ಹೈ ಅಲರ್ಟ್: ಭಾರತದಲ್ಲಿ ಇಬ್ಬರಿಗೆ ಕೊರೊನಾ ಅಟ್ಯಾಕ್
ನವದೆಹಲಿ, ಮಾರ್ಚ್ 2: ಜಗತ್ತಿನಾದ್ಯಂತ ತೀವ್ರ ತಲ್ಲಣ ಸೃಷ್ಠಿಸಿರುವ ಕೊರೊನಾ ವೈರಸ್ (ಕೋವಿಡ್ 19) ಕರ್ನಾಟಕದ ನೆರೆಯ ರಾಜ್ಯ ತೆಲಂಗಾಣಕ್ಕೂ ಕಾಲಿಟ್ಟಿದೆ.
ದೆಹಲಿ ಹಾಗೂ ತೆಲಂಗಾಣದಲ್ಲಿ ತಲಾ ಒಂದೊಂದು ಕೊರೊನಾ ಸೋಂಕು ಪೀಡಿತ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಖಚಿತಪಡಿಸಿದೆ. ಇಟಲಿಗೆ ಹೋಗಿ ಬಂದಿದ್ದ ದೆಹಲಿಯ ವ್ಯಕ್ತಿಯೊಬ್ಬ ಹಾಗೂ ದುಬೈಗೆ ಹೋಗಿ ಬಂದಿದ್ದ ತೆಲಂಗಾಣದ ಹೈದರಾಬಾದ್ನ ವ್ಯಕ್ತಿಗೆ ಸೋಂಕು ಇರುವುದು ಖಚಿತಪಟ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಕೊರೊನಾದಿಂದ ಮುಕ್ತಿ ಪಡೆದ ವಿದ್ಯಾರ್ಥಿನಿ; ಇದು ಭಾರತದಲ್ಲಿ ಮೊದಲು!
ಕಳೆದ 15 ದಿನಗಳ ಹಿಂದೆ ಕೇರಳದಲ್ಲಿ ಚೀನಾದಲ್ಲಿ ಇದ್ದು ಬಂದಿದ್ದ ಮೂವರಿಗೆ ಕೊರೊನಾ ಕಾಣಿಸಿಕೊಂಡಿತ್ತು. ಆದರೆ, ಅವರ ರಕ್ತ ಪರೀಕ್ಷೆಯಲ್ಲಿ ಕೊರೊನಾ ದೃಡಪಟ್ಟಿದ್ದಿಲ್ಲ. ಈಗ ಭಾರತದಲ್ಲೂ ಮತ್ತೆರಡು ಹೊಸ ಪ್ರಕರಣಗಳು ವರದಿಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ತೀವ್ರ ಕಟ್ಟೆಚ್ಚರ
ಕೊರೊನಾ ಸೋಂಕಿತ ದೆಹಲಿ ಹಾಗೂ ತೆಲಂಗಾಣದ ಇಬ್ಬರನ್ನೂ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಸದ್ಯ ಅವರ ಪರಿಸ್ಥಿತಿ ಹತೋಟೆಯಲ್ಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸಭೆಯನ್ನು ಎಲ್ಲ ರಾಜ್ಯಗಳೊಂದಿಗೆ ನಡೆಸಲಾಗುವುದು ಎಂದು ಆರೋಗ್ಯ ಸಚಿವಾಲು ತಿಳಿಸಿದೆ.
ಕೇರಳದಲ್ಲಿ ನೆಗಟಿವ್ ಬಂದಿತ್ತು
ಈ ಮೊದಲು ಭಾರತದಲ್ಲಿ ಮೂರು ಕೊರೊನಾ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಚೀನಾಕ್ಕೆ ಹೋಗಿದ್ದ ಮೂವರಲ್ಲಿ ಕೊರೊನಾ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ರಕ್ತ ತಪಾಸಣೆಯ ನಂತರ ನೆಗಟಿವ್ ಬಂದಿತ್ತು. ಆ ಮೂವರು ಇದೀಗ ಕೊರೊನಾದಿಂದ ಮುಕ್ತಿ ಪಡೆದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
3000 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ
ಕಳೆದ ಡಿಸೆಂಬರ್ನಲ್ಲಿ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಮಾರಕ ಕೊರೊನಾ ಕೋವಿಡ್ 19 ಇಲ್ಲಿಯವರೆಗೂ 3000 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಚೀನಾ ಭಾರತ ಸೇರಿದಂತೆ 13 ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಚೀನಾ ಒಂದರಲ್ಲೇ 2800 ಜನ ಮೃತಪಟ್ಟಿದ್ದಾರೆ. ಇದೀಗ ಭಾರತದಲ್ಲೂ ಮತ್ತೆರಡು ಹೊಸ ಪ್ರಕರಣಗಳು ವರದಿಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕೊರೊನಾಕ್ಕೆ ಹೆದರಿ ಆತ್ಮಹತ್ಯೆ
ಕೊರೊನಾ ವೈರಸ್ ಭಾರತದಲ್ಲೂ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಆಂದ್ರಪ್ರದೇಶದ ಚಿತ್ತೂರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಕೊರೊನಾ ಸೋಂಕು ಬಂದಿದೆ ಎಂದು ಹೆದರಿ ಆತ್ಮಹತ್ಯೆಗೆ ಶರಣಾಗಿದ್ದ. ಚಿತ್ತೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು.