ದೆಹಲಿಯಲ್ಲಿ ಇನ್ನೊಂದು ಉಚಿತ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಕೇಜ್ರಿವಾಲ್
ನವದೆಹಲಿ, ಜೂನ್ 23:ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಪ್ರಸ್ತಾಪದ ಬಳಿಕ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಸರ್ಕಾರದಿಂದಲೇ ಭರಿಸುವ ಹೊಸ ಯೋಜನೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಕಂಗೆಟ್ಟಿರುವ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷ ಉಚಿತ ಯೋಜನೆ ಸರಣಿಯನ್ನೇ ಆರಂಭಿಸುವಂತಿದೆ.
ಈ ಬಾರಿ ಯುವಜನತೆಯನ್ನು ಗುರಿಯಾಗಿಸಿಕೊಂಡು, ಹೊಸ ಯೋಜನೆಗಳಿಗೆ ಕೈ ಹಾಕಲಾಗಿದೆ. 1-12ನೇ ತರಗತಿವರೆಗಿನ ಸರ್ಕಾರಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಿಳಿಸಿದ್ದಾರೆ.
ಹಾಗೆಯೇ ನೀಟ್, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ರಾಜ್ಯ ಸರ್ಕಾರದಿಂದಲೇ ನೀಡಲಾಗುತ್ತಿದೆ. ಶೇ.80ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು 2,500 ರೂಗೆ ಏರಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಮಹಿಳೆಯರಿಗೆ ಬಸ್, ಮೆಟ್ರೋ ಪ್ರಯಾಣ ಉಚಿತ: ಕೇಜ್ರಿವಾಲ್ ಹೊಸ ಪ್ಲ್ಯಾನ್
ಒಟ್ಟಾರೆ ಹರಸಾಹಸಗಳ ಮೂಲಕ ದೆಹಲಿಯಲ್ಲಿ ಮತ್ತೆ ಜನಪ್ರಿಯತೆ ಗಳಿಸುವುದು ಕೇಜ್ರಿವಾಲ್ ಉದ್ದೇಶವಾಗಿದೆ. 2020ರ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು ಕೇಜ್ರಿವಾಲ್ ಗುರಿಯಾಗಿದೆ.