Breaking: ನ್ಯೂಯಾರ್ಕ್ ಟೈಮ್ಸ್ನಲ್ಲಿ ವರದಿ ಬಂದ ದಿನವೇ ಸಿಬಿಐ ದಾಳಿ!
ನವದೆಹಲಿ, ಆಗಸ್ಟ್ 19: "ಅಮೆರಿಕದ ಪತ್ರಿಕೆಯಲ್ಲಿ ದೆಹಲಿಯ ಶಿಕ್ಷಣ ಮಾದರಿಯನ್ನು ಶ್ಲಾಘಿಸಿ, ಮೊದಲ ಪುಟದಲ್ಲಿ ಮನೀಶ್ ಸಿಸೋಡಿಯಾ ಫೋಟೋ ಬಂದ ದಿನದಂದೇ ಕೇಂದ್ರದಿಂದ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ" ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿ ಮತ್ತು ಎಎಪಿ ನಡುವೆ ಕೆಲವು ವಾರಗಳಿಂದ ವಿವಾದದ ವಿಷಯವಾಗಿರುವ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸಿಬಿಐ ಶುಕ್ರವಾರ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ದಾಳಿ ನಡೆಸಿದೆ.
ಈ ಬೆನ್ನಲ್ಲೆ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರಕಾರವನ್ನು ಗುರಿಯಾಗಿಸಿ ಕೊಂಡು ವಾಗ್ದಾಳಿ ನಡೆಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ನಲ್ಲಿನ ಲೇಖನ ಮತ್ತು ತನಿಖಾ ಸಂಸ್ಥೆಯ ದಾಳಿಗೆ ಲಿಂಕ್ ಮಾಡಿದ್ದಾರೆ.
"ಅಮೆರಿಕದ ಅತಿದೊಡ್ಡ ಪತ್ರಿಕೆಯು ದೆಹಲಿಯ ಶಿಕ್ಷಣ ಮಾದರಿಯನ್ನು ಶ್ಲಾಘಿಸುವ ಲೇಖನದೊಂದಿಗೆ ಮೊದಲ ಪುಟದಲ್ಲಿಯೇ ಮನೀಶ್ ಸಿಸೋಡಿಯಾ ಅವರ ಫೋಟೋವನ್ನು ಹಾಕಿದೆ. ಅದೇ ದಿನ ಕೇಂದ್ರದಿಂದ ಸಿಬಿಐ ತಂಡಗಳನ್ನು ಅವರ ಮನೆಗೆ ಕಳುಹಿಸಲಾಗಿದೆ" ಎಂದು ಕೇಜ್ರಿವಾಲ್ ಟೀಕಿಸಿದರು.
''ಸಿಬಿಐ ಸ್ವಾಗತಾರ್ಹ. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಈ ಹಿಂದೆಯೂ ಹುಡುಕಾಟ ನಡೆಸಲಾಗಿದ್ದು, ಏನೂ ಪತ್ತೆಯಾಗಿರಲಿಲ್ಲ. ಈ ಬಾರಿಯೂ ಅದೇ ಆಗಲಿದೆ" ಎಂದು ಮುಖ್ಯಮಂತ್ರಿ ಹೇಳಿದರು.
"ಇಡೀ ಜಗತ್ತು ದೆಹಲಿಯ ಶಿಕ್ಷಣ ಮತ್ತು ಆರೋಗ್ಯ ಮಾದರಿಯನ್ನು ಚರ್ಚಿಸುತ್ತಿದೆ. ಆದರೆ, ಅವರು ಅದನ್ನು ನಿಲ್ಲಿಸಲು ಬಯಸುತ್ತಿದ್ದಾರೆ. ಅದಕ್ಕಾಗಿಯೇ ದೆಹಲಿಯ ಆರೋಗ್ಯ ಮತ್ತು ಶಿಕ್ಷಣ ಮಂತ್ರಿಗಳ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ. ಅವರನ್ನು ಬಂಧಿಸಲಾಗುತ್ತಿದೆ. ಈ 75 ವರ್ಷಗಳಲ್ಲಿ ಒಳ್ಳೆಯ ಕೆಲಸ ಮಾಡಲು ಯತ್ನಿಸಿದವರನ್ನೆಲ್ಲಾ ತಡೆಯಲಾಗಿದೆ. ಅದಕ್ಕಾಗಿಯೇ ಭಾರತ ಹಿಂದುಳಿದಿದೆ. ಆದರೆ, ದೆಹಲಿಯಲ್ಲಿನ ಒಳ್ಳೆಯ ಕೆಲಸಗಳನ್ನು ನಿಲ್ಲಿಸಲು ಬಿಡುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 21ಕ್ಕೂ ಹೆಚ್ಚು ಸ್ಥಳಗಳ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸುತ್ತಿದೆ.
ಮನೀಶ್ ಸಿಸೋಡಿಯಾ ಅವರು ಸಿಬಿಐ ಅಧಿಕಾರಿಗಳನ್ನು ತಮ್ಮ ನಿವಾಸಕ್ಕೆ ಸ್ವಾಗತಿಸಿದ್ದಾರೆ. ಅವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಟ್ವೀಟ್ ಮಾಡಿರುವ ಸಿಸೋಡಿಯಾ, ನಮ್ಮ ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ಕಿರುಕುಳ ನೀಡುತ್ತಿರುವುದು ದುರದೃಷ್ಟಕರ. ಆದ್ದರಿಂದಲೇ ನಮ್ಮ ದೇಶ ಇನ್ನೂ ನಂಬರ್ 1 ಆಗಿಲ್ಲ ಎಂದಿದ್ದಾರೆ.