ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಸೂಚನೆ
ನವದೆಹಲಿ, ಡಿ. 16 : ಯಾವ ಪಕ್ಷವೂ ಸರಕಾರ ರಚಿಸಲು ಮುಂದೆ ಬರದಿರುವ ಕಾರಣ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಶಿಫಾರಸು ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಈ ಕುರಿತಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ನಜೀಬ್ ಜಂಗ್ ಅವರು ಪತ್ರ ಬರೆದಿದ್ದಾರೆ.
70 ಸ್ಥಾನಗಳಿರುವ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸತತ ಮೂರು ಅವಧಿಗೆ ಸರಕಾರ ರಚಿಸಿದ್ದ ಶೀಲಾ ದೀಕ್ಷಿತ್ ಸರಕಾರ ಕೇವಲ 8 ಸ್ಥಾನ ಗಳಿಸಿ ಹೀನಾಯವಾಗಿ ಸೋತಿದ್ದರೆ, ಭಾರತೀಯ ಜನತಾ ಪಕ್ಷ 32 ಸ್ಥಾನಗಳನ್ನು ಗೆದ್ದು ಅಗ್ರ ಸ್ಥಾನದಲ್ಲಿತ್ತು. ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ 28 ಸೀಟುಗಳನ್ನು ಗೆದ್ದು ಕಾಂಗ್ರೆಸ್ಸಿಗೆ ಮಣ್ಣು ಮುಕ್ಕಿಸಿತ್ತು.
ಯಾವುದೇ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಬಹುಮತ ಸಾಬೀತುಪಡಿಸಲು ಕನಿಷ್ಠ 36 ಸ್ಥಾನಗಳು ಬೇಕೇಬೇಕು. ಆದರೆ, ಅತಿದೊಡ್ಡ ಪಕ್ಷವಾದ ಭಾರತೀಯ ಜನತಾ ಪಕ್ಷ, ಕುದುರೆ ವ್ಯಾಪಾರ ನಡೆಸಲು ಯತ್ನಿಸದೆ ಸರಕಾರ ರಚಿಸುವುದಿಲ್ಲ ಎಂದು ಹಿಂದೆ ಸರಿದಿತ್ತು. ಎಎಪಿ ಕೂಡ ಕಾಲಾವಕಾಶ ಕೇಳಿದ್ದರೂ ಅದು ಸರಕಾರ ರಚಿಸುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಬಿಜೆಪಿ ಜೊತೆ ಸೇರಿ ಸರಕಾರ ರಚಿಸಿ ಎಂದು ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಕಿವಿಮಾತು ಹೇಳಿದ್ದರೂ ಕೇಜ್ರಿವಾಲ್ ಕಿವಿಗೆ ಹಾಕಿಕೊಂಡಿರಲಿಲ್ಲ. [ಕೇಜ್ರಿವಾಲ್ ಗೆ ಕಿರಣ್ ಕಿವಿಮಾತು]
ಈ ಎಲ್ಲ ಕಾರಣಗಳಿಂದಾಗಿ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಅನಿವಾರ್ಯವಾಗಿದೆ. ಆದರೆ, ಇದೇ ಸಮಯದಲ್ಲಿ ಕಾಂಗ್ರೆಸ್ ಬೆಂಬಲ ಪಡೆದು ಆಮ್ ಆದ್ಮಿ ಪಕ್ಷ ಸರಕಾರ ರಚಿಸಲು ಮುಂದಾದರೆ ರಾಷ್ಟ್ರಪತಿ ಆಳ್ವಿಕೆ ಕೊನೆಗೊಳ್ಳಲಿದೆ. ಬಾಹ್ಯ ಮತ್ತು ಬೇಷರತ್ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಹೇಳಿದ್ದರೂ ಆಮ್ ಆದ್ಮಿ ಪಕ್ಷ ಹಲವಾರು ಷರತ್ತುಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಮುಂದಿಟ್ಟಿದೆ. ಈ ಷರತ್ತುಗಳಿಗೆ ಪ್ರತಿಕ್ರಿಯಿಸಲು ಬಿಜೆಪಿ ನಿರಾಕರಿಸಿದೆ. [ಅರವಿಂದ್ ಹದಿನೆಂಟು ಷರತ್ತುಗಳು]
ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರಿಂದ ರಾಷ್ಟ್ರಪತಿ ಆಳ್ವಿಕೆ ಹೇರುವುದು ಅನಿವಾರ್ಯವಾಗಿದೆ ಎಂದು ಕೇಂದ್ರ ಗೃಹ ಮಂತ್ರಾಲಯಕ್ಕೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಕೇಂದ್ರ ಸರಕಾರ ಕೂಡ ಕಾನೂನು ಪಂಡಿತರ ಸಲಹೆ ಯಾಚಿಸಿದೆ. ನಾವು ಬೇಕಿದ್ದರೆ ಮತ್ತೊಂದು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ, ಆದರೆ ಯಾರೊಂದಿಗೂ ಅಪವಿತ್ರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಎಎಪಿ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಕಡ್ಡಿಮುರಿದಂತೆ ಹೇಳಿಕೆ ನೀಡಿದ್ದಾರೆ.