ದೆಹಲಿ ಚುನಾವಣೆ: ಅರವಿಂದ್ ಕೇಜ್ರಿವಾಲ್ ವಿರುದ್ಧ ಯುವ ನಾಯಕನನ್ನು ಕಣಕ್ಕಿಳಿಸಿದ ಬಿಜೆಪಿ
ನವದೆಹಲಿ, ಜನವರಿ 21: ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಅಂತಿಮ ಪಟ್ಟಿಯಲ್ಲಿ ಬಿಜೆಪಿ ಮಂಗಳವಾರ ಮಧ್ಯರಾತ್ರಿ ಪ್ರಕಟಿಸಿದೆ.
Recommended Video
10 ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಮಧ್ಯರಾತ್ರಿ 1 ಗಂಟೆಗೆ ಬಿಡುಗಡೆ ಮಾಡಲಾಗಿದ್ದು, ದೆಹಲಿ ಮುಖ್ಯಮಂತ್ರಿ, ಎಎಪಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸುನಿಲ್ ಯಾದವ್ ಅವರನ್ನು ಕಣಕ್ಕಿಳಿಸಲಾಗಿದೆ. ಪ್ರಚಾರದಲ್ಲಿ ಮುಳುಗಿದ್ದ ಅರವಿಂದ್ ಕೇಜ್ರಿವಾಲ್, ಸೋಮವಾರ ನಿಗದಿತ ಸಮಯದೊಳಗೆ ನಾಮಪತ್ರ ಸಲ್ಲಿಸುವಲ್ಲಿ ವಿಫಲರಾಗಿದ್ದರು. ಅವರು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಸಿಎಂ ಅರವಿಂದ್ ಕೇಜ್ರಿವಾಲ್ ಯಾಕೆ ನಾಮಪತ್ರ ಸಲ್ಲಿಸಲಿಲ್ಲ ಗೊತ್ತೆ?
ದೆಹಲಿ ಬಿಜೆಪಿಯ ಯುವ ಮೋರ್ಚಾ ಘಟಕದ ಅಧ್ಯಕ್ಷರಾಗಿರುವ ಯುವ ಮುಖಂಡ ಸುನಿಲ್ ಯಾದವ್, ವೃತ್ತಿಯಿಂದ ವಕೀಲರಾಗಿದ್ದಾರೆ. ದೆಹಲಿ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ದೆಹಲಿಯಲ್ಲಿ ಅತ್ಯಂತ ಪ್ರಭಾವಿ ಸರ್ಕಾರ ನಡೆಸಿರುವ ಅರವಿಂದ್ ಕೇಜ್ರಿವಾಲ್ ವಿರುದ್ಧ ಯುವ ಮುಖಂಡನನ್ನು ಅಖಾಡಕ್ಕೆ ಇಳಿಸುವ ಮೂಲಕ ಬಿಜೆಪಿ, ಯುವ ಜನರ ಮತಗಳನ್ನು ಸೆಳೆಯುವ ತಂತ್ರಕ್ಕೆ ಮುಂದಾಗಿದೆ.
ಗ್ಯಾಲರಿ: ದಿಲ್ಲಿ ಗಲ್ಲಿಗಲ್ಲಿಗಳಲ್ಲಿ ಚುನಾವಣೆ ರಂಗೋ ರಂಗು
ಟಿಕೆಟ್ ಸಿಗದಿದ್ದಕ್ಕೆ ಬಗ್ಗಾ ಟ್ರೋಲ್
ಬಿಜೆಪಿಯ ದೆಹಲಿ ಘಟಕದ ವಕ್ತಾರರಾಗಿರುವ ತೇಜಿಂದರ್ ಬಗ್ಗಾ ಹತ್ತು ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಮತ್ತೊಂದು ಹೆಸರು. ಬಿಜೆಪಿಯ ಪರ ಮತ್ತು ವಿರೋಧ ಪಕ್ಷಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪೋಸ್ಟ್ಗಳನ್ನು ಹಾಕುವ ತೇಜಿಂದರ್ ಬಗ್ಗಾ ಹೆಸರು ಮೊದಲ ಪಟ್ಟಿಯಲ್ಲಿ ಕಾಣಿಸಿಕೊಳ್ಳದಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ವಿಪರೀತ ಟ್ರೋಲ್ ಮಾಡಲಾಗಿತ್ತು.
ಆದರೆ ಮಂಗಳವಾರ ತಡರಾತ್ರಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ತೇಜಿಂದರ್ ಬಗ್ಗಾ ಅವರನ್ನು ಹರಿ ನಗರ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಸುತ್ತಿರುವುದಾಗಿ ಬಿಜೆಪಿ ತಿಳಿಸಿದೆ. ತೇಜಿಂದರ್ ಬಗ್ಗಾ, ತಿಲಕ್ ನಗರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದರು. ಆ ಕ್ಷೇತ್ರವನ್ನು ಬೇರೆ ಅಭ್ಯರ್ಥಿಗೆ ನೀಡಲಾಗಿದೆ.
