ದೆಹಲಿ ಚುನಾವಣೆ: ಸದ್ಯಕ್ಕೆ ಕೇಜ್ರಿವಾಲ್ ಮೇಲುಗೈ, ಆದರೆ ಅಂಡರ್ ಕರೆಂಟ್!
ರಾಜಧಾನಿ ದೆಹಲಿಯಲ್ಲಿ ಹಿಡಿತ ಸಾಧಿಸಬೇಕೆನ್ನುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗಿರುವ ದೊಡ್ಡ ಕನಸು. ಆದರೆ, ಆಮ್ ಆದ್ಮಿ ಪಕ್ಷದ ಕ್ರೇಜ್ ಸದ್ಯಕ್ಕೆ ಹೇಗಿದೆ ಎಂದರೆ, ಕಾಂಗ್ರೆಸ್ ಬೋರ್ಡಿನಲ್ಲಿ ಇದೆಯೋ, ಇಲ್ಲವೋ ಎನ್ನುವುದು ಮತದಾರರಿಗೆ ಆವಾಗಾವಾಗ, ಅಲ್ಲಲ್ಲಿ ಕಾಡುತ್ತಿರುವ ಪ್ರಶ್ನೆ.
ಈ ಬಾರಿಯ ದೆಹಲಿ ಚುನಾವಣೆಯ ಇದುವರೆಗಿನ ಟ್ರೆಂಡ್/ಸಮೀಕ್ಷೆ ಸಂಪೂರ್ಣವಾಗಿ ಆಮ್ ಆದ್ಮಿ ಪಕ್ಷದ ಪರವಾಗಿದೆ. "ನಾಳೆ (ಫೆ 5) ಮಧ್ಯಾಹ್ನ ಒಂದು ಗಂಟೆಯೊಳಗೆ ನಿಮ್ಮ ಸಿಎಂ ಅಭ್ಯರ್ಥಿಯನ್ನು ಘೋಷಿಸಿ ನೋಡೋಣ" ಎಂದು ಕೇಜ್ರಿವಾಲ್, ಬಿಜೆಪಿಗೆ ಸವಾಲು ಎಸೆದಿದ್ದಾರೆ.
ದೆಹಲಿಯ ಮತದಾರ ಬಹಳ ಪ್ರಬುದ್ದ ಎನ್ನುವುದಕ್ಕೆ ಕಳೆದ ಮತ್ತು ಈ ವರ್ಷ ನಡೆದ ಲೋಕಸಭಾ ಚುನಾವಣೆ ಮತ್ತು ಹಿಂದಿನ ಅಸೆಂಬ್ಲಿ ಚುನಾವಣೆ ಉದಾಹರಣೆಯಾಗಬಲ್ಲದು. ಅಸೆಂಬ್ಲಿ ಚುನಾವಣೆಗೆ ಸ್ಥಳೀಯ ಸಮಸ್ಯೆ ಕಡೆ ಒತ್ತು ಕೊಡುವ ಮತದಾರ, ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಏಳು ಕ್ಷೇತ್ರವನ್ನು ಬಿಜೆಪಿಗೆ ತಟ್ಟೆಯಲ್ಲಿ ತಾಂಬೂಲ ಕೊಟ್ಟಿದ್ದಾಗಿದೆ.
ಮನೆ ಬಾಗಿಲಿಗೆ ಪಡಿತರ ವಿತರಣೆ, ದೆಹಲಿಗಾಗಿ ಎಎಪಿ ಪ್ರಣಾಳಿಕೆ
ದೆಹಲಿಯ ಎಲ್ಲಾ ಎಪ್ಪತ್ತು ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್-ಆಪ್ ನಡುವೆ ತ್ರಿಕೋಣ ಸ್ಪರ್ಧೆಯಿದ್ದರೂ, ನೇರ ಸ್ಪರ್ಧೆಯಿರುವುದು ಬಿಜೆಪಿ-ಆಪ್ ನಡುವೆ. ಕಾಂಗ್ರೆಸ್ಸಿಗರು, ಚುನಾವಣಾ ಸಭೆಯಲ್ಲಿ ಮತ್ತದೇ "ಮೋದಿಯವರು ಬಿಟ್ಟರೆ, ತಾಜ್ ಮಹಲ್ ಕೂಡಾ ಮಾರುತ್ತಾರೆ" ಎನ್ನುವ ಹೇಳಿಕೆ ನೀಡುವ ಮೂಲಕ, ಸ್ಥಳೀಯ ಸಮಸ್ಯೆಗೆ ಒತ್ತು ನೀಡದೇ ತಪ್ಪು ಮಾಡುತ್ತಿದ್ದಾರೆ. ಆದರೆ, ಬಿಜೆಪಿ, ಗ್ರೌಂಡ್ ರಿಯಾಲಿಟಿ ಅರ್ಥಮಾಡಿಕೊಂಡಂತೆ ಕಾಣುತ್ತಿರುವುದು, ಅದರ ಪ್ರಚಾರದ ವೈಖರಿ, ಹಾಗಾಗಿಯೇ ಅಂಡರ್ ಕರೆಂಟ್ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಿರುವುದು...
