ಶಶಿ ತರೂರ್ ಜಾಮೀನು ಅರ್ಜಿ ತೀರ್ಪು ಗುರುವಾರ ಪ್ರಕಟ
ನವದೆಹಲಿ, ಜುಲೈ 4: ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಗುರುವಾರಕ್ಕೆ ಕಾಯ್ದಿರಿಸಿದೆ.
ಇದರ ಬೆನ್ನಲ್ಲೇ, ಶಶಿ ತರೂರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಶೇಷ ತನಿಖಾ ತಂಡ (ಎಸ್ಐಸಿ) ಪಟಿಯಾಲ ಹೌಸ್ ಕೋರ್ಟ್ನಲ್ಲಿ ವಿರೋಧಿಸಿದೆ.
ಸುನಂದಾ ಪುಷ್ಕರ್ ಪ್ರಕರಣ:ನಿರೀಕ್ಷಣಾ ಜಾಮೀನಿಗೆ ತರೂರ್ ಅರ್ಜಿ
'ನಾವು ತೀರ್ಪು ಹೊರಬೀಳುವುದನ್ನು ಕಾಯಲಿದ್ದೇವೆ. ಅದನ್ನು ನಾಳೆಗೆ ಕಾಯ್ದಿರಿಸಲಾಗಿದೆ. ನಾವು ಕೋರ್ಟ್ನಲ್ಲಿ ವಾದ ಮಂಡಿಸಿದ್ದೇವೆ. ಫಲಿತಾಂಶ ಏನು ಸಿಗುತ್ತದೆ ಎಂಬುದನ್ನು ನೋಡೋಣ. ಒಂದು ತಿಂಗಳ ಹಿಂದೆ ಸಲ್ಲಿಸಿದ್ದ ತಮ್ಮದೇ ದೋಷಾರೋಪಪಟ್ಟಿಗೆ ವಿರುದ್ಧವಾಗಿರುವ ವರದಿಯನ್ನು ಎಸ್ಐಸಿ ನ್ಯಾಯಾಲಯಕ್ಕೆ ಇಂದು ಸಲ್ಲಿಕೆ ಮಾಡಿದೆ' ಎಂದು ತರೂರ್ ಪರ ವಕೀಲ ವಿಕಾಸ್ ಪಾಹ್ವಾ ತಿಳಿಸಿದರು.
ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 5ರಂದು ದೆಹಲಿ ಕೋರ್ಟ್ ಶಶಿ ತರೂರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಈ ಪ್ರಕರಣದಲ್ಲಿ ತರೂರ್ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕ್ರೌರ್ಯದ ಆರೋಪಗಳನ್ನು ಹೊರಿಸಲಾಗಿದೆ. ಜುಲೈ 7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತು. ಪ್ರಕರಣದಲ್ಲಿ ಸಲ್ಲಿಸಲಾದ ದೋಷಾರೋಪವನ್ನು ಸಹ ಕೋರ್ಟ್ ಪರಿಗಣನೆಗೆ ತೆಗೆದುಕೊಂಡಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿದ್ದ ದೆಹಲಿ ಕೋರ್ಟ್, ಮೇ 24ರಂದು ಪ್ರಕರಣವನ್ನು ಹೆಚ್ಚುವರಿ ಮುಖ್ಯ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಧೀಶ ಸಮರ್ ವಿಶಾಲ್ ಅವರಿಗೆ ವರ್ಗಾಯಿಸಿತ್ತು.
ತರೂರ್ ಅವರು ಹಾಲಿ ಸಂಸದರಾಗಿರುವುದರಿಂದ ರಾಜಕಾರಣಿಗಳಿಗಾಗಿ ವಿಶೇಷವಾಗಿ ರೂಪಿಸಿರುವ ಎಸಿಎಂಎಂನಲ್ಲಿ ವಿಚಾರಣೆ ನಡೆಯುವುದು ಸೂಕ್ತ ಎಂದು ಅದು ಹೇಳಿತ್ತು.
ತರೂರ್ ಅವರನ್ನು ಆರೋಪಿಯನ್ನಾಗಿ ಹೆಸರಿಸಿ ದೆಹಲಿ ಪೊಲೀಸರು ಮೇ 14ರಂದು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.