'ಉಚಿತ ವೈಫೈ ಜೊತೆಗೆ ಫ್ರೀ ಚಾರ್ಜಿಂಗ್' ಬಿಜೆಪಿ ಕೇಜ್ರಿವಾಲ್ ಟಾಂಗ್!
ನವದೆಹಲಿ, ಜನವರಿ.24: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನಸು ಗೆಲ್ಲಲು ಬಿಜೆಪಿ ಹಾಗೂ ಆಪ್ ಪಕ್ಷಗಳು ಪೈಪೋಟಿಗೆ ಬಿದ್ದಿದೆ. ಎರಡನೇ ಬಾರಿ ಗದ್ದುಗೆ ಏರಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಣ ತೊಟ್ಟಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅಮಿತ್ ಶಾ ಜಿದ್ದಿಗೆ ಬಿದ್ದಿದ್ದಾರೆ.
ವಿಧಾನಸಭಾ ಚುನಾವಣೆ ಕಣದಲ್ಲಿ ಸರ್ಕಾರದ ವಿರುದ್ಧ ಅಬ್ಬರಿಸಿದ ಅಮಿತ್ ಶಾಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ. ರಾಜ್ಯ ಸರ್ಕಾರವು ಉಚಿತ ವೈಫೈ ಜೊತೆಗೆ ಬ್ಯಾಟರಿ ಉಚಿತ ಚಾರ್ಜ್ ಪಾಯಿಂಟ್ ಗಳನ್ನು ನೀಡಲಾಗಿದೆ ಎಂದು ಮಾತಿನ ಗುದ್ದು ಕೊಟ್ಟಿದ್ದಾರೆ.
ದೆಹಲಿಗಾಗಿ ''ಕೇಜ್ರಿವಾಲ್ ಕಾ ಗ್ಯಾರಂಟಿ ಕಾರ್ಡ್" ಬಿಡುಗಡೆ
ಗುರುವಾರ ದೆಹಲಿ ಸರ್ಕಾರದ ವಿರುದ್ಧ ಪ್ರಚಾರ ನಡೆಸಿದ ಅಮಿತ್ ಶಾ, ಈ ಹಿಂದೆ ಆಪ್ ಸರ್ಕಾರ ನೀಡಿದ್ದ ಭರವಸೆಗಳನ್ನು ಇಂದಿಗೂ ಈಡೇರಿಸಿಲ್ಲ ಎಂದು ಆರೋಪಿಸಿದರು. ದೆಹಲಿಯಲ್ಲಿ ಉಚಿತ ವೈಫೈ ನೀಡುತ್ತಾರೆ. ಆದರೆ, ವೈಫೈ ಬಳಸಲು ಮೊಬೈಲ್ ನಲ್ಲೇ ಬ್ಯಾಟರಿ ಇರೋದಿಲ್ಲ ಎಂದು ಲೇವಡಿ ಮಾಡಿದ್ದರು.
ದೆಹಲಿಯಲ್ಲಿ 200 ವ್ಯಾಟ್ ವಿದ್ಯುತ್ ಉಚಿತ
ಬಿಜೆಪಿ ಮುಖಂಡ ಅಮಿತ್ ಶಾ ಆರೋಪಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ. ದೆಹಲಿಯಲ್ಲಿ ಉಚಿತ ವೈಫೈ ನೀಡುವುದಷ್ಟೇ ಅಲ್ಲ, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಗಳನ್ನು ತೆರೆಯಲಾಗಿದೆ. ಜೊತೆಗೆ ದೆಹಲಿಯ ಜನತೆಗೆ 200 ವ್ಯಾಟ್ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
"ರಾಜಕೀಯ ಚಿತ್ರಣ ಬದಲಿಸಿದ ಜನತೆಗೆ ಧನ್ಯವಾದ"
ದೆಹಲಿಯ 1,041 ಸರ್ಕಾರಿ ಶಾಲೆಗಳಲ್ಲಿ 1.2 ಲಕ್ಷ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡುವುದಾಗಿ ಈ ಹಿಂದೆ ಆಮ್ ಆದ್ಮಿ ಪಕ್ಷವು ಭರವಸೆ ನೀಡಿತ್ತು. ಕೊಟ್ಟ ಮಾತನ್ನು ತಪ್ಪುವ ಮೂಲಕ ಸರ್ಕಾರವು ಜನರನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಅಮಿತ್ ಶಾ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸಿಎಂ ಕೇಜ್ರಿವಾಲ್, ಬಿಜೆಪಿಯವರು ಶಾಲೆಗಳ ಭದ್ರತೆ ಹಾಗೂ ಸಿಸಿ ಕ್ಯಾಮರಾಗಳ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ. ಇಂದು ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುವಂತೆ ಮಾಡಿರುವ ದೆಹಲಿ ಜನರಿಗೆ ಧನ್ಯವಾದ ಎನ್ನುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದರು.
ದೆಹಲಿ ಜನತೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಗ್ಯಾರಂಟಿ ಕಾರ್ಡ್
ರಸ್ತೆಗಳ ಅಭಿವೃದ್ಧಿ ನೀರು ಪೂರೈಕೆ, ಸಿಸಿ ಕ್ಯಾಮರಾಗಳ ಅಳವಡಿಕೆ ಹಾಗೂ ಮೊಹಲ್ಲಾ ಕ್ಲಿನಿಕ್ಸ್ ಗಳನ್ನು ಅನಧಿಕೃತ ಕಾಲೋನಿಗಳಲ್ಲಿ ನೀಡಲು ಯೋಜನೆ ರೂಪಿಸಲಾಗಿದೆ. ನಗರದ ವಾಯುಮಾಲಿನ್ಯ ನಿಯಂತ್ರಣ, ಸ್ಲಂನಲ್ಲಿ ವಾಸಿವಾಗಿರುವ ಜಹಾ ಝುಗ್ಗಿ ವಾಹಿ ಮಕಾನ್ ಅಡಿಯಲ್ಲಿ ಮನೆಗಳನ್ನು ನಿರ್ಮಿಸಲಾಗುವುದು. ಖಾಸಗಿ ಶಾಲೆಗಳು ಶುಲ್ಕ ಏರಿಕೆ ಮಾಡುವುದರ ಮೇಲೆ ನಿಯಂತ್ರಣ ಮುಂತಾದ ಅಂಶಗಳನ್ನು ಒಳಗೊಂಡ ಗ್ಯಾರಂಟಿ ಕಾರ್ಡ್ ನ್ನು ಇತ್ತೀಚಿಗಷ್ಟೇ ಸಿಎಂ ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಿದ್ದರು.
ನವದೆಹಲಿಯಲ್ಲಿ ಮರುಕಳಿಸುತ್ತಾ ಹಳೆಯ ಇತಿಹಾಸ?
ಈ ಹಿಂದೆ ನವದೆಹಲಿಯಲ್ಲಿ ನಡೆದ 2015ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಹೊಸ ಇತಿಹಾಸ ಸೃಷ್ಟಿಸಿತ್ತು. 70 ವಿಧಾನಸಭಾ ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಆಪ್ ಪಕ್ಷವು ಜಯಭೇರಿ ಬಾರಿಸಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೇ ತೀವ್ರ ಮುಖಭಂಗ ಅನುಭವಿಸಿದ್ದವು.