ದೆಹಲಿ ವಿಧಾನಸಭೆ ಚುನಾವಣೆಗೆ ಮುಹೂರ್ತ: ಮತದಾನ, ಫಲಿತಾಂಶದ ದಿನಾಂಕ ಪ್ರಕಟ
ನವದೆಹಲಿ, ಜನವರಿ 6: ರಾಷ್ಟ್ರೀಯ ರಾಜಧಾನಿ ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ಫೆ. 8ರಂದು ಚುನಾವಣೆ ನಡೆಯಲಿದೆ. ಶಕ್ತಿ ಕೇಂದ್ರವಾಗಿರುವ ರಾಜಧಾನಿಯಲ್ಲಿನ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಎರಡನೆಯ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಬಳಿಕವೂ ಅನೇಕ ರಾಜ್ಯಗಳಲ್ಲಿ ಹಿಡಿತ ಕಳೆದುಕೊಂಡಿರುವ ಬಿಜೆಪಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ, ದೆಹಲಿ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟಿಸಿದರು.
ಪ್ರಸ್ತುತ ದೆಹಲಿ ಸರ್ಕಾರದ ಅವಧಿಯು ಫೆ. 22ಕ್ಕೆ ಅಂತ್ಯಗೊಳ್ಳಲಿದೆ. ಚುನಾವಣಾ ನೀತಿ ಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬರಲಿದೆ. ಜ. 14ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಫೆ. 11ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ನಾಮಪತ್ರಗಳನ್ನು ಸಲ್ಲಿಸಲು ಜನವರಿ 21 ಕೊನೆಯ ದಿನವಾಗಿದೆ. ಜ. 23ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸಲ್ಲಿಕೆಯಾದ ನಾಮಪತ್ರಗಳನ್ನು ವಾಪಸ್ ಪಡೆಯಲು ಜ. 24ಕೊನೆಯ ದಿನವಾಗಿದೆ.
1.46 ಕೋಟಿ ಮತದಾರರು
ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 13,750 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2020ರ ಜನವರಿ 6ಕ್ಕೆ ಅಂತ್ಯಗೊಂಡಿರುವ ಪಟ್ಟಿಯಂತೆ ದೆಹಲಿಯಲ್ಲಿ 1,46,92,136 ಮತದಾರರು ಮತಚಲಾಯಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಇದರಲ್ಲಿ 80.55 ಲಕ್ಷ ಪುರುಷರು ಮತ್ತು 66.35 ಲಕ್ಷ ಮಹಿಳಾ ಮತದಾರರು ಇದ್ದಾರೆ ಎಂದು ಆಯೋಗ ತಿಳಿಸಿದೆ.
ಹೊಸ ಪ್ರಯೋಗ ಜಾರಿ
ಈ ಚುನಾವಣೆಯಿಂದ ಹೊಸ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಅಂಗವೈಕಲ್ಯ ಅಥವಾ ಅನಿವಾರ್ಯ ಕಾರಣಗಳಿಂದ ಮತ ಹಾಕಲು ಸಾಧ್ಯವಾಗದವರಿಗಾಗಿ ವಿಶೇಷ ಸೌಲಭ್ಯ ನೀಡಲಾಗುತ್ತಿದೆ. ಮತದಾನದ ವೇಳೆ ಅಂಗವಿಕಲರು ಮತ್ತು 80 ವರ್ಷ ಮೀರಿದ ಹಿರಿಯ ನಾಗರಿಕರನ್ನು ಮತಗಟ್ಟೆಗೆ ಕರೆತರಲು ಅಥವಾ ಅವರಿಗೆ ಅಂಚೆ ಮತದಾನ ಹಾಕಲು ಅವಕಾಶ ನೀಡುವ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ.
ಕಳೆದ ಬಾರಿ ಎಎಪಿ ದಿಗ್ವಿಜಯ
2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ 57 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಕೇವಲ ಮೂರು ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆದರೆ ಒಂದು ಕಾಲದಲ್ಲಿ ದೆಹಲಿಯಲ್ಲಿ ಭಾರಿ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿಯೂ ಗೆಲ್ಲದೆ ಮುಖಭಂಗ ಅನುಭವಿಸಿತ್ತು.
ಎಎಪಿ-ಬಿಜೆಪಿ ನಡುವೆ ಪೈಪೋಟಿ
ಎಎಪಿ ಶೇ 54, ಬಿಜೆಪಿ ಶೇ 32, ಕಾಂಗ್ರೆಸ್ ಶೇ 10 ಮತ್ತು ಇತರೆ ಪಕ್ಷಗಳು ಶೇ 4ರಷ್ಟು ಮತಗಳನ್ನು ಪಡೆದಿದ್ದವು. ಆದರೆ 2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ದೆಹಲಿ ಎಲ್ಲ ಏಳೂ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿತ್ತು. ಇದರ ಬಳಿಕ ರಾಜಧಾನಿಯಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹೀಗಾಗಿ ದೆಹಲಿ ವಿಧಾನಸಭೆ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಎಎಪಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಡುವೆ ತೀವ್ರ ಹಣಾಹಣಿ ನಿರೀಕ್ಷಿಸಲಾಗಿದೆ. ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಮರಳಿ ಪಡೆದುಕೊಳ್ಳಲು ಪ್ರಯತ್ನಿಸಲಿದೆ.