ಧರಣಿ ನಿರತ ದೆಹಲಿ ಸಿಎಂ ಬಂಧಿಸಬೇಕಾ?!
ನವದೆಹಲಿ, ಜ.20: ಕೇಂದ್ರ ಗೃಹ ಸಚಿವಾಲಯದ ಮುಂದೆ ತನ್ನ ಬೆಂಬಲಿಗರೊಂದಿಗೆ ಧರಣಿಗೆ ಮುಂದಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಬೆಂಬಲಿಗರನ್ನು ಬಂಧಿಸಬೇಕಾ? ಬೇಡ್ವಾ? ಎಂಬ ಗೊಂದಲಕ್ಕೆ ದೆಹಲಿ ಪೊಲೀಸರು ಈಡಾಗಿದ್ದಾರೆ.
ದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವಾಲಯದ ನಾರ್ಥ್ ಬ್ಲಾಕಿನಲ್ಲಿ ಸೋಮವಾರ(ಜ.20) ಧರಣಿ ನಡೆಸಲು ಮುಂದಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ರೈಲ್ ಭವನ್ ಪೊಲೀಸರು ತಡೆ ಹಿಡಿದು ಸುತ್ತುವರೆದಿದ್ದಾರೆ. ಕೇಂದ್ರ ದೆಹಲಿಯಲ್ಲಿ ಹೆಚ್ಚುವರಿ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.[ಅರವಿಂದ್ 'ಧರಣಿ'ಸರ್ಕಾರ: ನಗೆ ಟ್ವೀಟ್ಸ್]
ಬಂಧಿತ ಭಯೋತ್ಪಾದಕ ಯಾಸೀನ್ ಭಟ್ಕಳ್ ಬಿಡುಗಡೆ ಸಲುವಾಗಿ ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಂಘಟನೆಯ ಉಗ್ರರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನು ಅಪಹರಿಸುವ ಸಂಚು ನಡೆಸಿದ್ದಾರೆ ಎಂಬ ಗುಪ್ತಚರ ಇಲಾಖೆ ವರದಿಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಎಎಪಿ ನಾಯಕನ ಮನೆ ಸುತ್ತ ಭಾರೀ ಬಿಗಿಭದ್ರತೆ ಏರ್ಪಡಿಸಿರುವುದು ಒಂದು ಕಡೆಯಾದರೆ, ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಮುಖ್ಯಮಂತ್ರಿ ಉದ್ಧಟತನ ತೋರಿದ ಪೊಲೀಸರ ಅಮಾನತಿಗೆ ಆಗ್ರಹಿಸಿ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಮನೆ ಎದುರು ಧರಣಿಗೆ ಕುಳಿತಿದ್ದಾರೆ.
ಪೊಲೀಸ್ ವಿರುದ್ಧ ನಿಂತ ಕೇಜ್ರಿವಾಲ್ ಬಂಧನ?
ದೆಹಲಿ ಪೊಲೀಸ್ ಕಾಯ್ದೆ ಸೆಕ್ಷನ್ 65 ರ ಅನ್ವಯ ಕೇಜ್ರಿವಾಲ್,ಸೋಮನಾಥ್ ಭಾರ್ತಿ, ರಾಕಿ ಬಿರ್ಲಾ ಮುಂತಾದವರನ್ನು ಬಂಧಿಸಬಹುದಾಗಿದೆ. ಆದರೆ, ದೆಹಲಿ ಪೊಲೀಸರು ಕೇಜ್ರಿವಾಲ್ ತಂಡವನ್ನು ಸದ್ಯಕ್ಕೆ ನಿಯಂತ್ರಿಸುವಲ್ಲಿ ಸಫಲರಾಗಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರ ಈ ಪ್ರಯತ್ನವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ನಿವಾಸದ ಸುತ್ತಮುತ್ತಲಿನ ಪ್ರದೇಶದಲ್ಲಿ 144ನೇ ವಿಧಿ ಜಾರಿ ಮಾಡಿದ್ದಾರೆ. ಕೇಜ್ರಿವಾಲ್ ತಮ್ಮ ಜನಗಳೊಂದಿಗೆ ಧರಣಿಗೆ ಕುಳಿತರೆ ಅವರನ್ನು ಬಂಧಿಸುವ ಉದ್ದೇಶದಿಂದಲೇ ಗೃಹ ಇಲಾಖೆ ಈ ತಂತ್ರ ಹೂಡಿದೆ ಎಂದು ಹೇಳಲಾಗಿದೆ. ನಿಷೇಧಾಜ್ಞೆ ಉಲ್ಲಂಘನೆ ಮಾಡಿದರೆ ಕೇಜ್ರಿವಾಲ್ ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ವಶಪಡಿಸಿಕೊಳ್ಳಬಹುದಾಗಿದೆ
ಆಮ್ ಆದ್ಮಿ ಪಕ್ಷದ ಬೇಡಿಕೆ ಏನು?
ದೆಹಲಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರು ಉಗಾಂಡದ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮಾತನ್ನು ಪೊಲೀಸರು ಕೇಳಿಲ್ಲ ಎಂದಿದ್ದಾರೆ. ಈ ಹಿನ್ನಲೆಯಲ್ಲಿ ಕಾನೂನು ಸಚಿವರ ಆದೇಶ ಪಾಲಿಸದ ಐವರು ಪೊಲೀಸರನ್ನು ಅಮಾನತಗೊಳಿಸಿ ಎಂದು ಕೇಜ್ರಿವಾಲ್ ಅವರು ಕೇಂದ್ರಕ್ಕೆ ಒತ್ತಡ ಹೇರಿದ್ದರು. ಜನವರಿ 20ರೊಳಗೆ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದರು. ಆದರೆ, ಇದರ ಬಗ್ಗೆ ಕೇಂದ್ರ ಯಾವುದೇ ಕ್ರಮ ಕೈಗೊಳ್ಳದಿರುವ ಪರಿಣಾಮ, ಕೇಜ್ರಿವಾಲ್ ಅವರು ಗೃಹ ಸಚಿವಾಲಯದ ಮುಂದೆ ಧರಣಿ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿ ನಾಲ್ಕು ಮೆಟ್ರೊ ಬಂದ್
ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕರು ಗೃಹ ಸಚಿವ ಶಿಂಧೆ ಮನೆಯೆದುರು ಧರಣಿ ನಡೆಸಲು ಸಜ್ಜಾಗಿರುವಂತೆಯೇ ದೆಹಲಿ ಪೊಲೀಸರು ಉತ್ತರ ನಾಲ್ಕು ಮೆಟ್ರೋ ಸ್ಟೇಷನ್ಗಳನ್ನು ಬಂದ್ ಮಾಡಿದ್ದಾರೆ.
ಎಎಪಿ ಮುಖ್ಯಸ್ಥ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಧರಣಿ ಹಿನ್ನೆಲೆಯಲ್ಲಿ ಪಟೇಲ್ಚೌಕ್, ಸೆಂಟ್ರಲ್ ಸೆಕ್ಟ್, ಉದ್ಯೋಗ ಭವನ್ ಹಾಗೂ ರೇಸ್ಕೋಸ್ ಮೆಟ್ರೋ ನಿಲ್ದಾಣಗಳನ್ನು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪೊಲೀಸರು ಮುಚ್ಚಿಸಿದ್ದಾರೆ.
ಪೊಲೀಸ್ -ಎಎಪಿ ಸರ್ಕಾರ ಬಿಕ್ಕಟ್ಟು ಏಕೆ?
ದೆಹಲಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಹಾಗೂ ಪೊಲೀಸರ ನಡುವಿನ ಬಿಕ್ಕಟ್ಟು ಉಲ್ಬಣಗೊಂಡಿದೆ. ಸಚಿವರ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಉಗಾಂಡ ಮಹಿಳೆಯೊಬ್ಬರು ಆರೋಪಿಸಿದ್ದರು. ಸೋಮನಾಥ್ ಭಾರ್ತಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಸೇರಿದಂತೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬಂದಿತ್ತು. ಪೊಲೀಸರು ಆಗುಂತಕ ವ್ಯಕ್ತಿಗಳ ಮೇಲೆ ಎಫ್ ಐಆರ್ ಕೂಡಾ ದಾಖಲಿಸಿದ್ದರು.
ಆದರೆ, ವೇಶ್ಯಾವಾಟಿಕೆ, ಡ್ರಗ್ ಮಾಫಿಯಾದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಉಗಾಂಡ ಮಹಿಳೆಯರಿದ್ದ ವಾಹನ ಹಾಗೂ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸುವಂತೆ ಸಚಿವ ಭಾರ್ತಿ ನೀಡಿದ ಆದೇಶವನ್ನು ಪೊಲೀಸರು ತಿರಸ್ಕರಿಸಿದ್ದರು.
ದೆಹಲಿ ಸರ್ಕಾರದ ವಿರುದ್ಧ ಎಎಪಿ ಪ್ರತಿಭಟನೆ
ಅರವಿಂದ್ ಕೇಜ್ರಿವಾಲ ಅವರಿಗೆ ಎಎಪಿ ಕಾರ್ಯಕರ್ತರೇ ತಿರುಗುಬಾಣವಾಗಿದ್ದಾರೆ. ಎಎಪಿ ಶಾಸಕ ವಿನೋದ್ ಬಿನ್ನಿ, ಟೀನಾ ಶರ್ಮ ಅವರು ದೆಹಲಿ ಸರ್ಕಾರದ ವಿರುದ್ಧವೇ ಪ್ರತಿಭಟನೆಗೆ ಮುಂದಾಗಿದ್ದಾರೆ. ದೆಹಲಿಯಲ್ಲಿ ಮಹಿಳೆಗೆ ರಕ್ಷಣೆ ಇಲ್ಲ, ಎಎಪಿ ಪ್ರಣಾಳಿಕೆಯಲ್ಲಿನ ಅಂಶಗಳು ಜಾರಿಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲೋಕಸಭೆಗೆ ಎಎಪಿ ಅಭ್ಯರ್ಥಿಗಳಾಗಿರುವ ಶಾಜಿಯಾ ಲಲ್ಮಿ, ಅಶುತೋಷ್, ಗೋಪಾಲ್ ರೈ, ದಿಲೀಪ್ ಪಾಂಡೆ ಹಾಗೂ ಅಶಿಶ್ ತಲ್ವಾರ್ ಅವರು ಕೂಡಾ ಪ್ರತಿಭಟನೆಗೆ ಸಾಥ್ ನೀಡುವ ಸಾಧ್ಯತೆಯಿದೆ. ಕಾನೂನು ಸಚಿವ ಸೋಮನಾಥ್ ಭಾರ್ತಿ ಪರ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಗೃಹ ಸಚಿವಾಲಯದ ವಿರುದ್ಧ ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲೇ ಎಎಪಿಯಲ್ಲಿ ಅಪಸ್ವರ ಕೇಳಿಬಂದಿದೆ.