ನಮ್ಮ ತಂದೆ ಮಾಡಿದ ತಪ್ಪೇನು? ಈ ಮುಗ್ಧ ಮಕ್ಕಳಿಗೆ ಉತ್ತರ ಹೇಳುವವರಾರು?
ನವದೆಹಲಿ, ಫೆಬ್ರವರಿ 25: ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಮತ್ತು ವಿರೋಧದ ಹೋರಾಟ, ಸಂಘರ್ಷದಲ್ಲಿ ಅನೇಕರ ಬದುಕು ನಲುಗಿಹೋಗುತ್ತಿದೆ. ಅವರಲ್ಲಿ ತಮ್ಮದಲ್ಲದ ತಪ್ಪಿಗೆ ಬಲಿಯಾದ ಹೆಡ್ಕಾನ್ಸ್ಟೆಬಲ್ ರತನ್ ಲಾಲ್ ಕುಟುಂಬವೂ ಒಂದು.
ದೆಹಲಿಯ ಗೋಕುಲ್ ಪುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ನಡೆದ ಕಲ್ಲು ತೂರಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೆಡ್ಕಾನ್ಸ್ಟೆಬಲ್ ರತನ್ ಲಾಲ್ ಜೀವ ಕಳೆದುಕೊಂಡಿದ್ದರು. ಅವರ ಸಾವಿನಿಂದ ಅವರ ಕುಟುಂಬ ಅಕ್ಷರಶಃ ಕಂಗೆಟ್ಟಿದೆ. ತಂದೆಯನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಅವರ ಮಕ್ಕಳು ಮಾತುಗಳು ಹೃದಯ ಕಲಕುವಂತಿವೆ.
ದೆಹಲಿ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದ ಹೆಡ್ ಕಾನ್ಸ್ಟೆಬಲ್ ಸಾವು
'ನನ್ನ ತಂದೆ ಮಾಡಿದ ತಪ್ಪಾದರೂ ಏನು? ಅವರನ್ನು ಏಕೆ ಸಾಯಿಸಿದರು?' ಎಂದು ರತನ್ ಲಾಲ್ ಅವರ ಮೂವರು ಮುಗ್ಧ ಮಕ್ಕಳು ಕೇಳುವ ಪ್ರಶ್ನೆಗೆ ಪೊಲೀಸ್ ಕಮಿಷನರ್ ಉತ್ತರಿಸಲಾಗದೆ ವೇದನೆಯಿಂದ ನಿಂತಿದ್ದರು.
ಪತಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ರತನ್ ಲಾಲ್ ಪತ್ನಿ ಪೂನಂ ನಿಶಕ್ತರಾಗಿ ಕುಸಿದುಬಿದ್ದರು. ಅವರ ಮಕ್ಕಳಾದ ಸಿದ್ದಿ (13), ಕನಕ್ (10) ಮತ್ತು ರಾಮ್ (8) ಕಂಗಾಲಾದರು. ಈ ವರ್ಷ ತಮ್ಮ ಹುಟ್ಟೂರಿಗೆ ಹೋಗಿ ಹೋಳಿ ಆಚರಿಸೋಣ ಎಂದು ಮಕ್ಕಳಿಗೆ ರತನ್ ಲಾಲ್ ಭರವಸೆ ನೀಡಿದ್ದರು.
ಶಾಂತಿಪ್ರಿಯ ವ್ಯಕ್ತಿಯನ್ನು ಹೊಡೆದು ಕೊಂದರು
ರತನ್ ಲಾಲ್ ಅವರನ್ನು ಬಲ್ಲವರ ಪ್ರಕಾರ, ಅವರು ಬಹಳ ಶಾಂತಿಪ್ರಿಯ ವ್ಯಕ್ತಿ. ಯಾರೊಂದಿಗೂ ಯಾವುದೇ ವಾಗ್ದಾದ ಅಥವಾ ಗಲಾಟೆ ಮಾಡಿಕೊಂಡವರಲ್ಲ. ಆದರೆ ಅವರು ತಮ್ಮದಲ್ಲದ ತಪ್ಪಿಗೆ ದುಷ್ಕರ್ಮಿಗಳ ಏಟಿಗೆ ಬಲಿಯಾಗಬೇಕಾಯಿತು.
