ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾಗೆ ಚುನಾವಣಾ ಆಯೋಗ ನಿರ್ಬಂಧ
ನವದೆಹಲಿ, ಜನವರಿ 25: ದೆಹಲಿಯ ಬಿಜೆಪಿ ನಾಯಕ, ವಿಧಾನಸಭೆ ಚುನಾವಣಾ ಅಭ್ಯರ್ಥಿ ಕಪಿಲ್ ಮಿಶ್ರಾ ಗೆ ಚುನಾವಣಾ ಆಯೋಗವು 48 ಗಂಟೆ ನಿರ್ಬಂಧ ಹೇರಿದೆ.
ಕಪಿಲ್ ಮಿಶ್ರಾ ದೆಹಲಿಯ ಪ್ರಮುಖ ಬಿಜೆಪಿ ನಾಯಕರಾಗಿದ್ದು, ಫೆಬ್ರವರಿ 8 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ದೆಹಲಿಯ ಮಾಡೆಲ್ ಟೌನ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಭಾರತ-ಪಾಕಿಸ್ತಾನ ಕದನ ಎಂದ ಕಪಿಲ್ ಟ್ವೀಟ್ ಮೇಲೆ ಆಯೋಗ ಕೆಂಗಣ್ಣು
ಕಪಿಲ್ ಮಿಶ್ರಾ ಅವರು ದೆಹಲಿ ಚುನಾವಣೆಯನ್ನು ಭಾರತ-ಪಾಕಿಸ್ತಾನ ಯುದ್ಧಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದರು. ಇದು ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದು, ಕಪಿಲ್ ಮಿಶ್ರಾ ಗೆ 48 ಗಂಟೆ ಚುನಾವಣಾ ಪ್ರಚಾರದಿಂದ ನಿರ್ಬಂಧ ಹೇರಿ ಶನಿವಾರ ಆದೇಶ ಹೊರಡಿಸಿದೆ.
ಅಷ್ಟೆ ಅಲ್ಲದೆ ಕಪಿಲ್ ಮಿಶ್ರಾ ವಿರುದ್ಧ ಐಪಿಸಿ ಸೆಕ್ಷನ್ 123 ರ ಅಡಿಯಲ್ಲಿ ಪ್ರಕರಣ ಸಹ ದಾಖಲಿಸುವಂತೆ ಆಯೋಗವು ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.
ಫೆಬ್ರವರಿ 8ಕ್ಕೆ ಭಾರತ-ಪಾಕಿಸ್ತಾನ ಕದನ ಎಂದ ಕಪಿಲ್ ಮಿಶ್ರಾ
ದೆಹಲಿ ಚುನಾವಣೆಯನ್ನು ಭಾರತ-ಪಾಕಿಸ್ತಾನ ಯುದ್ಧಕ್ಕೆ ಹೋಲಿಸಿ ಟ್ವೀಟ್ ಮಾಡಿದ್ ಕಪಿಲ್ ಮಿಶ್ರಾ, ದೆಹಲಿಯಲ್ಲಿ 'ಮಿನಿ ಪಾಕಿಸ್ತಾನ'ಗಳನ್ನು ಸೃಷ್ಟಿಸಲಾಗಿದೆ, ದೆಹಲಿಯ ಬೀದಿಗಳನ್ನೆಲ್ಲಾ ಅವರೇ ವಶಕ್ಕೆ ಪಡೆದುಬಿಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದು ವಿವಾದ ಎಬ್ಬಿಸಿತ್ತು.
ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 8 ರಂದು ನಡೆಯಲಿದ್ದು, ಫೆಬ್ರವರಿ 11 ರಂದು ಫಲಿತಾಂಶ ಹೊರಬೀಳಲಿದೆ.