'ಇದು ಟ್ರೇಲರ್ ಅಷ್ಟೇ': ದೆಹಲಿ ಸ್ಫೋಟ ನಡೆದ ಸ್ಥಳದಲ್ಲಿ ಸಿಕ್ಕ ಕಾಗದದಲ್ಲಿ ಎಚ್ಚರಿಕೆ
ನವದೆಹಲಿ, ಜನವರಿ 30: ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಎದುರು ಶುಕ್ರವಾರ ಸಂಭವಿಸಿದ ಲಘು ಸಾಮರ್ಥ್ಯದ ಐಇಡಿ ಸ್ಫೋಟ ತೀವ್ರ ಆತಂಕ ಸೃಷ್ಟಿಸಿದೆ. ಭಾರತ ಮತ್ತು ಇಸ್ರೇಲ್ ನಡುವಣ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 29ನೇ ವಾರ್ಷಿಕೋತ್ಸವದಂದೇ ಈ ಸ್ಫೋಟ ಸಂಭವಿಸಿದೆ.
ರಸ್ತೆ ವಿಭಜಕದಲ್ಲಿನ ಹೂವಿನ ಕುಂಡ ಒಂದರಲ್ಲಿ ಈ ಬಾಂಬ್ ಇರಿಸಲಾಗಿದ್ದು, ಆ ಸ್ಥಳದಲ್ಲಿ ಲಕೋಟೆಯೊಂದು ಪತ್ತೆಯಾಗಿದೆ. ಅದರ ಮೇಲ್ಭಾಗದಲ್ಲಿ 'ಇಸ್ರೇಲ್ ರಾಜತಾಂತ್ರಿಕ ರಾಯಭಾರಿಗೆ' ಎಂದು ಬರೆಯಲಾಗಿದೆ. ಲಕೋಟೆ ಒಳಗಿನ ಪತ್ರದಲ್ಲಿ ಬೆದರಿಕೆಯ ಬರಹವಿದ್ದು, ಈ ಸ್ಫೋಟ ಕೇವಲ ಟ್ರೇಲರ್ ಅಷ್ಟೇ ಎಂಬ ಎಚ್ಚರಿಕೆ ನೀಡಲಾಗಿದೆ.
ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟ: ನಂತರದ ಬೆಳವಣಿಗೆಗಳೇನು?
ಇದರ ಜತೆಗೆ ಇರಾನ್ನ ಇಬ್ಬರು 'ಹುತಾತ್ಮ'ರಾದ ಖಾಸಿಂ ಸೊಲೆಮನಿ ಮತ್ತು ಡಾ. ಮೊಹ್ಸೆನ್ ಫಖ್ರಿಜಾದೆಹ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ಇಸ್ರೇಲ್ ಕಚೇರಿ ಮುಂದೆ ನಡೆದ ಬಾಂಬ್ ಸ್ಫೋಟದ ಹಿಂದೆ ಇರಾನ್ ವ್ಯಕ್ತಿಗಳ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಈ ಆರೋಪವನ್ನು ಇಸ್ರೇಲ್ ರಾಯಭಾರ ಕಚೇರಿ ನಿರಾಕರಿಸಿದೆ. ಮುಂದೆ ಓದಿ.
ಲಕೋಟೆಯೇ ಮಹತ್ವದ ಸಾಕ್ಷಿ
ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ, ವಿಧಿ ವಿಜ್ಞಾನ ತಜ್ಞರು ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಲಕೋಟೆ ಹಾಗೂ ಅದರಲ್ಲಿನ ಬರಹ ಬಹಳ ಮಹತ್ವದ ಸಾಕ್ಷಿ ಎಂದು ತನಿಖಾಧಿಕಾರಿಗಳು ಪರಿಗಣಿಸಿದ್ದಾರೆ. ಶುಕ್ರವಾರ ಸಂಜೆ 5.05 ಸಮಯಕ್ಕೆ ಇಸ್ರೇಲ್ ರಾಯಭಾರ ಕಚೇರಿಯಿಂದ 150 ಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ.
ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಪ್ರವಾಸ ದಿಢೀರ್ ರದ್ದು
ಕಾರ್ನಿಂದ ಸ್ಫೋಟಕ ಎಸೆದಿದ್ದರು
ಸ್ಫೋಟಕವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಲಾಗಿದ್ದು, ಇಸ್ರೇಲ್ ರಾಯಭಾರ ಕಚೇರಿ ಮುಂದೆ ಸಾಗಿದ ಕಾರ್ ಒಂದರಿಂದ ಎಸೆಯಲಾಗಿದೆ. ಸಿಸಿಟಿವಿ ದೃಶ್ಯದಲ್ಲಿ ಈ ಕಾರಿನ ಚಲನವಲನ ಪತ್ತೆಯಾಗಿದೆ. ಅದರ ಚಾಲಕನನ್ನು ಪತ್ತೆಹಚ್ಚಲಾಗಿದ್ದು, ಆತನ ಮಾಹಿತಿ ಆಧರಿಸಿ ಶಂಕಿತರ ರೇಖಾಚಿತ್ರ ಸಿದ್ಧಪಡಿಸಲಾಗುತ್ತಿದೆ.
ಕ್ಯಾನ್ನಲ್ಲಿ ಸ್ಫೋಟಕ
'ಘಟನೆ ನಡೆದ ಸ್ಥಳದಲ್ಲಿ ತಂಪು ಪಾನೀಯದ ಕ್ಯಾನ್ ಹಾಗೂ ಬಾಲ್ ಬೇರಿಂಗ್ಗಳು ಪತ್ತೆಯಾಗಿವೆ. ಸ್ಫೋಟಗಳು ಮತ್ತು ಬಾಲ್ ಬೇರಿಂಗ್ಗಳನ್ನು ಕ್ಯಾನ್ ಒಳಗೆ ಇರಿಸಿದ್ದರು ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ರಸ್ತೆಯ ಮೇಲೆ ಅದರ ಪರಿಣಾಮ ಉಂಟಾಗುವಂತೆ ಸ್ಫೋಟಕವನ್ನು ಇರಿಸಲಾಗಿತ್ತು. ಬಾಲ್ ಬೇರಿಂಗ್ಗಳು ಕಾರ್ಗಳಿಗೆ ಅಪ್ಪಳಿಸಿ ಗಾಜುಗಳು ಒಡೆದಿವೆ. ಸ್ಥಳದಲ್ಲಿ ಪೊಲೀಸರಿಗೆ ಯಾವುದೇ ಬ್ಯಾಟರಿ ಅಥವಾ ಸಾಧನ ಪತ್ತೆಯಾಗಿಲ್ಲ' ಎಂದು ಮೂಲಗಳು ತಿಳಿಸಿವೆ.
ಪತ್ರ ರಹಸ್ಯ: ದೆಹಲಿ ಸ್ಫೋಟದ ಸ್ಥಳದಲ್ಲಿ ಸಿಕ್ಕಿತು ಒಂದು ಲಕೋಟೆ!
ಇರಾನ್ ಪ್ರಮುಖರ ಹತ್ಯೆ
ಇರಾನ್ನ ಅತ್ಯಂತ ಶಕ್ತಿಶಾಲಿ ಮೇಜರ್ ಜನರಲ್ ಖಾಸಿಂ ಸೊಲೆಮನಿ ಅವರನ್ನು ಅಮೆರಿಕ ಸೇನೆಯು ಇರಾಕ್ನ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಡ್ರೋನ್ ದಾಳಿ ಮೂಲಕ ಹತ್ಯೆ ಮಾಡಿತ್ತು. ಹಾಗೆಯೇ ಇರಾನ್ನ ಅತ್ಯುನ್ನತ ಅಣು ವಿಜ್ಞಾನಿ ಡಾ. ಮೊಹ್ಸೆನ್ ಫಖ್ರಿಜಾದೆಹ್ ಅವರನ್ನು ಕಳೆದ ವರ್ಷದ ನವೆಂಬರ್ನಲ್ಲಿ ಹತ್ಯೆ ಮಾಡಲಾಗಿತ್ತು. ಇಸ್ರೇಲ್ ರಿಮೋಟ್ ಕಂಟ್ರೋಲ್ ಆಯುಧ ಬಳಸಿ ಈ ಕೊಲೆ ಮಾಡಿದೆ ಎಂದು ಇರಾನ್ ಆರೋಪಿಸಿತ್ತು. ಈ ಎರಡು ಹತ್ಯೆಗಳ ಸೇಡು ತೀರಿಸಿಕೊಳ್ಳಲು ಇರಾನ್ ಹವಣಿಸುತ್ತಿದೆ ಎಂದು ಹೇಳಲಾಗಿದೆ.