ಬೆದರಿಕೆ ಪ್ರಕರಣ: ಅಬು ಸಲೇಂಗೆ 7 ವರ್ಷ ಶಿಕ್ಷೆ ಪ್ರಕಟ
ನವದೆಹಲಿ, ಜೂನ್ 07: ದೆಹಲಿಯ ಉದ್ಯಮಿ ಅಶೋಕ್ ಗುಪ್ತಾ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಗುರುವಾರ ಮಧ್ಯಾಹ್ನದ ವೇಳೆ ತನ್ನ ತೀರ್ಪನ್ನು ಪ್ರಕಟಿಸಿದೆ.
2002ರಲ್ಲಿ 5 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟ ಸುಲಿಗೆ ಆರೋಪದ ಪ್ರಕರಣದಲ್ಲಿ ಅಬು ಸಲೇಂ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬುಸಲೇಂ ಅವರನ್ನು ಅಪರಾಧಿ ಎಂದು ಮೇ 26ರಂದು ಘೋಷಿಸಲಾಗಿತ್ತು.
ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ನ ನಿವಾಸಿಯಾಗಿರುವ ಅಶೋಕ್ ಗುಪ್ತಾ ಅವರಿಂದ 5 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಅಬು ಸಲೇಂ,ಅಶೋಕ್ ಗುಪ್ತಾ ಮತ್ತು ಅವರ ಮಗ ಅಭಿಷೇಕ್ ಅವರಿಗೆ 2002ರ ಏಪ್ರಿಲ್ನಲ್ಲಿ ಕರೆ ಮಾಡಿ, ಹಣ ನೀಡದಿದ್ದರೆ ಕುಟುಂಬದ ಸದಸ್ಯರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದು, ಸಾಬೀತಾಗಿತ್ತು.
ಇದಲ್ಲದೆ, ಮುಂಬೈ ಸರಣಿ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಅಬು ಸಲೇಂ ಅವರು ಕಳೆದ ಏಪ್ರಿಲ್ ತಿಂಗಳಿನಲ್ಲಿ ತಮ್ಮ ಮದುವೆಗಾಗಿ ಜೈಲಿನಿಂದ ಹೊರಕ್ಕೆ ಹೋಗಲು ಪೆರೋಲ್ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ವಜಾಗೊಂಡಿತ್ತು.
1993 ರಲ್ಲಿ ಮುಂಬೈಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನ ಮೃತರಾಗಿದ್ದರು, 713 ಜನ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಅಬು ಸಲೇಂ ಕೈವಾಡವೂ ಇದೆ ಎಂಬುದು ವಿಚಾರಣೆಯ ನಂತರ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಟಾಡಾ(Terrorist and Disruptive Activity ) ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ಅವರೀಗ ಮುಂಬೈಯ ತಾಲೋಜಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.