15 ಮೀಸಲು ಕ್ಷೇತ್ರಗಳು ಅರವಿಂದ ಲಿಂಬಾವಳಿ ಹೆಗಲಿಗೆ
ಬೆಂಗಳೂರು, ನ.27: ಒಂದು ಕಡೆ ಆಡಳಿತಾರೂಢ ಕಾಂಗ್ರೆಸ್ ಮತ್ತೊಂದೆಡೆ ಹೊಸದಾಗಿ ಚಿಗಿತುಕೊಂಡ ಆಮ್ ಆದ್ಮಿ ಪಾರ್ಟಿ. ಇದರ ಮಧ್ಯೆ ರಾಷ್ಟ್ರ ರಾಜಧಾನಿಯನ್ನು ಮತ್ತೆ ತನ್ನ ಕಬ್ಜಾಗೆ ತೆಗೆದುಕೊಳ್ಳಲು ಭಾರತೀಯ ಜನತಾ ಪಕ್ಷ ತೀವ್ರ ಹಣಾಹಣಿ ನಡೆಸಿದೆ.
ಈ ಪ್ರಯತ್ನದಲ್ಲಿ ಕರ್ನಾಟಕದ ಮಾಜಿ ಸಚಿವ, ಪ್ರಭಾವಿ ನಾಯಕ ಅರವಿಂದ ಲಿಂಬಾವಳಿ ಅವರನ್ನು ಬಿಜೆಪಿ ವರಿಷ್ಠರು ದಿಲ್ಲಿಗೆ ಕರೆಸಿಕೊಂಡಿದ್ದು, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಒಂದಷ್ಟು ಸ್ಥಾನಗಳನ್ನು ಗೆಲ್ಲಿಸಿಕೊಡಲು ನೆರವಾಗಿ ಎಂದು ಕೋರಿದ್ದಾರೆ. ಇಂತಹ ಸೇವಾ ಭಾಗ್ಯಕ್ಕಾಗಿ ಕಾಯುತ್ತಿದ್ದ ಲಿಂಬಾವಳಿ ಸಹ ಅದಾಗಲೇ ದಿಲ್ಲಿಗೆ ಹಾರಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 15 ಮೀಸಲು ಕ್ಷೇತ್ರಗಳನ್ನು ಗುರುತಿಸಿ, ಚುನಾವಣೆ ಕಾರ್ಯತಂತ್ರ ಹಾಗೂ ಪ್ರಚಾರಸಭೆ ಉಸ್ತುವಾರಿಯನ್ನು ವಹಿಸಿಕೊಳ್ಳುವಂತೆ ಪಕ್ಷದ ವರಿಷ್ಠ ರಾಜನಾಥ್ ಸಿಂಗ್ ಅವರು ಬೆಂಗಳೂರು ಮಹದೇವಪುರ ಕ್ಷೇತ್ರದ ಹಾಲಿ ಶಾಸಕ ಅರವಿಂದ ಲಿಂಬಾವಳಿಗೆ ಸೂಚಿಸಿದ್ದಾರೆ.
ಅದರಂತೆ, ಅರವಿಂದ ಲಿಂಬಾವಳಿ ಅವರು ಡಿಸೆಂಬರ್ 4ರಂದು ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗಳಲ್ಲಿ ಗುರುತರ ಜವಾಬ್ದಾರಿ ಹೊರಲು ದೆಹಲಿಯತ್ತ ಮುಖ ಮಾಡಿದ್ದಾರೆ. ತ್ರಿಲೋಕಪುರ, ಅಂಬೇಡ್ಕರ ನಗರ, ಗ್ರೇಟರ್ ಕೈಲಾಶ್, ರಾಜೇಂದ್ರ ನಗರ ಸೇರಿದಂತೆ 15 ಮೀಸಲು ಕ್ಷೇತ್ರಗಳ ಪ್ರಚಾರದ ಜವಾಬ್ದಾರಿಯನ್ನು ಶಾಸಕ ಲಿಂಬಾವಳಿ ಅವರಿಗೆ ನೀಡಲಾಗಿದೆ.
ಈಗಾಗಲೇ ಲೋಕಸಭಾ ಚುನಾವಣೆ modeನಲ್ಲಿರುವ ಲಿಂಬಾವಳಿ ಸಹ ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಲು ಉತ್ಸುಕರಾಗಿದ್ದು, ಡಿಸೆಂಬರ್ 8ರಂದು ಭಾನುವಾರ ಚುನಾವಣೆ ಫಲಿತಾಂಶ ಹೊರಬೀಳಲಿದೆ.