ಕರ್ನಾಟಕ ಮೂಲದವರ ಮನೆಮನೆಗೆ ಸಂಸದೆ ಶೋಭಾ ಕರಂದ್ಲಾಜೆ
ಬಿಜೆಪಿ ಈ ಚುನಾವಣೆಯನ್ನು ಎಷ್ಟು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಎನ್ನುವುದಕ್ಕೆ ಒಂದು ಉದಾಹರಣೆ. ದೆಹಲಿಯಲ್ಲಿರುವ ಕರ್ನಾಟಕ ಮೂಲದವರ ಮನೆಮನೆಗೆ ಸಂಸದೆ ಶೋಭಾ ಕರಂದ್ಲಾಜೆಯಾದಿಯಾಗಿ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ನೂತನ ಅಧ್ಯಕ್ಷ ಜೆ.ಪಿ.ನಡ್ಡಾಗೆ ಇದು ಪೂರ್ಣ ಪ್ರಮಾಣದ ಚುನಾವಣೆ ಬೇರೆ. ಅವರ ರಾಜಕೀಯ ಇತಿಹಾಸ ಅಷ್ಟೇನೂ ಕಳಪಯೇನೂ ಅಲ್ಲ..
ಚುನಾವಣೆಯ ನಂತರ ಅಮಿತ್ ಶಾ, ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕಿತ್ತು
ದೆಹಲಿ ಚುನಾವಣೆಯ ನಂತರ ಅಮಿತ್ ಶಾ, ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕಿತ್ತು ಎನ್ನುವ ಸಣ್ಣಮಟ್ಟಿನ ಅಸಮಾಧಾನ ಬಿಜೆಪಿ ಮುಖಂಡರು/ಕಾರ್ಯಕರ್ತರಲ್ಲಿತ್ತು. ಆದರೆ, ನಡ್ಡಾ ಅಧ್ಯಕ್ಷರಾಗಿದ್ದರೂ, ಅಮಿತ್ ಶಾ ಅವರ ಕಂಟ್ರೋಲ್ ಹೇಗಿರುತ್ತದೆ ಅಂದರೆ, ಒಂದು ಲೆಕ್ಕದಲ್ಲಿ ದೇವೇಗೌಡ್ರ ಕುಟುಂಬದ ಹೊರತಾಗಿ ಜೆಡಿಎಸ್ ಅಧ್ಯಕ್ಷ ಸ್ಥಾನ ಬೇರೆಯವರಿಗೆ ಕೊಟ್ಟರೆ ಹೇಗಿರುತ್ತೆ, ಹಾಗೇ...
ಮೋದಿ ಒಂದು ದಿನ ತಾಜ್ಮಹಲನ್ನೂ ಮಾರುತ್ತಾರೆ: ರಾಹುಲ್ ಗಾಂಧಿ ವಾಗ್ದಾಳಿ
ದೆಹಲಿಯಲ್ಲಿ ಅಂಡರ್ ಕರೆಂಟ್
ದೆಹಲಿಯಲ್ಲಿ ಅಂಡರ್ ಕರೆಂಟ್ ಎನ್ನುವ ಪದವನ್ನು ಬಳಸಲಾಗಿದೆ ಎಂದರೆ, ಕೆಲವೇ ಕೆಲವು ದಿನಗಳ ಹಿಂದೆ ಎಪ್ಪತ್ತಕ್ಕೆ ಎಪ್ಪತ್ತೂ ಸೀಟನ್ನು, ಆಪ್ ಕ್ಲೀಪ್ ಸ್ವೀಪ್ ಮಾಡುತ್ತೆ ಎನ್ನುವ ವಾತಾವರಣ, ಈಗ ಎಪ್ಪತ್ತರಿಂದ 55ಕ್ಕೆ ಇಳಿದಿದೆ (ಸಮೀಕ್ಷೆ ಪ್ರಕಾರ). ಚುನಾವಣೆಗೆ ಇನ್ನೂ ಮೂರು ದಿನ ಬಾಕಿಯಿದೆ. ಕಾಂಗ್ರೆಸ್ ಮುಕ್ತ್ ಭಾರತ್ ಮಾಡಲು ಹೋಗಿ, ಬಿಜೆಪಿ ಮುಕ್ತ್ ಭಾರತ್ ನತ್ತ ದೇಶದ ಭೂಪಟ ಸಾಗುತ್ತಿದೆ. ಹಾಗಾಗಿ, ಡು ಆರ್ ಡೈ, ಬಿಜೆಪಿ, ಪ್ರಚಾರದ ಕೊನೆಯ ಹಂತದಲ್ಲಿ ಭರ್ಜರಿಯಾಗಿ ಇಳಿಯುವುದಂತೂ ನಿಶ್ಚಿತ, ಯಾಕೆಂದರೆ, ಬೇರೆ ದಾರಿಯಿಲ್ಲ...
