ದಿನಕರ್ ವಿರುದ್ಧ ಹೂಡಿದ್ದ ಮಾನನಷ್ಟ ಕೇಸ್ ವಜಾ
ನವದೆಹಲಿ, ಸೆ. 29 : ಕರ್ನಾಟಕದ ಮಾಜಿ ಪೊಲೀಸ್ ಮಹಾನಿರ್ದೇಶಕ ಸಿ ದಿನಕರ್ ವಿರುದ್ಧ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ ಎಂದು ಸೋಮವಾರ ದಿನಕರ್ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕಾಡುಗಳ್ಳ ವೀರಪ್ಪನ್ನಿಂದ ವರನಟ ರಾಜ್ ಕುಮಾರ್ ಅಪಹರಣವಾಗಿ, 108 ದಿನಗಳ ನಂತರ ಸಂಧಾನದ ಮೂಲಕ ಮರಳಿಬಂದ ನಂತರ, ದಿನಕರ್ ಅವರು Veerappan's Prize Catch: Rajkumar ಎಂಬ ಪುಸ್ತಕವನ್ನು ಬರೆದಿದ್ದರು. ದೆಹಲಿಯ ಕೋನಾರ್ಕ್ ಪಬ್ಲಿಕೇಷನ್ ಈ ಪುಸ್ತಕವನ್ನು ಪ್ರಕಟಿಸಿತ್ತು.
ಈ ಪುಸ್ತಕದಲ್ಲಿ, ತಮ್ಮ ವಿರುದ್ಧ ಅವಹೇಳನಕಾರಿಯಾಗಿ ದಿನಕರ್ ಬರೆದಿದ್ದಾರೆ ಎಂದು ಆರೋಪಿಸಿ ಕಾಫಿ ಡೇ ಮಾಲಿಕ ಸಿದ್ಧಾರ್ಥ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪರಿಹಾರವಾಗಿ 50 ಲಕ್ಷ ರು. ಮತ್ತು ಮೇಲ್ಮನವಿಯ ಶುಲ್ಕ 51,164 ರು. ನೀಡಬೇಕೆಂದು ಅವರು ನ್ಯಾಯಾಲಯಕ್ಕೆ ಆಗ್ರಹಸಿದ್ದರು. ಈ ಅರ್ಜಿಯನ್ನು ನ್ಯಾ. ಗೀತಾ ಮಿಟ್ಟಲ್ ಮತ್ತು ನ್ಯಾ. ಜೆ.ಆರ್. ಮಿಧಾ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.
ಪುಸ್ತಕದಲ್ಲಿ, ರಾಜ್ ಕುಮಾರ್ ಬಿಡುಗಡೆಯಾಗಿ ಕೃಷ್ಣ ಸರಕಾರವೇ ವೀರಪ್ಪನ್ ಗೆ ಒತ್ತೆಹಣ ನೀಡಿತ್ತು. ಕೃಷ್ಣ ಅವರು ಅಳಿಯ ಸಿದ್ಧಾರ್ಥ ಮೂಲಕ ಎರಡು ಬಾರಿ 5 ಕೋಟಿ ರು. ನೀಡಿದ್ದರು ಎಂದು ಬರೆದಿದ್ದರು. ರಾಜ್ ಬಿಡುಗಡೆಗಾಗಿ ಒಟ್ಟು 20 ಕೋಟಿ ರು. ನೀಡಿತ್ತು ಎಂದು ದಿನಕರ್ ನಮೂದಿಸಿದ್ದರು. ಈ ಆರೋಪದಿಂದ ತಮ್ಮ ಮಾನನಷ್ಟವಾಗಿದೆ ಎಂದು ಸಿದ್ಧಾರ್ಥ ಕೋರ್ಟಿನ ಮೊರೆ ಹೋಗಿದ್ದರು.
ದಿನಕರ್ ಅವರ ವಿರುದ್ಧ ಸಿದ್ಧಾರ್ಥ ಅವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು 2007ರ ಫೆಬ್ರವರಿಯಲ್ಲಿ ನ್ಯಾ. ಶಿವ ನಾರಾಯಣ ಧಿಂಗ್ರಾ ಅವರು ವಜಾಗೊಳಿಸಿದ್ದರು ಮತ್ತು ಸಿದ್ಧಾರ್ಥ ಅವರಿಗೆ 1 ಲಕ್ಷ ರು. ದಂಡ ವಿಧಿಸಿದ್ದರು. ಇದನ್ನು ಪ್ರಶ್ನಿಸಿ 51,164 ರು. ಪಾವತಿಸಿ ಸಿದ್ಧಾರ್ಥ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ಕೂಡ ವಜಾ ಆಗಿದೆ.
2000ರ ಜುಲೈ 31ರಂದು ಭೀಮನ ಅಮಾವಾಸ್ಯೆಯ ದಿನ ಕಾಡುಗಳ್ಳ ವೀರಪ್ಪನ್ ಗಾಜನೂರಿನಲ್ಲಿದ್ದ ರಾಜ್ ಮನೆಯ ಮೇಲೆ ದಾಳಿ ಮಾಡಿ ರಾಜ್ ಮತ್ತಿತರರನ್ನು ಅಪಹರಿಸಿದ್ದ. 108 ದಿನಗಳ ಕಾಲ ಕಾಡುಮೇಡು ಸುತ್ತಿಸಿ, ನಂತರ ಬಿಡುಗಡೆ ಮಾಡಿದ್ದ. ಈ ಅಪಹರಣ ಮತ್ತು ಬಿಡುಗಡೆಯ ಕುರಿತಂತೆ ಅನೇಕ ಪುಸ್ತಕಗಳು ಕೂಡ ಬಂದಿದ್ದವು.