ಏಮ್ಸ್ ಗೆ ದಾಖಲಿಸಲಾಗಿತ್ತು. 37 ವರ್ಷ ವಯಸ್ಸಿನ ಮೃತ ಪತ್ರಕರ್ತ ದೆಹಲಿಯ ಈಶಾನ್ಯ ಭಾಗದ ಭಜನ್ ಪುರ್ ಪ್ರದೇಶದ ನಿವಾಸಿಯಾಗಿದ್ದರು ಎಂದು ತಿಳಿದು ಬಂದಿದೆ. ಸ್ಥಳೀಯ ಹಿಂದಿ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದರು.
ದೆಹಲಿಯಲ್ಲಿ 1 ಲಕ್ಷ ದಾಟಿದ ಸೋಂಕಿತರ ಸಂಖ್ಯೆ; ಆತಂಕ ಬೇಡ
ಏಮ್ಸ್ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ ವ್ಯಕ್ತಿಯನ್ನು ತಕ್ಷಣವೇ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ.
"ಜೂನ್ 24 ರಂದು ಕೊವಿಡ್ 19 ರ ಟ್ರಾಮ್ ಕೇಂದ್ರದಲ್ಲಿ ದಾಖಲಾಗಿದ್ದ ಪತ್ರಕರ್ತ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಆರೋಗ್ಯದಲ್ಲಿ ಏರುಪೇರು ಉಂಟಾಗಿದರಿಂದ ಇತ್ತೀಚೆಗೆ ಮೊದಲ ಮಹಡಿಯಲ್ಲಿದ್ದ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. ಇದಕ್ಕೂ ಮುನ್ನ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ'' ಎಂದು ದೆಹಲಿ ನೈಋತ್ಯ ವಿಭಾಗದ ಡಿಸಿಪಿ ದೇವೇಂದ್ರ ಆರ್ಯ ತಿಳಿಸಿದರು.
ದೆಹಲಿ ಪತ್ರಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ದೆಹಲಿಯಲ್ಲಿ 99,444 ಪಾಸಿಟಿವ್ ಪ್ರಕರಣಗಳಿದ್ದು, 71, 339 ಮಂದಿ ಗುಣಮುಖರಾಗಿದ್ದು, 3067 ಮಂದಿ ಮೃತರಾಗಿದ್ದಾರೆ.