ದೆಹಲಿಯಲ್ಲಿ ಚೆಲುವ ಅಭ್ಯರ್ಥಿಗೆ ಮನಸೋತ ಮಾನಿನಿಯರು: ಮದುವೆಯಾಗಿ ಎಂದು ದುಂಬಾಲು!
ನವದೆಹಲಿ, ಫೆಬ್ರವರಿ 5: ಚುನಾವಣೆಯ ಅಖಾಡಕ್ಕೆ ಇಳಿದ ಅಭ್ಯರ್ಥಿಗಳು ಮತಬೇಟೆ ನಡೆಸುವುದರಲ್ಲಿ ಮಗ್ನರಾಗಿರುತ್ತಾರೆ. ಆದರೆ ದೆಹಲಿ ಚುನಾವಣೆಯಲ್ಲಿ ಎಎಪಿಯಿಂದ ಸ್ಪರ್ಧೆಗಿಳಿದಿರುವ ಸುರಸುಂದರಾಂಗ ಅಭ್ಯರ್ಥಿಯೊಬ್ಬರು ಹೃದಯಗಳ ಬೇಟೆಯಾಡುತ್ತಿದ್ದಾರೆ.
ಎಎಪಿಯ ಪ್ರಣಾಳಿಕೆಯನ್ನು ಎಷ್ಟು ಜನರು ಮೆಚ್ಚಿದ್ದಾರೋ ಗೊತ್ತಿಲ್ಲ, ಆದರೆ ಎಎಪಿಯ ಅಭ್ಯರ್ಥಿಯನ್ನಂತೂ ಮೆಚ್ಚಿದ್ದಾರೆ. ಈ ಆಕರ್ಷಕ ವ್ಯಕ್ತಿತ್ವದ ಚೆಲುವನನ್ನು ವರಿಸಿಕೊಳ್ಳಲು ನಾಮುಂದು ತಾಮುಂದು ಎಂದು ಮದುವೆ ಪ್ರಸ್ತಾಪಗಳನ್ನು ಕಳಿಸುತ್ತಿದ್ದಾರೆ. ಇವೆಲ್ಲವೂ ಮದುವೆಯ ಬೇಡಿಕೆಗಳಾಗಿ ಉಳಿಯುತ್ತವೆಯೋ ಅಥವಾ ಮತಗಳಾಗಿಯೂ ಪರಿವರ್ತನೆಯಾಗಿ ಅವರು ಗೆಲ್ಲುತ್ತಾರೆಯೋ ಎನ್ನುವುದನ್ನು ತಿಳಿಯಲು ಫೆ. 11ರವರೆಗೆ ಕಾಯಬೇಕು.
ದೆಹಲಿ: ಎಎಪಿ ಅಭ್ಯರ್ಥಿಗಳೇ ಹೆಚ್ಚು ಅಪರಾಧ ಹಿನ್ನೆಲೆಯುಳ್ಳವರು
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 31 ವರ್ಷದ ಅವಿವಾಹಿತ ರಾಘವ್ ಚಧಾ ರಾಜಿಂದರ್ ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ವೃತ್ತಿಯಿಂದ ಚಾರ್ಟೆಡ್ ಅಕೌಂಟೆಡ್ ಆಗಿರುವ ರಾಘವ್, ಎಎಪಿಯ 39 ತಾರಾ ಪ್ರಚಾರಕರಲ್ಲಿ ಒಬ್ಬರು.
12ಕ್ಕೂ ಹೆಚ್ಚು ಮದುವೆ ಪ್ರಸ್ತಾವಗಳು
ರಾಘವ್ ಅವರು ಈಗಾಗಲೇ ಹತ್ತಾರು ರೋಡ್ಶೋಗಳು ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿರುವ ಅವರು ಜನರ ಬೆಂಬಲ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ಇನ್ಸ್ಟಾ ಗ್ರಾಂ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ತಮ್ಮ ಪ್ರಚಾರ ಕಾರ್ಯಕ್ರಮಗಳ ವಿವರಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಗುಮೊಗದ ಸುಂದರ ರಾಘವ್ ಕಂಡು ಯುವತಿಯರು ಪ್ರೇಮಪಾಶದಲ್ಲಿ ಬಿದ್ದಿದ್ದಾರೆ. ನನ್ನನ್ನು ಮದುವೆಯಾಗಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕವೇ ಅವರಿಗೆ ಬೇಡಿಕೊಳ್ಳುತ್ತಿದ್ದಾರೆ. ಹೀಗೆ 12ಕ್ಕೂ ಹೆಚ್ಚು ವಿವಾಹ ಪ್ರಸ್ತಾವಗಳು ಅವರಿಗೆ ಬಂದಿದೆ ಎಂದು ರಾಘವ್ ಅವರ ಸಾಮಾಜಿಕ ಮಾಧ್ಯಮ ತಂಡ ತಿಳಿಸಿದೆ.
