ಕುತುಬ್ ಮಿನಾರ್ನಲ್ಲಿ ದೇವಾಲಯ ಮರುಸ್ಥಾಪನಾ ಅರ್ಜಿ ತಿರಸ್ಕತ
ನವದೆಹಲಿ, ಡಿಸೆಂಬರ್ 09: ದಿಲ್ಲಿಯ ಐತಿಹಾಸಿಕ ಕುತುಬ್ ಮಿನಾರ್ ಅಡಿಯಲ್ಲಿ ಈ ಹಿಂದೆ ಹಿಂದೂ ದೇವಾಲಯವಿದ್ದು, ಅದನ್ನು ಧ್ವಂಸಗೊಳಿಸಲಾಗಿದೆ. ಹೀಗಾಗಿ ಅಲ್ಲಿ ದೇಗುಲವನ್ನು ಮರುಸ್ಥಾಪಿಸಿ ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕು ಎಂಬ ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ.
ಅಯೋಧ್ಯೆ ಭೂ ವಿವಾದ ಪ್ರಕರಣ ಉಲ್ಲೇಖಿಸಿದ ದೆಹಲಿ ನ್ಯಾಯಾಲಯವು ಕುತುಬ್ ಮಿನಾರ್ ಸಂಕೀರ್ಣದೊಳಗೆ ಹಿಂದೂ ಮತ್ತು ಜೈನ ದೇವತೆಗಳ ಜೀರ್ಣೋದ್ಧಾರ ಮತ್ತು ಪೂಜಿಸುವ ಹಕ್ಕಿನ ಸಿವಿಲ್ ಮೊಕದ್ದಮೆಯನ್ನು ತಿರಸ್ಕರಿಸಿದೆ. ಹಿಂದಿನ ತಪ್ಪುಗಳು ಪ್ರಸ್ತುತ ಮತ್ತು ಭವಿಷ್ಯದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಮೊಕದ್ದಮೆಯನ್ನು ತಿರಸ್ಕರಿಸಿದ ಸಿವಿಲ್ ನ್ಯಾಯಾಧೀಶೆ ನೇಹಾ ಶರ್ಮಾ, "ಭಾರತವು ಸಾಂಸ್ಕೃತಿಕವಾಗಿ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಇದು ಹಲವಾರು ರಾಜವಂಶಗಳಿಂದ ಆಳಲ್ಪಟ್ಟಿದೆ. ವಾದಗಳ ಸಮಯದಲ್ಲಿ, ಫಿರ್ಯಾದಿ ಪರ ವಕೀಲರು ರಾಷ್ಟ್ರೀಯ ಅವಮಾನದ ವಿಷಯದಲ್ಲಿ ತೀವ್ರವಾಗಿ ವಾದಿಸಿದ್ದಾರೆ. ಆದಾಗ್ಯೂ, ಹಿಂದೆ ತಪ್ಪುಗಳನ್ನು ಮಾಡಲಾಗಿದೆ ಎಂದು ಯಾರೂ ನಿರಾಕರಿಸಲಿಲ್ಲ, ಆದರೆ ಅಂತಹ ತಪ್ಪುಗಳು ನಮ್ಮ ಪ್ರಸ್ತುತ ಮತ್ತು ಭವಿಷ್ಯದ ಶಾಂತಿಯನ್ನು ಕದಡಲು ಆಧಾರವಾಗುವುದಿಲ್ಲ" ಎಂದಿದ್ದಾರೆ.
ಜೊತೆಗೆ ನ್ಯಾಯಾಧೀಶರು, "ನಮ್ಮ ದೇಶವು ಶ್ರೀಮಂತ ಇತಿಹಾಸವನ್ನು ಹೊಂದಿದೆ ಮತ್ತು ಸವಾಲಿನ ಸಮಯವನ್ನು ಕಂಡಿದೆ. ಅದೇನೇ ಇದ್ದರೂ, ಇತಿಹಾಸವನ್ನು ಒಟ್ಟಾರೆಯಾಗಿ ಒಪ್ಪಿಕೊಳ್ಳಬೇಕು. ನಮ್ಮ ಇತಿಹಾಸದಿಂದ ಒಳ್ಳೆಯದನ್ನು ಉಳಿಸಿಕೊಳ್ಳಬಹುದೇ ವಿನ: ಮತ್ತು ಕೆಟ್ಟದ್ದನ್ನಲ್ಲ" ಎಂದಿದ್ದಾರೆ.
