ರಾಜ್ಯಸಭೆ ಸುದ್ದಿ: ಲಡಾಖ್ ಗಡಿ ಸ್ಥಿತಿ ಬಗ್ಗೆ ರಾಜನಾಥ್ ಸಿಂಗ್ ಸಂದೇಶ
ನವದೆಹಲಿ, ಫೆಬ್ರವರಿ.11: ಭಾರತವು ಜಾಗತಿಕ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿಯುತ ಪರಿಸ್ಥಿತಿ ಕಾಯ್ದುಕೊಳ್ಳುವುದಕ್ಕೆ ಸದಾ ಬದ್ಧವಾಗಿರುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಲಡಾಖ್ ಗಡಿ ಪ್ರದೇಶದ ಸ್ಥಿತಿಗತಿಯ ಬಗ್ಗೆ ಮಾತನಾಡಿದ ಅವರು, ಭಾರತವು ದ್ವಿಪಕ್ಷೀಯ ಸಂಬಂಧವನ್ನು ಉಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತದೆ ಎಂದರು. ದೇಶದ ಸಾರ್ವಭೌಮತ್ವದ ವಿಷಯ ಬಂದಾಗ ನಮ್ಮ ಯೋಧರು ಎಂಥದ್ದೇ ಸವಾಲನ್ನು ಎದುರಿಸಲು ಸಿದ್ಧರಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಚೀನಾ ಎದೆಯಲ್ಲಿ ನಡುಕ ಹುಟ್ಟಿಸುತ್ತೆ ಭಾರತದ 'ಇದೊಂದು' ನಿರ್ಧಾರ!
ಚೀನಾದ ಜೊತೆಗಿನ ನಿರಂತರ ಸಂಧಾನ ಮಾತುಕತೆಯಿಂದಾಗಿ ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಬೇರ್ಪಡಿಸುವಿಕೆಯ ಒಪ್ಪಂದವಾಗಿದೆ. ಈ ಒಪ್ಪಂದದ ನಂತರ, ಭಾರತ-ಚೀನಾ ಹಂತ ಹಂತವಾಗಿ ಸಮನ್ವಯದಿಂದ ನಿಯೋಜಿಸಲ್ಪಟ್ಟಿರುವ ಸೇನೆಯನ್ನು ಹಿಂತೆಗೆದುಕೊಳ್ಳಲಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಸೇನೆ ಹಿಂತೆಗೆದುಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಗೆ
ಭಾರತ ಮತ್ತು ಚೀನಾದ ಪ್ಯಾಂಗೊಂಗ್ ಸರೋವರದ ಉತ್ತರ-ದಕ್ಷಿಣ ದಂಡೆಯ ಕುರಿತು ನಾವು ಸಂಧಾನ ಮಾತುಕತೆ ನಡೆಸಲಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ ನಿಯೋಜನೆ ಬಗ್ಗೆ ಕೆಲವು ಸಮಸ್ಯೆಗಳು ಇನ್ನೂ ಬಗೆಹರಿಸಬೇಕಿದೆ. ಸಂಪೂರ್ಣ ಸೇನಾ ನಿಷ್ಕ್ರಿಯತೆ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳುವುದಕ್ಕೆ ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಭಾರತ-ಚೀನಾ ಗಡಿ ಪ್ರದೇಶದಲ್ಲಿರುವ ಲಡಾಖ್ ಗಡಿ ಪ್ರದೇಶದಲ್ಲಿ ಚೀನಾ ಸಾಕಷ್ಟು ಪ್ರಮಾಣದ ಮದ್ದು-ಗುಂಡುಗಳನ್ನು ಸಂಗ್ರಹಿಸಿಟ್ಟಿದೆ. ಚೀನಾಗೆ ಪ್ರತಿಯಾಗಿ ಭಾರತವು ಕೂಡಾ ಹಲವು ಪ್ರದೇಶಗಳಲ್ಲಿ ಶಿಬಿರಗಳನ್ನು ನಿರ್ಮಿಸಿದೆ ಎಂದು ರಾಜ್ಯಸಭೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದರು.
