ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ
ನವದೆಹಲಿ, ಫೆ. 14 : ಪ್ರಸಕ್ತ ಅಧಿವೇಶನದಲ್ಲಿ ಜನ ಲೋಕಪಾಲ್ ಮಸೂದೆ ಮಂಡನೆಯಾಗದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಸೂದೆ ಮಂಡನೆಯಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದರಿಂದಾಗಿ 48 ದಿನಗಳ ಅರವಿಂದ್ ಕೇಜ್ರಿವಾಲ್ ಸರಕಾರ ವಿಧಾನಸಭೆ ವಿಸರ್ಜಿಸಲು ಮತ್ತು ಮತ್ತೆ ಚುನಾವಣೆ ಎದುರಿಸಲು ಸಜ್ಜಾಗಿರುವುದಾಗಿ ಹೇಳಿದೆ. ವಿಧಾನಸಭೆಯಲ್ಲಿ ಜನ ಲೋಕಪಾಲ ಮಸೂದೆ ಮಂಡನೆಯಾಗದಿದ್ದುದಕ್ಕೆ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರವನ್ನು ನೇರ ಹೊಣೆಗಾರರನ್ನಾಗಿ ಮಾಡಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಜನರು ಈ ಎರಡೂ ಪಕ್ಷಗಳಿಗೆ ತಕ್ಕ ಬುದ್ಧಿ ಕಲಿಸಲಿದ್ದಾರೆ ಎಂದು ಗುಡುಗಿರುವ ಅವರು, ಬಿಜೆಪಿಗೆ ದೇಣಿಗೆ ನೀಡುತ್ತಿರುವ ಮುಖೇಶ್ ಅಂಬಾನಿ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರಿಂದ ಜನ ಲೋಕಪಾಲ ಮಸೂದೆ ಮಂಡನೆಯಾಗದಂತೆ ತಡೆಹಿಡಿದಿದ್ದಾರೆ ಎಂದು ಕೇಜ್ರಿವಾಲ್ ದೂರಿದ್ದಾರೆ. [ಕೇಜ್ರಿವಾಲ್ ಸರಕಾರದ ಸಾಧನೆಗಳು]
ನಮಗೆ ಆಡಳಿತ ನಡೆಸಲು ಬರುವುದಿಲ್ಲವೆಂದು ವಿರೋಧ ಪಕ್ಷದವರು ದೂರುತ್ತಿದ್ದಾರೆ. ನಾವು 48 ದಿನಗಳಲ್ಲಿ ದೆಹಲಿಯ ವಿದ್ಯುತ್, ನೀರಿನ ಬೆಲೆಗಳನ್ನು ಇಳಿಸಿದ್ದೇವೆ, ಭ್ರಷ್ಟಾಚಾರಿಗಳನ್ನು ಮಟ್ಟಹಾಕಿದ್ದೇವೆ. ಭ್ರಷ್ಟರನ್ನು ಜೈಲಿಗೆ ಕಳುಹಿಸುವುದು ಆಡಳಿತ ನಡೆಸಿದಂತಲ್ಲವೆ? ಭ್ರಷ್ಟರ ವಿರುದ್ಧ ಕ್ರಮ ಜರುಗಿಸುವುದೇ ಆಡಳಿತ ಎಂದು ಅರವಿಂದ್ ಕೇಜ್ರಿವಾಲ್ ಅವರು ಪ್ರತ್ಯುತ್ತರ ನೀಡಿದ್ದಾರೆ. [ಕೇಜ್ರಿವಾಲ್ ಸರಕಾರದ ಎಡವಟ್ಟುಗಳು]
ಅಣ್ಣಾ ಹಜಾರೆ ಟೀಕೆ : ದೆಹಲಿ ವಿಧಾನಸಭೆಯನ್ನು ವಿಸರ್ಜಿಸಲು ಅರವಿಂದ್ ಕೇಜ್ರಿವಾಲ್ ಸರಕಾರ ನಿರ್ಧರಿಸಿದ ನಿರ್ಣಯವನ್ನು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ತೀವ್ರವಾಗಿ ಟೀಕಿಸಿದ್ದಾರೆ. ಲೋಕಪಾಲ್ ಮತ್ತು ಸ್ವರಾಜ್ ಮಸೂದೆ ಮಂಡನೆಯಾಗಲಿಲ್ಲವೆಂದು ರಾಜೀನಾಮೆ ನೀಡಿದ್ದು ನಿಜಕ್ಕೂ ದುರದೃಷ್ಟಕರ ಎಂದು ಅವರು ಕಿಡಿ ಕಾರಿದ್ದಾರೆ.[ಬಹುಮತ ಕಳೆದುಕೊಂಡ ಆಪ್ ಸರಕಾರ]
ದೆಹಲಿ ಕಾಂಗ್ರೆಸ್ ನಾಯಕ ಅರವಿಂದರ್ ಸಿಂಗ್ ಲವ್ಲಿ ಕೂಡ ಕೇಜ್ರಿವಾಲ್ ಅವರ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಲೋಕಪಾಲ ಮಸೂದೆ ಮಂಡನೆಗೆ ಕಾಂಗ್ರೆಸ್ ವಿರೋಧಿಯಾಗಿರಲಿಲ್ಲ. ಇದಕ್ಕಾಗಿ ಕೇಂದ್ರದ ಬಳಿ ಹೋಗಲು ಕೂಡ ಸಿದ್ಧವಿತ್ತು. ಆದರೆ, ರಾಜ್ಯಪಾಲರು ಅಪೇಕ್ಷಿಸಿದಂತೆ ಕಾನೂನಿನ ಚೌಕಟ್ಟಿನಡಿಯಲ್ಲಿ ಮಾತ್ರ ಮಸೂದೆ ಮಂಡನೆಗೆ ಸಿದ್ಧರಿದ್ದೆವು. ಆದರೆ, ಕೇಜ್ರಿವಾಲ್ ಅವರಿಗೆ ಅನಗತ್ಯ ವಿಷಯಗಳನ್ನು ಕೆದಕಲು ನೆವ ಬೇಕಾಗಿತ್ತು ಎಂದು ದೂರಿದ್ದಾರೆ.