ಅವರು 2019 ರಲ್ಲಿ ಸುಪ್ರೀಂಕೋರ್ಟ್ ನೀಡಿದ ಅಯೋಧ್ಯೆ ತೀರ್ಪನ್ನು ಉಲ್ಲೇಖಿಸಿದರು. ಅದರ ಒಂದು ಭಾಗವನ್ನು ಆದೇಶದಲ್ಲಿ ಹೈಲೈಟ್ ಮಾಡಿದರು. "ನಾವು ನಮ್ಮ ಇತಿಹಾಸ ಮತ್ತು ರಾಷ್ಟ್ರವು ಎದುರಿಸುವ ಸಮಸ್ಯೆಗಳನ್ನು ತಿಳಿದಿರುವ ಕಾರಣ, ಜನರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಮೂಲಕ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿಲ್ಲ" ಎಂದರು.
ಭಾರತೀಯ ಸಂವಿಧಾನದ 25 ಮತ್ತು 26 ನೇ ವಿಧಿಯಿಂದ ನೀಡಲಾದ ತಮ್ಮ ಧರ್ಮವನ್ನು ಚಲಾಯಿಸುವ ಹಕ್ಕು ಆರಾಧಕರಿಗೆ ಇದೆ ಮತ್ತು ದೇವತೆಗಳನ್ನು ತಮ್ಮ ಮೂಲ ಸ್ಥಳದಲ್ಲಿ ಗೌರವಾನ್ವಿತವಾಗಿ ಮರುಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂಬ ಫಿರ್ಯಾದಿದಾರರ ವಾದವು ಶೂನ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಒಮ್ಮೆ ರಚನೆಯನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಿ ಸರ್ಕಾರದ ಒಡೆತನದಲ್ಲಿದ್ದರೆ, ಆ ಸ್ಥಳವನ್ನು ಧಾರ್ಮಿಕ ಸೇವೆಗಳಿಗೆ ವಾಸ್ತವವಾಗಿ ಮತ್ತು ಸಕ್ರಿಯವಾಗಿ ಬಳಸಬೇಕು ಎಂದು ಫಿರ್ಯಾದಿಗಳು ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ದಿಲ್ಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ, ಕುತುಬ್ ಮಿನಾರ್ ಇರುವ ಸಂಕೀರ್ಣದೊಳಗೆ ಈ ಹಿಂದೆ ಜೈನ ತೀರ್ಥಂಕರ ಭಗವಾನ್ ರಿಷಭ್ ದೇವ್ ಮತ್ತು ಪ್ರಧಾನ ದೇವತೆಗಳಾದ ವಿಷ್ಣು, ಗಣೇಶ, ಶಿವ,ಗೌರಿ, ಸೂರ್ಯದೇವ, ಹನುಮನ ಮಂದಿರ ಸೇರಿದಂತೆ 27ಕ್ಕೂ ಹೆಚ್ಚು ದೇಗುಲಗಳಿದ್ದವು. ಇವುಗಳನ್ನು ಕುತುಬ್ ದಿನ್ ಐಬಕ್ ಧ್ವಂಸಗೊಳಿಸಿ ಅಲ್ಲಿ ಮಿನಾರ್ ಸ್ಥಾಪಿಸಿದ್ದಾನೆ. ಹೀಗಾಗಿ ಆ ಜಾಗದಲ್ಲಿ ದೇಗುಲವನ್ನು ಮರುಸ್ಥಾಪಿಸಿ ಅಲ್ಲಿ ಪೂಜೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅರ್ಜಿಯಲ್ಲಿ ವಕೀಲರಾದ ಹರಿಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿ ಉಲ್ಲೇಖಿಸಿದ್ದಾರೆ.
ಅಲ್ಲದೇ ದೇಗುಲದ ದುರಸ್ಥಿ ಕೆಲಸ ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ಹಾಗೂ ಪೂಜೆ, ದರ್ಶನದ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಪ್ರಾಚ್ಯವಸ್ತು ಇಲಾಖೆ ಮಧ್ಯ ಪ್ರವೇಶಿಸದಂತೆ ಶಾಶ್ವತವಾಗಿ ತಡೆಯೊಡ್ಡಬೇಕು. ಜೊತೆಗೆ ಕುತುಬ್ ಸಂಕೀರ್ಣದೊಳಗೆ ಇರುವ ಈ ದೇಗುಲಗಳಿಗೆ ಟ್ರಸ್ಟ್ ಸ್ಥಾಪಿಸಿ ದೇವಾಲಯದ ನಿರ್ವಹಣೆ ಮತ್ತು ಆಡಳಿತವನ್ನು ಟ್ರಸ್ಟ್ಗೆ ವರ್ಗಾಯಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.ಇದೀಗ ಈ ವಿಚಾರ ಸಾಕಷ್ಟು ಪರವಿರೋಧ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶೆ ನೇಹಾ ಶರ್ಮಾ ಅವರು ಡಿಸೆಂಬರ್ 24ಕ್ಕೆ ಮುಂದೂಡಿದ್ದಾರೆ.
Recommended Video