ಸೋಲಿನ ಬಳಿಕ ತಣ್ಣಗಾದರೆ ಕೇಜ್ರಿವಾಲ್: ಮಾತಿನ ದಾಟಿಯೇ ಬದಲು
ನವದೆಹಲಿ, ಜೂನ್ 22: ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಟುವಾದ ಹೇಳಿಕೆಗಳನ್ನು ನೀಡುತ್ತಿದ್ದ ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆಘಾತಕಾರಿ ಸೋಲಿನ ಬಳಿಕ ತಣ್ಣಗಾಗಿದ್ದಾರೆಯೇ?
ಚುನಾವಣೆಗೂ ಮುನ್ನ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಹೇಳಿಕೆಗಳನ್ನು ನೀಡುತ್ತಿದ್ದ ಅವರು, ಈಗ ಅಷ್ಟಾಗಿ ಸುದ್ದಿ ಮಾಡುತ್ತಿಲ್ಲ. ಮಾತ್ರವಲ್ಲ, ಮೋದಿ ಅವರೆಡೆಗಿನ ತಮ್ಮ ಕಠಿಣ ನಿಲುವು ಸಡಿಲಿಸಿ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕೆ ಅವರು ಮಾಡಿರುವ ಟ್ವೀಟ್ ಕೂಡ ಪುರಾವೆಯಂತಿದೆ.
ಎರಡನೆಯ ಅವಧಿಯ ಎನ್ಡಿಎ ಸರ್ಕಾರ ರಚನೆಯಾದ ಬಳಿಕ ಕೇಜ್ರಿವಾಲ್ ಅವರು ಶುಕ್ರವಾರ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಸಾಮಾನ್ಯವಾಗಿ ಮೋದಿ ಅವರ ಭೇಟಿ ಬಳಿಕವೂ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕೇಜ್ರಿವಾಲ್, ಮೋದಿ ಅವರೊಂದಿಗೆ ಸ್ನೇಹಪರ ಸಂಬಂಧದ ಸೂಚನೆ ನೀಡಿದ್ದಾರೆ.
ಮಹಿಳೆಯರಿಗೆ ಬಸ್, ಮೆಟ್ರೋ ಪ್ರಯಾಣ ಉಚಿತ: ಕೇಜ್ರಿವಾಲ್ ಹೊಸ ಪ್ಲ್ಯಾನ್
'ಮೋದಿ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯ ಗೆಲುವಿಗಾಗಿ ಅಭಿನಂದಿಸಿದೆ' ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಅದೇ ರೀತಿ ಈ ಮುಂಗಾರು ಅವಧಿಯಲ್ಲಿ ಯಮುನಾ ತೀರದಲ್ಲಿ ಬೆಳೆಬೆಳೆಯಲು ಅಗತ್ಯ ನೆರವು ನೀಡುವಂತೆ ಮೋದಿ ಅವರಿಗೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ತೀವ್ರ ಮೆಚ್ಚುಗೆಗೆ ಪಾತ್ರವಾದ ಎಎಪಿಯ ಆರೋಗ್ಯ ನೀತಿಯ ಭಾಗವಾಗಿರುವ ಪ್ರಾಥಮಿಕ ವೈದ್ಯಕೀಯ ಕೇಂದ್ರ 'ಮೊಹಲ್ಲಾ ಕ್ಲಿನಿಕ್'ಗೆ ಭೇಟಿ ನೀಡುವಂತೆ ಸಹ ಮೋದಿ ಅವರನ್ನು ಆಹ್ವಾನಿಸಿದರು.
ಪ್ರಧಾನಿಗೆ ಆಹ್ವಾನ
'ದೆಹಲಿ ಸರ್ಕಾರವು ಮಳೆಗಾಲದ ಅವಧಿಯಲ್ಲಿ ಯಮುನಾ ನೀರನ್ನು ಸಂಗ್ರಹಿಸಲು ಉದ್ದೇಶಿಸಿದೆ. ಒಂದು ಅವಧಿಯ ನೀರು ದೆಹಲಿಯ ಒಂದು ವರ್ಷದ ನೀರಿನ ಅಗತ್ಯಕ್ಕೆ ಸಾಕು. ಇದಕ್ಕೆ ಕೇಂದ್ರದ ಸಹಕಾರವನ್ನು ಕೋರಲಾಗಿದೆ. ಮೊಹಲ್ಲಾ ಕ್ಲಿನಿಕ್ ಮತ್ತು ದೆಹಲಿ ಸರ್ಕಾರಿ ಶಾಲೆಗೆ ಭೇಟಿ ನೀಡುವಂತೆ ಪ್ರಧಾನಿ ಅವರನ್ನು ಆಹ್ವಾನಿಸಿದೆ' ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ನರೇಂದ್ರ ಮೋದಿ ನನ್ನ ಸಾವು ಬಯಸಿದ್ದಾರೆ: ಅರವಿಂದ್ ಕೇಜ್ರಿವಾಲ್
ಸಂಪೂರ್ಣ ಸಹಕಾರದ ಭರವಸೆ
ಭಾರತದ ರಾಜಧಾನಿ, ದೆಹಲಿ ನಗರವನ್ನು ಅಭಿವೃದ್ಧಿಪಡಿಸಲು ದೆಹಲಿ ಸರ್ಕಾರದ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದೇನೆ. ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಕೆಲಸ ಮಾಡುವುದು ಮುಖ್ಯ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಜತೆ ವಿಲೀನ
'ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಲಾಯಿತು. ದೆಹಲಿ ಸರ್ಕಾರದ ದೆಹಲಿ ಆರೋಗ್ಯ ಯೋಜನೆ ಹೆಚ್ಚು ದೊಡ್ಡ ಮತ್ತು ವಿಶಾಲವಾಗಿದೆ ಎಂದು ಗೌರವಾನ್ವಿತ ಪ್ರಧಾನಿಯವರಿಗೆ ವಿವರಿಸಲಾಯಿತು. ನಮ್ಮ ಯೋಜನೆಯೊಂದಿಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ನಮ್ಮ ಯೋಜನೆಯೊಂದಿಗೆ ಸೇರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ-ಎಎಪಿ ಯುದ್ಧ ಈಗ ತಣ್ಣಗೆ
2015ರಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಿಂದಲೂ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಹಾಗೂ ದೆಹಲಿ ಸರ್ಕಾರದ ನಡುವೆ ನೇರ ಗುದ್ದಾಟ ನಡೆದಿತ್ತು. ತಮ್ಮನ್ನು ಇಂದಿರಾ ಗಾಂಧಿ ಅವರಂತೆ ಹತ್ಯೆ ಮಾಡಲಾಗುತ್ತದೆ. ಪ್ರಧಾನಿ ಮೋದಿ ತಮ್ಮ ಸಾವನ್ನು ಬಯಸಿದ್ದಾರೆ ಎಂದೂ ಕೇಜ್ರಿವಾಲ್ ಆರೋಪಿಸಿದ್ದರು. ರಾಜ್ಯದಲ್ಲಿ ಆಡಳಿತ ನಡೆಸಲು ಕೇಂದ್ರ ಸರ್ಕಾರ ಬಿಡುತ್ತಿಲ್ಲ ಎಂದು ದೂರಿದ್ದರು. ಆದರೆ, ಲೋಕಸಭೆ ಚುನಾವಣೆ ಬಳಿಕ ಎಎಪಿಯಿಂದ ಈ ರೀತಿ ಆರೋಪ ಅಥವಾ ಟೀಕೆಗಳು ಕಂಡುಬಂದಿಲ್ಲ.