ಕಳೆದ ಪ್ರಣಾಳಿಕೆಯಲ್ಲಿ ಆಪ್ ಹೇಳಿದ್ದು
ಕಳೆದ ಪ್ರಣಾಳಿಕೆಯಲ್ಲಿ ಆಪ್ ಹೇಳಿದಂತೆ, ಶಿಕ್ಷಣ, ವಿದ್ಯುತ್, ನೀರಿನ ವಿಚಾರದಲ್ಲಿ ಒಂದು ಹಂತಕ್ಕೆ ತನ್ನ ಮಾತನ್ನು ಉಳಿಸಿಕೊಂಡಿದೆ. ಆದರೆ, ಬಿಜೆಪಿ, ವೈಫೈ, ಸಿಸಿಟಿವಿ ಕ್ಯಾಮರಾ ದೆಹಲಿಯಲ್ಲಿ ಹುಡುಕಾಡುತ್ತಿದೆ. ಬಿಜೆಪಿಯ ಸಾಮಾಜಿಕ ತಾಣ, ಆಪ್ ಮುಖಂಡರು ಐದು ವರ್ಷದ ಹಿಂದೆ ಹೇಳಿದ್ದೇನು, ಈಗ ಹೇಳುತ್ತಿರುವುದೇನು ಎನ್ನುವುದನ್ನು ವಿಡಿಯೋ ಸಮೇತ ಎರ್ರಾಬಿರ್ರಿಯಾಗಿ ಸಾಮಾಜಿಕ ತಾಣದಲ್ಲಿ ಹರಿಯ ಬಿಡುತ್ತಿದ್ದಾರೆ.
ಕುತಕುತ ಕುದಿಯುತ್ತಿರುವ ಕುಲುಮೆಯದು,
ಆದರೆ, ಒಂದಂತೂ ಗಮನಿಸಬೇಕಾದ ವಿಚಾರ, ರಾಷ್ಟ್ರೀಯ ನೊಂದಾಣಿ, ಪೌರತ್ವ ತಿದ್ದುಪಡಿ. ಇದೂ ಒಂದು ರೀತಿಯಲ್ಲಿ ಸ್ಥಳೀಯ ಸಮಸ್ಯೆ ಕೂಡಾ.. ಇದನ್ನು ವಿರೋಧಿಸುವವರು ಎಷ್ಟು ಜನ ಇದ್ದರೋ, ಸಮರ್ಥಿಸಿಕೊಳ್ಳುವವರೂ ಅಷ್ಟೇ ಇದ್ದಾರೆ. ದೆಹಲಿಯ ಚುನಾವಣೆ ಮೇಲ್ನೋಟಕ್ಕೆ ಕಾಣುವಷ್ಟು ಆಮ್ ಆದ್ಮಿ ಪಕ್ಷಕ್ಕೆ ಸುಲಭವಲ್ಲ. ಕುತಕುತ ಕುದಿಯುತ್ತಿರುವ ಕುಲುಮೆಯದು, ಅಮಿತ್ ಶಾ ಮತ್ತು ಕೇಜ್ರಿವಾಲ್ ಹೇಗೆ ಇಲ್ಲಿ ಕಡೇ ಗಳಿಗೆಯಲ್ಲಿ ಬೇಳೆ ಬೇಯಿಸಿಕೊಳ್ಳುತ್ತಾರೆ ಎನ್ನುವುದು ತಿಳಿದುಕೊಳ್ಳಲು ಇನ್ನೊಂದು ವಾರ ಅಷ್ಟೇ ಸಾಕು...