ದಯಾಳಪುರ ಪೊಲೀಸ್ ಠಾಣೆಯ ಸಮೀಪ ಸಿಎಎ ಪರ ಅಥವಾ ವಿರೋಧಿ ಬಣದವರು ನಡೆಸಿದ ಹಿಂಸಾಚಾರದಲ್ಲಿ ಕಲ್ಲು ತೂರಾಟದಿಂದ ಗಾಯಗೊಂಡ ಹೆಡ್ ಕಾನ್ಸ್ಟೆಬಲ್ ರತನ್ ಲಾಲ್ ಸೋಮವಾರ ಮೃತಪಟ್ಟಿದ್ದರು. ಈ ಘಟನೆ ಮಧ್ಯಾಹ್ನ ನಡೆದಿತ್ತು.
ರಾಜಸ್ತಾನ ಮೂಲದವರು
ರಾಜಸ್ಥಾನದ ಸಿಕಾರ್ ಜಿಲ್ಲೆಯ ಫತೇಪುರ್ ತಿಹ್ವಾಲಿ ಗ್ರಾಮದ ಮಧ್ಯಮವರ್ಗದ ಕುಟುಂಬದ ನಿವಾಸಿಯಾದ ರತನ್ ಲಾಲ್, 1998ರಲ್ಲಿ ದೆಹಲಿ ಪೊಲೀಸ್ ಇಲಾಖೆಯನ್ನು ಸೇರಿಕೊಂಡಿದ್ದರು. 2004ರಲ್ಲಿ ಅವರು ಜೈಪುರದ ನಿವಾಸಿ ಪೂನಂ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಮೂವರು ಮಕ್ಕಳಿದ್ದಾರೆ.
ದೆಹಲಿಯಲ್ಲಿ ನಡೆದ ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಸೇರಿ ಐವರು ಸಾವು
ಬುರಾರಿ ಪ್ರದೇಶದ ಅಮೃತ್ ವಿಹಾರ್ ಕಾಲೊನಿಯಲ್ಲಿನ ಮನೆಗೆ ಅವರ ಸಾವಿನ ಸುದ್ದಿ ಬರುತ್ತಿದ್ದಂತೆ ಮಕ್ಕಳು ಜೋರಾಗಿ ಅಳತೊಡಗಿದರು. ಬುರಾರಿಯಲ್ಲಿನ ಗೊಂದಲದ ನಡುವೆಯೇ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಯಿತು. ಬೆಂಗಳೂರಿನಲ್ಲಿ ನೆಲೆಸಿರುವ ರತನ್ ಲಾಲ್ ಅವರ ಸಹೋದರ ಮನೋಜ್ ಸೋಮವಾರ ಸಂಜೆ ದೆಹಲಿಯತ್ತ ಪ್ರಯಾಣ ಬೆಳೆಸಿದರು.
ಅಣ್ಣ ಸಾಧು ಸ್ವಬಾವದವನು
'ರತನ್ ಲಾಲ್ ಗೋಕುಲ್ಪುರಿಯ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಅವರ ರೀಡರ್ ಆಗಿದ್ದರು. ಅವರು ಎಸಿಪಿಯ ಜತೆಗೆ ಇದ್ದರಷ್ಟೇ. ಆದರೆ ದೊಡ್ಡ ಗುಂಪು ಅವರನ್ನು ಸುತ್ತುವರಿದು ಕೊಂದು ಹಾಕಿತು' ಎಂದು ರತನ್ ಅವರ ಕಿರಿಯ ಸಹೋದರ ದಿನೇಶ್ ಗದ್ಗದಿತರಾದರು.
'ನಮ್ಮ ಅಣ್ಣ ಮಾಮೂಲಿ ಪೊಲೀಸ್ ವ್ಯಕ್ತಿಯಂತೆ ಎಂದಿಗೂ ವರ್ತಿಸಿದವನಲ್ಲ ಎಂದು ಅವರು ಹೇಳಿದರು. ಅವನು ಮಹಾನ್ ದೇಶಭಕ್ತ. ಚಿಕ್ಕಂದಿನಿಂದಲೂ ಪೊಲೀಸ್ ಸಮವಸ್ತ್ರ ಧರಿಸುವ ಆಸೆ ಹೊಂದಿದ್ದವನು. ಅವನಿಗೆ ಬಹಳ ತಾಳ್ಮೆ. ಜನರತ್ತ ಅರಚಿದ್ದು, ಕೂಗಿದ್ದನ್ನು ನಾವು ನೋಡಿಯೇ ಇಲ್ಲ' ಎಂದ ದಿನೇಶ್, ದಯವಿಟ್ಟು ಹಿಂಸಾಚಾರ ನಿಲ್ಲಿಸಿ. ಇಂದು ನನ್ನ ಅಣ್ಣನನ್ನು ಕಳೆದುಕೊಂಡೆ. ನಾಳೆ ಇನ್ಯಾರೋ ಹೀಗೆ ಕಳೆದುಕೊಳ್ಳುತ್ತಾರೆ' ಎಂದು ನೋವಿನಿಂದ ನುಡಿದರು.
