ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನವಿಲ್ಲ: ಸುಪ್ರೀಂ ಕೋರ್ಟ್
ನವದೆಹಲಿ, ಜುಲೈ 4: ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಹೇಳಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ನಡುವೆ ನಡೆಯುತ್ತಿದ್ದ ಸಂಘರ್ಷ, ಹಾಗೂ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡುವ ಸಂಬಂಧ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಇಂದು ತನ್ನ ಆದೇಶವನ್ನು ನೀಡಿತು.
ಕೊನೆಗೂ ಪ್ರತಿಭಟನೆ ಹಿಂಪಡೆದ ಅರವಿಂದ ಕೇಜ್ರಿವಾಲ್
ಹಾಗೆ ನೋಡಿದರೆ ಐವರು ನಾಯ್ಯಮೂರ್ತಿಗಳು ಮೂರು ಬೇರೆ ಬೇರೆ ಆದೇಶಗಳನ್ನು ನೀಡಿದರು.
ನ್ಯಾ. ಎ.ಕೆ. ಸಿಕ್ರಿ, ಎ.ಎಂ. ಕನ್ವಿಲ್ಕರ್ ಮತ್ತು ತಮ್ಮ ಆದೇಶವನ್ನು ದೀಪಕ್ ಮಿಶ್ರಾ ನೀಡಿದರೆ, ನ್ಯಾ. ಅಶೋಕ್ ಭೂಷಣ್ ಮತ್ತು ಡಿ.ವೈ. ಚಂದ್ರಚೂಡ್ ಪ್ರತ್ಯೇಕ ತೀರ್ಪು ನೀಡಿದ್ದಾರೆ.
ಪೂರ್ಣ ರಾಜ್ಯದ ಸ್ಥಾನಮಾನ ಸಾಧ್ಯವಿಲ್ಲ-ನ್ಯಾ. ಮಿಶ್ರಾ
"ಈ ಹಿಂದಿನ 9 ನ್ಯಾಯಮೂರ್ತಿಗಳ ಆದೇಶದ ಹಿನ್ನೆಲೆಯಲ್ಲಿ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಿಲ್ಲ," ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜೊತೆಗೆ 'ಎಲ್ಲಾ ವಿಷಯಗಳನ್ನೂ ಉಪರಾಜ್ಯಪಾಲರು ರಾಷ್ಟ್ರಪತಿಗಳಿಗೆ ವರ್ಗಾವಣೆ ಮಾಡುವಂತಿಲ್ಲ' ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
'ದೆಹಲಿಗೆ ವಾಪಸ್ ಬನ್ನಿ, ಕೆಲಸ ಮಾಡಿ' ಕೇಜ್ರಿಗೆ ಬಿಜೆಪಿ ನಾಯಕನ ಉಪದೇಶ
"ಸಂವಿಧಾನ ನೀಡಿರುವ ಅಧಿಕಾರ ಹೊರತುಪಡಿಸಿ ಉಪರಾಜ್ಯಪಾಲರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಿಲ್ಲ. ಲೆಫ್ಟಿನೆಂಟ್ ಗವರ್ನರ್ ಎಲ್ಲದಕ್ಕೂ ಅಡ್ಡಿಪಡಿಸುವಂತೆಯೂ ಇಲ್ಲ," ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ರಾಜ್ಯ ಸರಕಾರದ ಜೊತೆಗೆ ಉಪರಾಜ್ಯಪಾಲರು ಸೌಹಾರ್ದಯುತವಾಗಿ ಕೆಲಸ ಮಾಡಬೇಕು. ಉಪರಾಜ್ಯಪಾಲರು ಮತ್ತು ಸಂಪುಟ ಸಚಿವರು ಜೊತೆಯಾಗಿ ಕೆಲಸ ಮಾಡಬೇಕು ಎಂದವರು ತೀರ್ಪು ನೀಡಿದ್ದಾರೆ.
"ಕೇಂದ್ರ ಮತ್ತು ರಾಜ್ಯ ಸರಕಾರದ ನಡುವಿನ ಸಂಬಂಧ ಆರೋಗ್ಯಕರವಾಗಿರಬೇಕು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾ. ದೀಪಕ್ ಮಿಶ್ರಾ, ಸಂವಿಧಾನವನ್ನು ಅನುಸರಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಸ್ಪಷ್ಟವಾಗಿ ವಿವರಿಸಿದರು.