ಗಡಿ ಸಮಸ್ಯೆ ಪರಿಹಾರಕ್ಕೆ ಭಾರತದಿಂದ ಮೂರು ತತ್ವಗಳು
2020ರಲ್ಲಿ ನಾವು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಚೀನಾದೊಂದಿಗೆ ಸಂಬಂಧವನ್ನು ಉಳಿಸಿಕೊಂಡಿದ್ದೇವೆ. ಸಂಧಾನ ಮಾತುಕತೆ ಸಮಯದಲ್ಲಿ ನಾವು ಮೂರು ತತ್ವಗಳ ಆಧಾರದ ಮೇಲೆ ಈ ಗಡಿ ಸಮಸ್ಯೆಗೆ ಪರಿಹಾರವನ್ನು ಬಯಸುತ್ತೇವೆ ಎಂದು ಚೀನಾಗೆ ತಿಳಿಸಿದ್ದೇವೆ. ಮೊದಲಿಗೆ ಎರಡೂ ಪಕ್ಷಗಳು ಎಲ್ಎಸಿಯನ್ನು ಒಪ್ಪಿಕೊಳ್ಳಬೇಕು ಮತ್ತು ಅದನ್ನು ಗೌರವಿಸಬೇಕು. ಎರಡನೆಯದಾಗಿ ಯಾವುದೇ ಕಡೆಯಿಂದ ಏಕಪಕ್ಷೀಯವಾಗಿ ಸ್ಥಾನಮಾನ ಬದಲಾಯಿಸುವ ಪ್ರಯತ್ನ ಮಾಡಬಾರದು. ಮೂರನೆಯದಾಗಿ ಎಲ್ಲಾ ರಾಜಿಗಳನ್ನು ಉಭಯ ರಾಷ್ಟ್ರಗಳು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಸೇನೆ ನಿಷ್ಕ್ರೀಯಗೊಳಿಸಿದ 48 ಗಂಟೆಗಳಲ್ಲಿ ಸಭೆ
ಭಾರತ ಮತ್ತು ಚೀನಾದ ಕಮಾಂಡರ್ ಹಂತದ ಸಭೆಯಲ್ಲಿ ಉಭಯ ರಾಷ್ಟ್ರಗಳು ಪ್ಯಾಂಗಾಂಗ್ ತ್ಸೋ ಗಡಿಯಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಒಪ್ಪಿಗೆಗೆ ಬಂದಿವೆ. ಪ್ಯಾಂಗಾಂಗ್ ತ್ಸೋ ಗಡಿಯ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಸೇನೆ ನಿಷ್ಕ್ರಿಯಗೊಳಿಸಿದ 48 ಗಂಟೆಗಳಲ್ಲಿ ಮತ್ತೊಂದು ಸುತ್ತಿನ ಕಮಾಂಡರ್ ಹಂತದ ಸಭೆಯನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಏಪ್ರಿಲ್ ನಿಂದ ಸೇನಾ ಶಿಬಿರಗಳ ರಚನೆ
ಕಳೆದ 2020ರ ಏಪ್ರಿಲ್ ತಿಂಗಳಿನಿಂದಲೂ ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಶಿಬಿರಗಳನ್ನು ರಚಿಸಿಕೊಳ್ಳಲಾಗಿತ್ತು. ಉಭಯ ರಾಷ್ಟ್ರಗಳ ಸಂಧಾನ ಮಾತುಕತೆ ಬಳಿಕ ಗಡಿಯಲ್ಲಿ ಸೇನಾ ಶಿಬಿರಗಳ ಪುನಾರಚನೆ ಮಾಡಿಕೊಳ್ಳಲಾಗುತ್ತಿದೆ. ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ದಂಡೆಯ ಫಿಂಗರ್ 8ರ ಪೂರ್ವದಲ್ಲಿ ಚೀನಾ ಸೇನೆಯನ್ನು ಇರಿಸಲಿದೆ. ಭಾರತವು ಅದೇ ಪ್ಯಾಂಗಾಂಗ್ ತ್ಸೋ ಸರೋವರದ ಫಿಂಗರ್ 3ರ ಬಳಿ ಶಾಶ್ವತ ನೆಲೆಗಳನ್ನು ಸ್ಥಾಪಿಸಲಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.