ಮದುವೆಯಾಗಲು ಇದು ಸೂಕ್ತ ಸಮಯವಲ್ಲ
ಸಾಮಾಜಿಕ ಜಾಲತಾಣಗಳಲ್ಲಿ ರಾಘವ್ ಅವರಿಗೆ ಮಹಿಳಾ ಹಿಂಬಾಲಕರು ಹೆಚ್ಚಾಗಿದ್ದಾರಂತೆ. ಅಷ್ಟೇ ಅಲ್ಲ, ಅವರ ಪೋಸ್ಟ್ಗಳಿಗೆ ಮಹಿಳೆಯರೇ ಮುಗಿಬಿದ್ದು ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಟ್ವಿಟ್ಟರ್ನಲ್ಲಿ ಅವರನ್ನು ಟ್ಯಾಗ್ ಮಾಡಿದ್ದ ಮಹಿಳೆಯೊಬ್ಬರು, ತಮ್ಮನ್ನು ಮದುವೆಯಾಗುವಂತೆ ಬಹಿರಂಗವಾಗಿಯೇ ಕೋರಿದ್ದಾರೆ. ಅದಕ್ಕೆ ರಾಘವ್ ನೀಡಿರುವ ಉತ್ತರ ತಮಾಷೆಯಾಗಿದೆ. 'ಈಗ ಆರ್ಥಿಕತೆ ಚೆನ್ನಾಗಿ ನಡೆಯುತ್ತಿಲ್ಲ. ಹೀಗಾಗಿ ಇದು ಮದುವೆಯಾಗಲು ಸೂಕ್ತ ಸಮಯವಲ್ಲ' ಎಂದು ಜಾರಿಕೊಂಡಿದ್ದಾರೆ ಎಂಬುದಾಗಿ ಅವರ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕ ತಿಳಿಸಿದ್ದಾರೆ.
'ಕೇಜ್ರಿವಾಲ್ ಒಬ್ಬ ಭಯೋತ್ಪಾದಕ, ಅದಕ್ಕೆ ಸಾಕಷ್ಟು ಪುರಾವೆಗಳಿವೆ'
ಮಗಳಿದ್ದರೆ ಕೊಡುತ್ತಿದ್ದೆ!
'ಇತ್ತೀಚೆಗೆ ರಾಗವ್ ಚಧಾ ಅವರು ಶಾಲೆಯೊಂದರಲ್ಲಿ ಸಭೆಗೆ ತೆರಳಿದ್ದಾಗ ಅಲ್ಲಿನ ಶಿಕ್ಷಕಿ, ತಮಗೆ ಮಗಳಿದ್ದರೆ ನಿಮಗೇ ಕೊಟ್ಟು ಮದುವೆ ಮಾಡುತ್ತಿದ್ದೆ ಎಂದು ಹೇಳಿದ್ದರು' ಎಂದು ಅವರ ತಂಡ ಮತ್ತೊಬ್ಬ ಸದಸ್ಯ ಹೇಳಿದ್ದಾರೆ.
ಮದುವೆಯಾಗಿ ಹೃದಯ ಒಡೆಯಬೇಡಿ!
ರಾಘವ್ ಅವರ ಇನ್ಸ್ಟಾಗ್ರಾಂನಲ್ಲಿ ಮಂಗಳವಾರ ವರದಿಯೊಂದನ್ನು ಹಂಚಿಕೊಳ್ಳಲಾಗಿತ್ತು. ಅದರಲ್ಲಿ ಅವರಿಗೆ ವಿವಾಹ ಪ್ರಸ್ತಾಪಗಳ ಪ್ರವಾಹವೇ ಹರಿದುಬರುತ್ತಿದೆ ಎಂದು ತಿಳಿಸಲಾಗಿತ್ತು. ಅದಕ್ಕೆ ಕಾಮೆಂಟ್ ವಿಭಾಗದಲ್ಲಿ ಮಹಿಳೆಯೊಬ್ಬರು, 'ದಯವಿಟ್ಟು ಮದುವೆಯಾಗಬೇಡಿ, ನನ್ನ ಹೃದಯ ಒಡೆದು ಚೂರಾಗುತ್ತದೆ' ಎಂದು ಬರೆದಿದ್ದರು. ಅವರ ಪೋಸ್ಟ್ಗಳ ಕಾಮೆಂಟ್ ವಿಭಾಗದಲ್ಲಿ ಮಹಿಳೆಯರ ಹೃದಯದ ಎಮೋಜಿಗಳೇ ತುಂಬಿಕೊಂಡಿವೆ. ರಾಘವ್ ಅವರ ಪೋಸ್ಟ್ ಹಂಚಿಕೊಂಡಿರುವ ಮಹಿಳೆಯೊಬ್ಬರು, 'ನಮ್ಮ ಸುತ್ತಲಿನ ಅತ್ಯಂತ ಅರ್ಹ ಬ್ಯಾಚುಲರ್' ಎಂದು ಬರೆದುಕೊಂಡಿದ್ದಾರೆ.
ಟೈಮ್ಸ್ ನೌ ಸಮೀಕ್ಷೆ; ದೆಹಲಿಯಲ್ಲಿ ಎಎಪಿ ಜಯಭೇರಿ
ತ್ರಿಕೋನ ಸ್ಪರ್ಧೆ
ಅಂದಹಾಗೆ ರಾಘವ್ ಚಧಾ ಅವರಿಗೆ ಇದು ಮೊದಲ ಚುನಾವಣಾ ಅನುಭವವೇನಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಿಂದ ಅವರು ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಅವರಿಗೆ ಸೋಲಿನ ಕಹಿ ಸಿಕ್ಕಿತ್ತು. ಈ ಬಾರಿ ಅವರು ರಾಜಿಂದರ್ ನಗರದಿಂದ ಸ್ಪರ್ಧಿಸುತ್ತಿದ್ದಾರೆ. ಅವರ ಎದುರು ಬಿಜೆಪಿಯಿಂದ ಜಾಹೀರಾತು ಉದ್ಯಮಿ, ಹಿರಿಯ ಆರ್ಪಿ ಸಿಂಗ್ ಕಣಕ್ಕಿಳಿದಿದ್ದರೆ, ಚುನಾವಣೆಯಲ್ಲಿಯೇ ಅತ್ಯಂತ ಕಿರಿಯ ಎನಿಸಿರುವ 25 ವರ್ಷದ ರಾಕಿ ಟಸೀಡ್ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿದ್ದಾರೆ.