Breaking: ದೆಹಲಿ; ಅತ್ತ ಸಿಬಿಐ ದಾಳಿ- ಇತ್ತ ಮಿಸ್ಡ್ ಕಾಲ್ ಅಭಿಯಾನ
ನವದೆಹಲಿ, ಆಗಸ್ಟ್ 19: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮೇಲೆ ಸಿಬಿಐ ದಾಳಿ ನಡೆಸುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಿಸ್ಡ್ ಕಾಲ್ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ತಮ್ಮ ರಾಷ್ಟ್ರೀಯ ಮಿಷನ್ "ಮೇಕ್ ಇಂಡಿಯಾ ನಂ.1" ಗೆ ಸೇರುವಂತೆ ಜನರನ್ನು ಒತ್ತಾಯಿಸುವ "ಮಿಸ್ಡ್ ಕಾಲ್" ಅಭಿಯಾನವನ್ನು ಕೇಜ್ರಿವಾಲ್ ಪ್ರಾರಂಭಿಸಿದರು.
"ಭಾರತವನ್ನು ನಂಬರ್ 1 ಮಾಡಲು ನಮ್ಮ ರಾಷ್ಟ್ರೀಯ ಮಿಷನ್ಗೆ ಸೇರಲು, ದಯವಿಟ್ಟು 9510001000 ಗೆ ಮಿಸ್ಡ್ ಕಾಲ್ ನೀಡಿ, ಭಾರತವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯೋಣ" ಎಂದು ಅರವಿಂದ್ ಕೇಜ್ರಿವಾಲ್ ವಿಡಿಯೋ ಭಾಷಣದಲ್ಲಿ ಹೇಳಿದರು.
ಬುಧವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 'ಮೇಕ್ ಇಂಡಿಯಾ ನಂ.1' ರಾಷ್ಟ್ರೀಯ ಮಿಷನ್ಗೆ ಚಾಲನೆ ನೀಡಿದ್ದರು. ನಾವು ಭಾರತವನ್ನು ಮತ್ತೊಮ್ಮೆ ವಿಶ್ವದ ನಂಬರ್ ಒನ್ ರಾಷ್ಟ್ರವನ್ನಾಗಿ ಮಾಡಬೇಕಾಗಿದೆ. ನಾವು ಭಾರತವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸಬೇಕು. ಹಾಗಾಗಿ ನಾವು ಇಂದು 'ಮೇಕ್ ಇಂಡಿಯಾ ನಂ.1' ಎಂಬ ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸುತ್ತಿದ್ದೇವೆ ಎಂದಿದ್ದರು.
ಉತ್ತಮ ಆಡಳಿತಕ್ಕಾಗಿ ಐದು ಅಂಶಗಳ ಯೋಜನೆಯನ್ನು ಪ್ರಸ್ತಾಪಿಸಿದ ಅವರು ಈ ಕಾರಣಕ್ಕಾಗಿ ಬೆಂಬಲವನ್ನು ಸಂಗ್ರಹಿಸಲು ದೇಶಾದ್ಯಂತ ಪ್ರಯಾಣಿಸುವುದಾಗಿ ಹೇಳಿದರು.
ವಿಡಿಯೋದಲ್ಲಿ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು 'ಸಿಬಿಐ ದಾಳಿಯಿಂದ ಗಾಬರಿಯಾಗುವ ಅಗತ್ಯವಿಲ್ಲ, ಅವರ ಕೆಲಸ ಮಾಡಲಿ. ನಮಗೆ ಕಿರುಕುಳ ನೀಡಲು ಅವರಿಗೆ ಮೇಲಿನಿಂದ ಆದೇಶವಿದೆ' ಎಂದು ಆರೋಪಿಸಿದರು.
ವಿಶ್ವದ ಅತ್ಯುತ್ತಮ ಶಿಕ್ಷಣ ಸಚಿವ ಎಂದು ಘೋಷಿಸಿದ ದಿನವೇ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ದೆಹಲಿ ಸಿಎಂ ಆರೋಪಿಸಿದ್ದಾರೆ.
"ಮನೀಷ್ ಸಿಸೋಡಿಯಾ ಅವರ ಹೆಸರು ನ್ಯೂಯಾರ್ಕ್ ಟೈಮ್ಸ್ನ ಮೊದಲ ಪುಟದಲ್ಲಿದೆ, ಇದು ಭಾರತಕ್ಕೆ ದೊಡ್ಡ ಸಂಭ್ರಮದ ಕ್ಷಣವಾಗಿದೆ, ಇದು ಅವರು ವಿಶ್ವದ ಅತ್ಯುತ್ತಮ ಶಿಕ್ಷಣ ಸಚಿವ ಎಂದು ಸಾಬೀತುಪಡಿಸುತ್ತದೆ" ಎಂದು ದೆಹಲಿ ಸಿಎಂ ಹೇಳಿದ್ದಾರೆ.
"ನಮ್ಮ ಕೆಲಸದ ಹಾದಿಯಲ್ಲಿ ಅನೇಕ ಅಡೆತಡೆಗಳು ಸೃಷ್ಟಿಯಾಗುತ್ತವೆ. ಇದು ಸಿಸೋಡಿಯಾ ಮೇಲೆ ಮೊದಲ ದಾಳಿಯಲ್ಲ. ಈ ಹಿಂದೆಯೂ ದಾಳಿಗಳು ನಡೆದಿವೆ. ನಮ್ಮ ಅನೇಕ ಮಂತ್ರಿಗಳು ಮತ್ತು ನನ್ನ ಮೇಲೂ ದಾಳಿಗಳು ನಡೆದಿವೆ, ಆದರೆ ಅವುಗಳಿಂದ ಏನೂ ಸಿಕ್ಕಿಲ್ಲ. ಹಾಗೇಯೇ ಈ ಬಾರಿಯೂ ಏನೂ ಹೊರಬರುವುದಿಲ್ಲ" ಎಂದು ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 21ಕ್ಕೂ ಹೆಚ್ಚು ಸ್ಥಳಗಳ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಬೆಳಗ್ಗೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸುತ್ತಿದೆ.