ದೆಹಲಿ: ರಾಮ್ಜಾಸ್ ಕಾಲೇಜಿನಲ್ಲಿ ಎಬಿವಿಪಿ-ಎಐಎಸ್ಎ ನಡುವೆ ಭಾರೀ ಸಂಘರ್ಷ
ದೆಹಲಿಯ ರಾಮ್ಜಾಸ್ ಕಾಲೇಜಿನ ಹೊರಗಡೆ ಎಬಿವಿಪಿ ಮತ್ತು ಎಐಎಸ್ಎ ವಿದ್ಯಾರ್ಥಿಗಳ ನಡುವೆ ಭಾರೀ ಸಂಘರ್ಷ ಏರ್ಪಟ್ಟಿದೆ. ಪರಿಸ್ಥಿತಿ ತಿಳಿಗೊಳಿಸಲು ನೂರಾರು ಪೊಲೀಸರು ಲಾಠಿ ಬೀಸಿದ್ದು ಹಲವಾರು ಜನ ಗಾಯಗೊಂಡಿದ್ದಾರೆ.
ನವದೆಹಲಿ, ಫೆಬ್ರವರಿ 22: ದೆಹಲಿಯ ರಾಮ್ಜಾಸ್ ಕಾಲೇಜಿನ ಹೊರಗಡೆ ಎಬಿವಿಪಿ ಮತ್ತು ಎಐಎಸ್ಎ ವಿದ್ಯಾರ್ಥಿಗಳ ನಡುವೆ ಭಾರೀ ಸಂಘರ್ಷ ಏರ್ಪಟ್ಟಿದೆ. ಪರಿಸ್ಥಿತಿ ತಿಳಿಗೊಳಿಸಲು ನೂರಾರು ಪೊಲೀಸರು ಲಾಠಿ ಬೀಸಿದ್ದು ಹಲವಾರು ಜನ ಗಾಯಗೊಂಡಿದ್ದಾರೆ.
ರಾಮ್ಜಾಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 'ಸಾಹಿತ್ಯ ಉತ್ಸವ'ಕ್ಕೆ ಅಡ್ಡಿಪಡಿಸಿದ ಎಬಿವಿಪಿ ವಿದ್ಯಾರ್ಥಿಗಳ ನಡೆ ವಿರೋಧಿಸಿ ಬುಧವಾರ ದೆಹಲಿ ವಿಶ್ವವಿದ್ಯಾಲಯದ ಎಸ್ಎಫ್ಐ ಮತ್ತು ಎಐಎಸ್ಎ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದರು.[ದೆಹಲಿ: ಬ್ಯಾಂಕ್ ಎಟಿಎಂನಿಂದ ಬಂದ ನಕಲಿ ನೋಟಿನಲ್ಲಿ ತಪ್ಪುಗಳೆಷ್ಟು?]
ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಮೌರಿಸ್ ನಗರದತ್ತ ರ್ಯಾಲಿ ಹೊರಟಿದ್ದರು. ಇವರನ್ನು ಎಬಿವಿಪಿ ಕಾರ್ಯಕರ್ತರ ಗುಂಪು ದಾರಿ ಮಧ್ಯೆ ತಡೆದಿದೆ ಎನ್ನಲಾಗಿದೆ.[ಮೋದಿ ಜತೆ ಅಮೆರಿಕದ ಅತಿಥಿಗಳು, ವೀಸಾ ಬಗ್ಗೆ ಚರ್ಚೆ!]
ಲಾಠಿ ಚಾರ್ಚ್
ಅಲ್ಲಿಂದ ಎರಡೂ ಸಂಘಟನೆಗಳ ವಿದ್ಯಾರ್ಥಿಗಳ ನಡುವೆ ಗಲಾಟೆ ಆರಂಭವಾಯಿತು. ಕೊನೆಗೆ ಸ್ಥಳಕ್ಕೆ ಪೊಲೀಸರು ಬಂದರೂ ಪರಿಸ್ಥಿತಿ ತಿಳಿಯಾಗಲಿಲ್ಲ. ಸ್ಥಳದಲ್ಲಿದ್ದ 100ಕ್ಕೂ ಹೆಚ್ಚು ಪೊಲೀಸರು ಲಾಠಿ ಚಾರ್ಚ್ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಹಲವರಿಗೆ ಗಾಯ
ಘಟನೆಯಲ್ಲಿ ರಾಮ್ಜಾಸ್ ಕಾಲೇಜಿನ ಪ್ರಾಧ್ಯಾಪಕ ಪ್ರಶಾಂತ ಚಕ್ರವರ್ತಿ ಸೇರಿದಂತೆ ಹಲವಾರು ಜನ ಗಾಯಗೊಂಡಿದ್ದಾರೆ. ಸದ್ಯ ಪೊಲೀಸರು ಕಾಲೇಜಿನ ಹೊರಗೆ ನೆರೆದಿದ್ದು ಕಾಲೇಜು ಪ್ರವೇಶಕ್ಕೆ ಹಾಗೂ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳನ್ನು ಹೊರಗೆ ಬರಲು ಬಿಡುತ್ತಿಲ್ಲ.
ಹಿನ್ನಲೆ
ಮಂಗಳವಾರ ರಾಮ್ಜಾಸ್ ಕಾಲೇಜಿನಲ್ಲಿ ಸೆಮಿನಾರ್ ಹಮ್ಮಿಕೊಳ್ಳಲಾಗಿತ್ತು. ಸೆಮಿನಾರಿಗೆ ಜೆಎನ್ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಶೆಹ್ಲಾ ರಶೀದ್ ರನ್ನು ಆಹ್ವಾನಿಸಲಾಗಿತ್ತು.
ಸೆಮಿನಾರಿಗೆ ವಿರೋಧ
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಎಬಿವಿಪಿ ಜೆಎನ್ಯು ವಿದ್ಯಾರ್ಥಿಗಳಿಗೆ ನೀಡಿದ ಆಹ್ವಾನವನ್ನು ಹಿಂತೆಗೆಯುವಂತೆ ಬೇಡಿಕೆ ಸಲ್ಲಿಸಿತ್ತು. ಆದರೆ ಆಹ್ವಾನವನ್ನು ಹಿಂತೆಗೆದುಕೊಳ್ಳದಿದ್ದುದರಿಂದ ನಿನ್ನೆ ಎಬಿವಿಪಿ ಪ್ರತಿಭಟನೆ ನಡೆಸಿ ಉಮರ್ ಖಾಲಿದ್ ರನ್ನು ಕ್ಯಾಂಪಸ್ಸಿಗೆ ಬರದಂತೆ ತಡೆಯುವಲ್ಲಿ ಯಶಸ್ವಿಯಾಗಿತ್ತು.
ಸೆಮಿನಾರ್ ರದ್ದು
ಕೊನೆಗೆ ಕಾಲೇಜಿನ 'ಲಿಟರರಿ ಸೊಸೈಟಿ' ಸೆಮಿನಾರನ್ನೇ ರದ್ದು ಮಾಡಿತ್ತು. ಸೆಮಿನಾರಿಗೆ ಅಡ್ಡಿಪಡಿಸಿದ ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಇಂದು ಕಾಲೇಜಿನ ವಿದ್ಯಾರ್ಥಿಗಳ ಒಂದು ಗುಂಪು ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ಸಂಘರ್ಷ ಉಂಟಾಗಿ ಹಲವಾರು ಜನ ಗಾಯಗೊಂಡಿದ್ದಾರೆ.
(ಚಿತ್ರ ಕೃಪೆ: ಫೇಸ್ಬುಕ್)