ದೆಹಲಿ ಹಿಂಸಾಚಾರದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ ಎಷ್ಟು?
ನವದೆಹಲಿ, ಫೆಬ್ರವರಿ.26: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ ಬುಧವಾರ ಮತ್ತೆ ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಗುರು ತೇಜ್ ಬಹದೂರ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಸುನೀಲ್ ಕುಮಾರ್ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು, ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 190ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನೆಲ್ಲ ಗುರು ತೇಜ್ ಬಹದೂರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಧ್ಯರಾತ್ರಿ ದೆಹಲಿ ಹಿಂಸಾಚಾರದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್
ದೆಹಲಿ ಹೈಕೋರ್ಟ್ ಕೂಡಾ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶಿಸಿದೆ. ಮಂಗಳವಾರ ತಡರಾತ್ರಿ ರಿಟ್ ಅರ್ಜಿ ಪರಿಶೀಲಿಸಿದ ನ್ಯಾ.ಮುರಳೀಧರ್, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವುದು ಪ್ರಾಥಮಿಕ ಮತ್ತು ಅಗತ್ಯ ಕ್ರಮವಾಗಿರಲಿ. ನವದೆಹಲಿಯ ಗುರು ತೇಜ್ ಬಹದ್ದೂರ್, ಲೋಕ ನಾಯಕ ಜೈಪ್ರಕಾಶ್ ನಾರಾಯಣ ಅಥವಾ ಮೌಲಾನಾ ಅಜರ್ ಸರ್ಕಾರಿ ಆಸ್ಪತ್ರೆಗಳಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.
ದೆಹಲಿಯ ಈಶಾನ್ಯ ಭಾಗದಲ್ಲಿ ಬಿಗಿ ಭದ್ರತೆ:
ದೆಹಲಿಯ ಈಶಾನ್ಯ ಭಾಗದಲ್ಲಿ ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಿಆರ್ ಪಿಸಿ 144 ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ನಾಲ್ಕು ಕಡೆಗಳಲ್ಲಿ ಕರ್ಫ್ಯೂ ಆದೇಶ ಹೊರಡಿಸಲಾಗಿದೆ.
ಖಜೂರಿ ಖಾಸ್ ಪ್ರದೇಶದಲ್ಲಿ ರಾಪಿಡ್ ಆಕ್ಷನ್ ಫೋರ್ಸ್ ಫ್ಲಾಗ್ ಮಾರ್ಚ್ ನಡೆಸಿತು. ಮೌಜ್ ಪುರ್, ಜಫ್ರಾಬಾದ್, ಮೌಜ್ ಪುರ್ ಚೌಕ್, ಚಾಂದ್ ಬಾಗ್ ಮತ್ತು ಭಜನ್ ಪುರದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.