ಹಲ್ಲೆ ನಡೆಸಿದ ಆರೋಪ
ಭಗತ್ ಸಿಂಗ್ ಕ್ರಾಂತಿ ಸೇನಾ ಎಂಬ ಸಂಘಟನೆ ಸ್ಥಾಪಿಸಿದ್ದ ಬಗ್ಗಾ, ಆ ಮೂಲಕ ವಿವಿಧ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದರು. ಕಾಶ್ಮೀರದ ಕುರಿತಾದ ಉದ್ರೇಕಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಕೀಲ ಮತ್ತು ಎಎಪಿ ನಾಯಕ ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದ ಆರೋಪ ಬಗ್ಗಾ ಅವರ ಮೇಲಿದೆ.
ಮೊದಲ ಪಟ್ಟಿಯಲ್ಲಿ ಬಿಜೆಪಿ 57 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಎಎಪಿಯ ಬಂಡಾಯ ಅಭ್ಯರ್ಥಿ ಕಪಿಲ್ ಮಿಶ್ರಾ ಮತ್ತು ಬಿಜೆಪಿಯ ಹಿರಿಯ ನಾಯಕ ವಿಜೇಂದರ್ ಗುಪ್ತಾ ಅವರಿಗೂ ಸ್ಥಾನ ನೀಡಲಾಗಿದೆ. 70 ಸೀಟುಗಳ ದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ 67 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.
ಯಾರು ಎಲ್ಲಿಂದ ಸ್ಪರ್ಧೆ?
ಕಲ್ಕಾಜಿ ಕ್ಷೇತ್ರದಿಂದ ಧರಮ್ವೀರ್ ಸಿಂಗ್, ಷಹ್ದಾರಾ ಕ್ಷೇತ್ರದಿಂದ ಪೂರ್ವ ದೆಹಲಿಯ ಉಪ ಮೇಯರ್ ಸಂಜಯ್ ಗೋಯಲ್, ರಜೌರಿ ಗಾರ್ಡನ್ನಿಂದ ರಮೇಶ್ ಖನ್ಮಾ ಸ್ಪರ್ಧಿಸಲಿದ್ದಾರೆ.
ನಂಗ್ಲೋಯಿ ಜಾತ್ನಿಂದ ಸುಮನ್ಲತಾ ಶೋಕೀನ್, ಕಸ್ತೂರ್ಬಾ ನಗರದಿಂದ ರವೀಂದ್ರ ಚೌಧರಿ, ಮೆಹ್ರೌಲಿಯಿಂದ ಕುಸುಮ್ ಖತ್ರಿ ಮತ್ತು ಕೃಷ್ಣ ನಗರದಿಂದ ಅನಿಲ್ ಗೋಯಲ್, ದೆಹಲಿ ಕಂಟೋನ್ಮೆಂಟ್ನಿಂದ ಮನೀಶ್ ಸಿಂಗ್ ಹೆಸರನ್ನು ಅಂತಿಮಗೊಳಿಸಲಾಗಿದೆ.
ಮಿತ್ರಪಕ್ಷಗಳಿಗೆ ಮೂರು ಸೀಟು
ಉಳಿದ ಮೂರು ಕ್ಷೇತ್ರಗಳಿಗೆ ಬಿಜೆಪಿ ಮಿತ್ರಪಕ್ಷಗಳಾದ ಲೋಕಜನಶಕ್ತಿ ಪಕ್ಷ (ಎಲ್ಜೆಪಿ) ಮತ್ತು ಜೆಡಿಯು ಅಭ್ಯರ್ಥಿಗಳನ್ನು ಇಳಿಸಲಿದೆ. ಜೆಡಿಯು ಬುರಾರಿ ಮತ್ತು ಸಂಗಮ್ ವಿಹಾರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಲಿದೆ. ಸೀಮಾಪುರಿ ಕ್ಷೇತ್ರದಿಂದ ಎಲ್ಜೆಪಿ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ.
ಬಿಜೆಪಿಯಿಂದ ಶಿರೋಮಣಿ ದೂರ
ಬಿಜೆಪಿಯ ಮತ್ತೊಂದು ಮಿತ್ರಪಕ್ಷ ಶಿರೋಮಣಿ ಅಕಾಲಿದಳವು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಾದ ತನ್ನ ನಿಲುವಿನ ಕಾರಣ ಈ ಬಾರಿ ಬಿಜೆಪಿ ಜತೆಗೂಡಿ ಸ್ಪರ್ಧಿಸುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್ಎಡಿಗೆ ಬಿಜೆಪಿ ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿತ್ತು. ಈ ಕ್ಷೇತ್ರಗಳಲ್ಲಿ ಈ ಬಾರಿ ಅಭ್ಯರ್ಥಿಗಳನ್ನು ಇಳಿಸಿದೆ.