ದೆಹಲಿ ಅಸೆಂಬ್ಲಿ ಚುನಾವಣೆ, ಮತಗಟ್ಟೆ ಸಮೀಕ್ಷೆ: ಭಾರತ 56, ಇಟೆಲಿ 1, ಪಾಕ್ 13
ದೇಶಾದ್ಯಂತ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ದೆಹಲಿ ಅಸೆಂಬ್ಲಿಗೆ ಶನಿವಾರ (ಫೆ 8) ಚುನಾವಣೆ ನಡೆದಿದೆ. ಶೇ. 61ರಷ್ಟು ಮತದಾನವಾಗಿದ್ದು, ಕಳೆದ 22 ವರ್ಷಗಳಲ್ಲಾದ ಕನಿಷ್ಠ ಮತದಾನ ಇದಾಗಿದೆ.
ಚುನಾವಣೆ ಮುಗಿಯುತ್ತಿದ್ದಂತೆಯೇ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು, ಎಲ್ಲಾ, ಸಮೀಕ್ಷೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವ ಭವಿಷ್ಯವನ್ನು ನುಡಿದಿದೆ.
EXIT POLL: ದೆಹಲಿಯಲ್ಲಿ ಎಎಪಿ 3.0 ಸರ್ಕಾರ ಖಚಿತ
ದೆಹಲಿ ಚುನಾವಣೆಯ ಪ್ರಚಾರದಲ್ಲಿ ಆರೋಪ, ಪ್ರತ್ಯಾರೋಪಗಳು ಮುಗಿಲು ಮುಟ್ಟಿದ್ದವು. ಆಮ್ ಆದ್ಮಿ ಮತ್ತು ಬಿಜೆಪಿಯ ಬಿರುಸಿನ ಪ್ರಚಾರದ ನಡುವೆ, ಕಾಂಗ್ರೆಸ್ ಪ್ರಚಾರ ಮಂಕಾಗಿತ್ತು.
ದೆಹಲಿ ಚುನಾವಣೆಯ ಎಕ್ಸಿಟ್ ಪೋಲ್ ಹೊರಬೀಳುತ್ತಿದ್ದಂತೆಯೇ, ಇದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಲಾರಂಭಿಸಿತು. ಅದರಲ್ಲಿ 'ದೆಹಲಿ ಎಕ್ಸಿಟ್ ಪೋಲ್: ಭಾರತ 56, ಇಟೆಲಿ 1, ಪಾಕ್ 13' ಎನ್ನುವ ವಿಚಿತ್ರವಾದ ಟ್ವೀಟ್ ಒಂದಿತ್ತು.
ಚುನಾವಣೋತ್ತರ ಸಮೀಕ್ಷೆ
ದೆಹಲಿ ಚುನಾವಣೆಯ ಫಲಿತಾಂಶ ಮಂಗಳವಾರದಂದು (ಫೆ 11) ಹೊರಬೀಳಲಿದೆ. ಏಳಕ್ಕೂ ಹೆಚ್ಚು ವಾಹಿನಿಗಳು ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಆಮ್ ಆದ್ಮಿ ಪಕ್ಷ ನಿರಾಂತಕವಾಗಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಬಿಜೆಪಿ, ಕಳೆದ ಚುನಾವಣೆಗಿಂತ, ಈ ಬಾರಿ, ತಮ್ಮ ಬಲವೃದ್ದಿಸಿಕೊಳ್ಲಲಿದೆ. ಇನ್ನು, ಕಾಂಗ್ರೆಸ್ ಆಶಾದಾಯಕ ಸಾಧನೆ ಮಾಡುವುದಿಲ್ಲ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಭಾರತ 56, ಇಟೆಲಿ 1, ಪಾಕ್ 13
ದೆಹಲಿ ಚುನಾವಣೆಯ ಸಂಬಂಧ, ದೆಹಲಿ ಎಕ್ಸಿಟ್ ಪೋಲ್: ಭಾರತ 56, ಇಟೆಲಿ 1, ಪಾಕ್ 13' ಎನ್ನುವ ಟ್ವೀಟ್ ಒಂದು ಗಮನ ಸೆಳೆಯುತ್ತಿದೆ. ಇಲ್ಲಿ ಆಮ್ ಆದ್ಮಿ ಪಕ್ಷವನ್ನು ಭಾರತಕ್ಕೆ, ಕಾಂಗ್ರೆಸ್ ಅನ್ನು ಇಟೆಲಿಗೆ ಮತ್ತು ಪಾಕಿಸ್ತಾನವನ್ನು ಬಿಜೆಪಿಗೆ ಹೋಲಿಸಿ, ಮಾಡಲಾಗಿರುವ ಟ್ವೀಟ್ ಇದು. ಪಂಡಿತ್ ನೇತನ್ಯಾಹು ಮಿಶ್ರಾ ಎನ್ನುವ ಅಕೌಂಟಿನಿಂದ ಮಾಡಲಾದ ಈ ಟ್ವೀಟ್, ಸುಮಾರು 1.9 ಸಾವಿರ ಬಾರಿ ರಿಟ್ವೀಟ್ ಆಗಿದೆ.
ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಭಾಷಣ
ದೆಹಲಿ ಚುನಾವಣಾ ಪ್ರಚಾರದಲ್ಲಿ ಬಿಜೆಪಿ, ಸ್ಥಳೀಯ ಸಮಸ್ಯೆಗೆ ಒತ್ತನ್ನು ನೀಡಿದ್ದರೂ, ಪಾಕಿಸ್ತಾನದ ವಿರುದ್ದ ಕೆಂಡಕಾರುತ್ತಲೇ ಬಂದಿತ್ತು. ಇನ್ನು, ಪೂರ್ಣಪ್ರಮಾಣದಲ್ಲಿ ಪ್ರಚಾರಕ್ಕೆ ಇಳಿದಿದ್ದ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ತಮ್ಮ ಭಾಷಣದಲ್ಲಿ ಪಾಕಿಸ್ತಾನವನ್ನು ಉಲ್ಲೇಖಿಸದೇ ಇದ್ದರೆ, ಅವರಿಗೆ ಮಾಡಿದ ಭಾಷಣ ಪೂರ್ಣವಾಗಿಲ್ಲ ಎನ್ನುವಂತೆ ಇರುತ್ತೆ ಎನ್ನುವಂತೆ, ಪಾಕಿಸ್ತಾನವನ್ನು ನೆನಪಿಸಿಕೊಳ್ಳುತ್ತಿದ್ದರು. ಹಾಗಾಗಿ, ಮೇಲಿನ ಟ್ವೀಟ್ ನಲ್ಲಿ ಬಿಜೆಪಿಗೆ ಪಾಕ್ ಗೆ ಹೋಲಿಸಲಾಗಿತ್ತು.
ಫೆಬ್ರವರಿ ಹನ್ನೊಂದಕ್ಕೆ ಫಲಿತಾಂಶ
ಇನ್ನು, ಕೇಜ್ರಿವಾಲ್, ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ಒಂದು ಹಂತದಲ್ಲಿ, ಪಾಕ್ ಸಚಿವರೊಬ್ಬರು ಮೋದಿ ಬಗ್ಗೆ ಮಾತನಾಡಿದಾಗ, 'ಮೋದಿ ಈ ದೇಶದ ಪ್ರಧಾನಿ, ನನ್ನ ಪ್ರಧಾನಿ ಕೂಡಾ. ನಮ್ಮ ಸಮಸ್ಯೆಗಳನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. ನೀವು ಮೂಗು ತೂರಿಸುವ ಅಗತ್ಯವಿಲ್ಲ" ಎಂದಿದ್ದರು. ಬಿಜೆಪಿಯವರು, ಕೇಜ್ರಿವಾಲ್ ಅವರನ್ನು ಉಗ್ರ, ಹಿಂದೂ ವಿರೋಧಿ ಎಂದು ಸಂಭೋಷಿಸಿದ್ದರು. ಇದಕ್ಕಾಗಿ, ಆಮ್ ಆದ್ಮಿ ಪಕ್ಷವನ್ನು ಟ್ವೀಟ್ ನಲ್ಲಿ ಭಾರತಕ್ಕೆ ಹೋಲಿಸಲಾಗಿದೆ.