ರತನ್ ತಾಯಿಗೆ ಸುದ್ದಿಯೇ ತಿಳಿಸಿಲ್ಲ
ದಶಕದ ಹಿಂದೆಯೇ ರತನ್ ಅವರ ತಂದೆ ನಿಧನರಾಗಿದ್ದರು. ಅವರ ತಾಯಿಗೆ ವಿಷಯ ತಿಳಿಸಲು ಕುಟುಂಬದವರು ತೀವ್ರ ಕಷ್ಟಪಡಬೇಕಾಯಿತು. 'ಆತನ ಸಾವಿನ ಸಂಗತಿಯನ್ನು ನಮ್ಮ ಭಾವ ತಿಳಿಸಿದರು. ಕೂಡಲೇ ಟಿ.ವಿ. ಹಾಕಿದೆವು. ನಮ್ಮ ತಾಯಿಗೆ ಕಣ್ಣು ಕಾಣಿಸುವುದಿಲ್ಲ. ಆದರೆ ಆಕೆಯಿಂದ ಏನನ್ನೋ ಮುಚ್ಚಿಡುತ್ತಿದ್ದೇವೆ ಎನ್ನುವುದು ಆಕೆಗೆ ಗೊತ್ತಾಯಿತು. ಏಕೆಂದರೆ ನಮ್ಮ ಮನೆಗೆ ಎಂದಿಗಿಂತ ಹೆಚ್ಚು ಜನರು ಬರತೊಡಗಿದ್ದರು' ಎಂದು ದಿನೇಶ್ ಕಣ್ಣೀರಿಟ್ಟರು.
ಮಧ್ಯರಾತ್ರಿ ಹೊತ್ತಿ ಉರಿದ ದೇಶದ ರಾಜಧಾನಿ; ಕಿಚ್ಚು ಹಬ್ಬಿದ ವೃತ್ತಾಂತ
ಸಾಧುಸ್ವಭಾವದ ವ್ಯಕ್ತಿ
'ಅವರ ವರ್ತನೆ ಮತ್ತು ಮಾತುಗಳು ಯಾವತ್ತಿಗೂ ಒಬ್ಬ ಪೊಲೀಸ್ ಸಿಬ್ಬಂದಿಯಂತೆ ಕಾಣಿಸುತ್ತಿರಲಿಲ್ಲ. ಅವರೊಬ್ಬ ಬಹಳ ಸಾಧು ಸ್ವಭಾವದ ವ್ಯಕ್ತಿ' ಎಂದು ರತನ್ ಲಾಲ್ ಅವರೊಂದಿಗೆ ಸುಮಾರು ಎರಡೂವರೆ ವರ್ಷದಿಂದ ಕೆಲಸ ಮಾಡುತ್ತಿರುವ ದಯಾಳಪುರ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಹೀರಾಲಾಲ್ ಹೇಳಿದರು.
ಮೀಸೆಯಿಂದ ಜನಪ್ರಿಯರಾದವರು
ರತನ್ ಲಾಲ್ ಅವರ ಉದ್ದನೆಯ ಮೀಸೆ ನೋಡಿದವರಿಗೆ ನೆನಪಾಗುತ್ತಿದ್ದದ್ದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್. ಅಭಿನಂದನ್ ಅವರಂತೆಯೇ ಉದ್ದನೆಯ ಮೀಸೆಯ ಶೈಲಿ ಹೊಂದಿದ್ದ ರತನ್ ಲಾಲ್, ಮೀಸೆ ಕಾರಣಕ್ಕಾಗಿ ಅವರ ಸಹೋದ್ಯೋಗಿಗಳ ನಡುವೆ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದರು. ಅಭಿನಂದನ್ ವರ್ಧಮಾನ್ 2019ರ ಫೆ. 27ರಂದು ಜೆಟ್ ಹೊಡೆದುರುಳಿಸಿ ಪಾಕಿಸ್ತಾನದ ನೆಲೆಯೊಳಗೆ ಪ್ರವೇಶಿಸಿದ್ದರು. ಆ ಘಟನೆಗೆ ಒಂದು ವರ್ಷ ತುಂಬಲು ಮೂರು ದಿನ ಇರುವಾಗಲೇ ಇಲ್ಲಿ ರತನ್ ಲಾಲ್ ಗಲಭೆಕೋರರ ಕೃತ್ಯಕ್ಕೆ ಬಲಿಯಾಗಿದ್ದಾರೆ.