ರೋಡ್ ಶೋ ವೇಳೆ ಕೇಜ್ರಿವಾಲ್ ಗೆ ಕಪಾಳಮೋಕ್ಷ: ಆಪ್ ಕಾರ್ಯಕರ್ತನಿಂದಲೇ ಹಲ್ಲೆ?
ರೋಡ್ ಶೋ ವೇಳೆ ಕೇಜ್ರಿಗೆ ಕಪಾಳಮೋಕ್ಷ: ಆಪ್ ಕಾರ್ಯಕರ್ತನಿಂದಲೇ ಹಲ್ಲೆ?
ನವದೆಹಲಿ, ಮೇ 4: ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೋಡ್ ಶೋ ನಡೆಸುತ್ತಿದ್ದ ವೇಳೆ, ವ್ಯಕ್ತಿಯೊಬ್ಬ ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ನವದೆಹಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೋತಿ ನಗರದಲ್ಲಿ ಪಕ್ಷದ ಅಭ್ಯರ್ಥಿ ಬೃಜೇಶ್ ಗೋಯಲ್ ಪರ ರೋಡ್ ಶೋ ನಡೆಸುತ್ತಿದ್ದ ವೇಳೆ, ಕೆಂಪು ಶರ್ಟ್ ಧರಿಸಿದ್ದ ವ್ಯಕ್ತಿ ಕಾರನ್ನು ಏರಿ, ಕೇಜ್ರಿವಾಲ್ ಮುಖಕ್ಕೆ ಹೊಡೆದಿದ್ದಾನೆ.
ತೆರೆದ ವಾಹನದಲ್ಲಿ ಜನರತ್ತ ಕೈಬೀಸುತ್ತಾ ಸಾಗುತ್ತಿದ್ದ ಕೇಜ್ರಿವಾಲ್ ಈ ಘಟನೆಯಿಂದ ತೀವ್ರ ವಿಚಲಿತರಾಗಿದ್ದಾರೆ. ಕೇಜ್ರಿಗೆ ಹೊಡೆದ ವ್ಯಕ್ತಿ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಲ್ಲೆ ನಡೆಸಿದವನನ್ನು ಸುರೇಶ್ ಎಂದು ಗುರುತಿಸಲಾಗಿದ್ದು ಸದ್ಯ ಪೊಲೀಸರ ವಶದಲ್ಲಿದ್ದಾನೆ. 33ವರ್ಷದ ಈತ ಪೊಲೀಸ್ ವಿಚಾರಣೆಯ ವೇಳೆ, ತಾನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಮತ್ತು ದೆಹಲಿಯ ಕೈಲಾಶ್ ಪಾರ್ಕ್ ನಿವಾಸಿ ಎನ್ನುವ ಮಾಹಿತಿಯನ್ನು ನೀಡಿದ್ದಾನೆಂದು ಇಂಡಿಯಾ ಟುಡೇ ವರದಿ ಮಾಡಿದೆ.
ಆದರೆ, ಘಟನೆಯ ನಂತರ ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್ ಪಕ್ಷ ಇದು ಬಿಜೆಪಿಯದ್ದೇ ಕೆಲಸ ಎಂದು ದೂರಿವೆ. ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯೂ ಕೇಜ್ರಿವಾಲ್ ಮೇಲೆ ವ್ಯಕ್ತಿಯೊರ್ವ ಕಪಾಳ ಮೋಕ್ಷ ಮಾಡಿದ್ದ.ಆ ಘಟನೆ ದೆಹಲಿಯ ದಕ್ಷಿಣಪುರಿ ವ್ಯಾಪ್ತಿಯಲ್ಲಿ ನಡೆದಿತ್ತು.