ಬ್ಯಾಟರಿ ಫ್ಯಾಕ್ಟರಿ ಸ್ಪೋಟ: ಮೃತ ಅಗ್ನಿಶಾಮಕ ಸಿಬ್ಬಂದಿಗೆ 1 ಕೋಟಿ
ದೆಹಲಿ, ಜನವರಿ.02: ರಾಷ್ಟ್ರ ರಾಜಧಾನಿ ಮತ್ತೊಂದು ಅಗ್ನಿ ಅವಘಡಕ್ಕೆ ಸಾಕ್ಷಿಯಾಗಿದೆ. ದೆಹಲಿ ಉದ್ಯೋಗ ನಗರದ ಪೀರ್ ಗರ್ಹಿ ಬಳಿ ಬ್ಯಾಟರಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿತ್ತು. ಬೆಳ್ಳಂಬೆಳಗ್ಗೆ 4.23ರ ವೇಳೆ ಸಂಭವಿಸಿದ ಸ್ಫೋಟದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ 9 ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿದವು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಯಿತು. ಕಾರ್ಖಾನೆ ಒಳಗೆ ಸಿಲುಕಿದ್ದ ಎಲ್ಲ ಕಾರ್ಮಿಕರನ್ನು ರಕ್ಷಿಸಲಾಯಿತು. ಆದರೆ, ಈ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಅಮಿತ್ ಬಲಿಯಾನ್ ಮೃತಪಟ್ಟರು.
ದೆಹಲಿ: ಕಿರಾರಿ ಪ್ರದೇಶದಲ್ಲಿ ಬೆಂಕಿ ಅನಾಹುತಕ್ಕೆ 9 ಮಂದಿ ಸಾವು
ಕಾರ್ಮಿಕರ ಪ್ರಾಣ ರಕ್ಷಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿ ಅಮಿತ್ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಇದೀಗ ಮೃತ ಅಮಿತ್ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದ ಕೇಜ್ರಿವಾಲ್:
ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಮೃತಪಟ್ಟ ಅಮಿತ್ ಬಲಿಯಾನ್ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ದೆಹಲಿ ಸರ್ಕಾರದಿಂದ 1 ಕೋಟಿ ರೂಪಾಯಿ ಪರಿಹಾರವನ್ನು ನೀಡಲಾಗುತ್ತದೆ. ಕರ್ತವ್ಯದ ಬಗ್ಗೆ ಅವರಿಗಿದ್ದ ಪ್ರೀತಿಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿ ಅಗ್ನಿಶಾಮಕ ದಳ ಇಲಾಖೆಯಲ್ಲಿ ನೇಮಕಗೊಂಡ ಬಳಿಕ ಅಮಿತ್ ಬಲಿಯಾನ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಕಳೆದ 2019ರ ಫೆಬ್ರವರಿಯಲ್ಲಿ ವಿವಾಹವಾಗಿದ್ದ ಅಮಿತ್ ಅವರಿಗೆ ಆಗಸ್ಟ್ ತಿಂಗಳಿನಲ್ಲಿ ದೆಹಲಿ ಪಶ್ಚಿಮ ವಿಭಾಗದ ಅಗ್ನಿಶಾಮಕ ಠಾಣೆಗೆ ವರ್ಗಾವಣೆಯಾಗಿತ್ತು.