5 ವರ್ಷಗಳ ಹಿಂದೆ ಸಿಎಂ ಕೇಜ್ರಿವಾಲ್ ಏನ್ ಹೇಳಿದ್ದರು ಗೊತ್ತಾ?
ನವದೆಹಲಿ, ಜನವರಿ.24: ನವದೆಹಲಿ ವಿಧಾನಸಭಾ ಚುನಾವಣಾ ಕಣದಲ್ಲಿ ನಾಯಕರ ನಡುವಿನ ವಾಕ್ಸಮರ ಮುಂದುವರಿದಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳೆಲ್ಲ ಪಾತಾಳಕ್ಕೆ ಕುಸಿದಿವೆ ಎಂದು ಕೇಂದ್ರ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ನವದೆಹಲಿಯ ಕರವಾಲ್ ನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು. ಈ ವೇಳೆ ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಐದು ವರ್ಷಗಳ ಹಿಂದೆ ಆಮ್ ಆದ್ಮಿ ಪಕ್ಷವು ಕೊಟ್ಟ ಎಲ್ಲ ಭರವಸೆಗಳನ್ನು ಮರೆತಂತೆ ಕಾಣುತ್ತಿದೆ. ರಾಷ್ಟ್ರ ರಾಜಧಾನಿಯಲ್ಲೇ ಅಭಿವೃದ್ಧಿ ಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ದೂರಿದರು.
ಉಚಿತ ವೈಫೈ ಜೊತೆಗೆ ಫ್ರೀ ಚಾರ್ಜಿಂಗ್' ಬಿಜೆಪಿ ಕೇಜ್ರಿವಾಲ್ ಟಾಂಗ್!
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಹಿಂದೆ ನೀಡಿದ ಭರವಸೆಗಳನ್ನು ನೀವೇ ಜ್ಞಾಪಿಸಬೇಕಿದೆ. ಹೊಸ ಶಾಲೆಗಳ ಕಾಮಗಾರಿ ಎಲ್ಲಿ ನಡೆಯುತ್ತಿದೆ. 700 ಶಾಲೆಗಳಲ್ಲಿ ಪ್ರಾಂಶುಪಾಲರೇ ಇಲ್ಲ, ಈ ಪೈಕಿ ಅದೆಷ್ಟೋ ಶಾಲೆಗಳಲ್ಲಿ ವಿಜ್ಞಾನ ವಿಭಾಗವೇ ಇಲ್ಲ. ಇನ್ನು, ಸರ್ಕಾರಿ ಶಾಲೆಗಳಲ್ಲಿ 19 ಸಾವಿರ ಶಿಕ್ಷಕರ ಕೊರತೆ ಎದುರಿಸುತ್ತಿವೆ. ಸಿಎಂ ನಿಮ್ಮ ಬಳಿ ಬಂದಾಗ ನೀವೇ ಅವರನ್ನು ಪ್ರಶ್ನೆ ಮಾಡಬೇಕು ಎಂದು ಅಮಿತ್ ಶಾ ಕರೆ ನೀಡಿದರು.
ಸುಳ್ಳೇ ಸುಳ್ಳು ಸಿಎಂ ಆಡಿದ್ದೆಲ್ಲಾ ಸುಳ್ಳೇ ಸುಳ್ಳು:
ದೆಹಲಿಯ ಸರ್ಕಾರ ಶಾಲೆಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಕೆ ಬಗ್ಗೆ ಸರ್ಕಾರವು ಭರವಸೆ ನೀಡಿತ್ತು. ಆದರೆ, 15 ಲಕ್ಷ ಸಿಸಿ ಕ್ಯಾಮರಾಗಳನ್ನು ಅದೆಲ್ಲ ಅಳವಡಿಕೆ ಮಾಡಿದ್ದಾರೋ ಏನೋ ಎಂದು ಅಮಿತ್ ಶಾ ಪ್ರಶ್ನೆ ಮಾಡಿದರು. ಇದರ ಜೊತೆಗೆ ಯಮುನಾ ನದಿ ಶುದ್ಧೀಕರಣಗೊಳಿಸುವುದಾಗಿ ಭರವಸೆ ನೀಡಿದ್ದ ಕೇಜ್ರಿವಾಲ್ ಇದೀಗ ಕೊಟ್ಟ ಮಾತನ್ನೇ ಮರತೆ ಬಿಟ್ಟಿದ್ದಾರೆ ಎಂದು ಅಮಿತ್ ಶಾ ಕಿಡಿ ಕಾರಿದರು.
ದೆಹಲಿ ನಗರ ಸಾರಿಗೆ ಸಂಚಾರಕ್ಕಾಗಿ 5 ಸಾವಿರ ಬಸ್ ಗಳನ್ನು ಸರ್ಕಾರವು ಖರೀದಿಸಿದೆ ಎಂದು ಮಾಹಿತಿ ನೀಡಲಾಗಿದೆ. ಆದರೆ, ಸರ್ಕಾರ ಖರೀದಿಸಿದ್ದೇ ಕೇವಲ 300 ಬಸ್ ಗಳು. ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿಯ ಜನರಿಗೆ ಸುಳ್ಳು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.