ಸಚಿವ ಹರ್ದೀಪ್ ಪತ್ನಿ ವಿರುದ್ದದ ಟ್ವೀಟ್ ಅಳಿಸಲು ಸಾಮಾಜಿಕ ಕಾರ್ಯಕರ್ತನಿಗೆ ಕೋರ್ಟ್ ಆದೇಶ
ನವದೆಹಲಿ, ಜು.13: ಮಾಜಿ ರಾಜತಂತ್ರಜ್ಞೆ ಲಕ್ಷ್ಮಿ ಪುರಿ ವಿರುದ್ಧದ ಟ್ವೀಟ್ಗಳನ್ನು ತಕ್ಷಣ ಅಳಿಸಿಹಾಕುವಂತೆ ಸಾಮಾಜಿಕ ಕಾರ್ಯಕರ್ತನಿಗೆ ಸಾಕೇತ್ ಗೋಖಲೆಗೆ ಇಂದು ದೆಹಲಿ ಹೈಕೋರ್ಟ್ ಆದೇಶಿಸಿದೆ. ಹಾಗೆಯೇ ನ್ಯಾಯಾಲಯವು ಲಕ್ಷ್ಮಿ ಪುರಿ ಹಾಗೂ ಪತಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿರುದ್ಧ "ಹಗರಣ" ಸಂಬಂಧಿತ ಟ್ವೀಟ್ಗಳನ್ನು ಪೋಸ್ಟ್ ಮಾಡುವುದಕ್ಕೆ ಈ ಮೂಲಕ ತಡೆಯೊಡ್ಡಿದೆ.
ಗೋಖಲೆ ಜೂನ್ 13 ಮತ್ತು ಜೂನ್ 26 ರಂದು ತಮ್ಮ ಟ್ವೀಟ್ಗಳಲ್ಲಿ ಲಕ್ಷ್ಮಿ ಪುರಿ ಹಾಗೂ ಪತಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿರುದ್ದ "ಹಗರಣ" ದ ಆರೋಪ ಮಾಡಿದ್ದರು. ಸ್ವಿಟ್ಜರ್ಲ್ಯಾಂಡ್ನಲ್ಲಿ ಮನೆ ಖರೀದಿ ಮಾಡುವ ನಿಟ್ಟಿನಲ್ಲಿ ಲಕ್ಷ್ಮಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಟ್ವೀಟ್ನಲ್ಲಿ ದೂರಿದ್ದರು.
ಕೇಂದ್ರದ ವಿರುದ್ದ ದೆಹಲಿ ಕೋರ್ಟ್ ಮೆಟ್ಟಿಲೇರಿದ ನ್ಯೂಜಿಲೆಂಡ್ ಯೂಟ್ಯೂಬರ್ನ ಪತ್ನಿ
ಈ ಬೆನ್ನಲ್ಲೇ ಲಕ್ಷ್ಮಿ ಪುರಿ ತನ್ನ ವಿರುದ್ದ ಮಾಡಿರುವ ಟ್ವೀಟ್ ಅನ್ನು ಅಳಿಸಿಹಾಕಲು ಆದೇಶಿಸುವಂತೆ ಹಾಗೂ ರು. 5 ಕೋಟಿ ಮಾನಹಾನಿ ಪರಿಹಾರ ಒದಗಿಸಬೇಕೆಂದು ಕೋರಿ ಕಾನೂನು ಸಂಸ್ಥೆ ಕರಂಜವಾಲಾ ಆಂಡ್ ಕಂ ಮೂಲಕ ಕೋರ್ಟ್ ಮೆಟ್ಟಿಲೇರಿದ್ದರು. ಲಕ್ಷ್ಮಿ ಪುರಿ ಸಲ್ಲಿಸಿದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶವನ್ನು ಜಾರಿಗೊಳಿಸಿದೆ.
ಲಕ್ಷ್ಮಿ ಪುರಿ ತನ್ನ ಮನವಿಯಲ್ಲಿ, "ಸುಳ್ಳು ಮಾಹಿತಿ ಆಧರಿಸಿ ಮಾನಹಾನಿಕರ ಮತ್ತು ದುರುದ್ದೇಶಪೂರ್ವಕ ಟ್ವೀಟ್ಗಳನ್ನು ಮಾಡಲಾಗಿದೆ. ನನ್ನ ವಿರುದ್ಧದ ಆರೋಪಗಳು ಆಧಾರ ರಹಿತ. ಸ್ಪಷ್ಟನೆ ನೀಡಿದ್ದರೂ ಗೋಖಲೆ ಸುಳ್ಳು ಆರೋಪ ಮಾಡುತ್ತಲೇ ಇದ್ದಾರೆ," ಎಂದು ಹೇಳಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪತ್ರಕರ್ತ ಸಾಕೇತ್ ಗೋಖಲೆಗೆ ಟ್ವೀಟ್ಗಳನ್ನು ಅಳಿಸಿಹಾಕಲು ಆದೇಶ ಮಾಡಿದೆ. ಒಂದು ವೇಳೆ ಗೋಖಲೆ ಟ್ವೀಟ್ ಅಳಿಸಲು ವಿಫಲವಾದರೆ ಟ್ವಿಟರ್ ಸಂಸ್ಥೆ ಖುದ್ದಾಗಿ ಅವುಗಳನ್ನು ತೆಗೆದುಹಾಕಬೇಕೆಂದು ನ್ಯಾಯಮೂರ್ತಿ ಸಿ ಹರಿ ಶಂಕರ್ ಆದೇಶಿಸಿದಿದ್ದಾರೆ.
ಹಾಗೆಯೇ ಈ ನ್ಯಾಯಾಲಯದ ಮುಂದಿನ ಆದೇಶಗಳು ಬಾಕಿ ಉಳಿದಿವೆ. ಈ ಹಿನ್ನೆಲೆ ಪುರಿ ಮತ್ತು ಪತಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ವಿಷಯಗಳನ್ನು ಪ್ರಕಟಿಸದಂತೆಯೂ ಗೋಖಲೆಗೆ ನಿರ್ಬಂಧ ವಿಧಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 10ರಂದು ನಡೆಯಲಿದೆ.
ಮುಖ್ಯ ಮೊಕದ್ದಮೆಗೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಗೂ ಮುನ್ನ ಅಂದರೆ ನಾಲ್ಕು ವಾರದೊಳಗೆ ಪ್ರತಿಕ್ರಿಯಿಸಲು ಕಾಲಾವಕಾಶ ನೀಡಿದೆ.
(ಒನ್ಇಂಡಿಯಾ ಸುದ್ದಿ)